09/09/09!: ಅತಿ ವಿಶೇಷ ದಿನ ಒಂಭತ್ತರ ಮಹಿಮೆ!

IFM
ಇಂದಿನ ವಿಶೇಷತೆಯೇನು? ಅಂಥದ್ದೇನು ಇಲ್ಲವಲ್ಲ ಎಂದು ಲೆಕ್ಕಾಚಾರ ಮಾಡಿ ಕಣ್ಣು ಪಿಳಿಪಿಳಿ ಮಾಡಬೇಡಿ. ಇಂದಿನ ದಿನ ಭಾರತೀಯ ಪುರಾಣದ ಪ್ರಕಾರ ಮಹತ್ವದ ದಿನ. ಯಾವುದೇ ಹಬ್ಬ ಹರಿದಿನದಿಂದ ಇದು ಮಹತ್ವ ಪಡೆಯದಿದ್ದರೂ, ಇಂದು ತಾರೀಕು ಒಂಭತ್ತು ಎಂಬುದಕ್ಕೇ ವಿಶೇಷ. ಒಭತ್ತರಲ್ಲಿ ಏನ್ನಪ್ಪಾ ವಿಶೇಷ ಅಂತೀರಾ? ಇಂದು ಸಾಮಾನ್ಯ ಒಂಭತ್ತಲ್ಲ, 2009ನೇ ಇಸವಿಯ ಒಂಭತ್ತನೇ ತಿಂಗಳ ಒಂಭತ್ತನೇ ತಾರೀಕು, ಅರ್ಥಾತ್ 09/09/09!

ಒಂಭತ್ತು ಸಂಖ್ಯೆ ಭಾರತೀಯ ಪುರಾಣದಲ್ಲಿ ಮಹತ್ವ ಪಡೆದ ಸಂಖ್ಯೆ. ಹಿಂದೂ ಧರ್ಮದ ಪ್ರಕಾರ, ಒಂಭತ್ತು ಸಂಖ್ಯೆಯ ಅಧಿಪತಿ ಮಂಗಳ. ಹನುಮಂತನ ಸಂಖ್ಯೆಯೂ ಒಂಭತ್ತೇ.

ಆದಿ ಶಂಕರಾಚಾರ್ಯರು ಒಂಭತ್ತರ ಮಹತ್ವವನ್ನು ಹಿಂದೆಯೇ ಸೌಂದರ್ಯ ಲಹರಿಯಲ್ಲಿ ಹೇಳಿದ್ದರು. ಶಂಕರಾಚಾರ್ಯರ ಪ್ರಕಾರ, ನಾಲ್ಕು ಶಿವ ಚಕ್ರ, ಐದು ಶಕ್ತಿ ಚಕ್ರಗಳು ಸೇರಿ ಒಂಭತ್ತು ಮೂಲ ಪ್ರಕೃತಿಗಳಾಗಿವೆ. ನಮ್ಮದೇ ದೇಹವನ್ನು ನೋಡಿದರೂ, ನವರಂಧ್ರಗಳು ಕಾಣಿಸುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲೂ ಒಂಭತ್ತು ಗ್ರಹಗಳ ಉಲ್ಲೇಖ ಅನಾದಿಕಾಲದಿಂದಲೂ ಬಂದಿವೆ. ಕಾಲವನ್ನು ಒಂಭತ್ತು ವಿಭಾಗಗಳನ್ನಾಗಿ ಅಂದೇ ಮಾಡಿದ್ದರು ಅನ್ನುವುದೂ ಕಾಡೂ ವಿಶೇಷವೇ. ಒಂಭತ್ತು ರತ್ನಗಳು ಅರ್ಥಾತ್ ನವರತ್ನಗಳು, ಒಂಭತ್ತು ದೇವತೆಗಳು, ಒಂಭತ್ತು ರಸಗಳು ಅರ್ಥಾತ್ ನವರತ್ನಗಳು.. ಹೀಗೆ ಎಲ್ಲೆಲ್ಲೂ ಒಂಭತ್ತು ವಿಂಗಡಣೆಗಳೇ ಪುರಾತನ ಕಾಲದಿಂದಲೂ ಹಿಂದೂ ಧರ್ಮದಲ್ಲಿ ಪ್ರಸಿದ್ಧವಾಗಿರುವುದೂ ವೇದ್ಯವಾಗುತ್ತದೆ.

IFM
ಹಾಗಾಗಿ ಇಂದಿನ ದಿನ ಅಂದರೆ 2009ನೇ ಇಸವಿಯ ಒಂಭತ್ತನೇ ತಿಂಗಳ (ಸೆಪ್ಟೆಂಬರ್) ಒಂಭತ್ತನೇ ತಾರಿಕಿನಂದು ರಾಷ್ಟ್ರಕ್ಕೆ ಶುಭಕರ ಹಾಗೂ ಶುಭಸುದ್ದಿಯನ್ನು ತರುತ್ತದೆ ಎಂದೇ ನಂಬಲಾಗಿದೆ. ಪ್ರತಿ ಮನುಷ್ಯನ ಕೆಲಸ ಕಾರ್ಯಗಳ ದೃಷ್ಟಿಯಿಂದಲೂ ಇಂದು ಶುಭಕರ ಎಂದು ಜ್ಯೋತಿಷ್ಯವೂ ವಿವರಿಸುತ್ತದೆ.

ಒಂಭತ್ತರ ಸಂಖ್ಯೆಯ ಬಗ್ಗೆ ತೀರಾ ಸಾಮಾನ್ಯ ನಾಗರಿಕನಿಂದ ಹಿಡಿದು, ಬುದ್ಧಿಜೀವಿಗಳವರೆಗೆ ಎಲ್ಲರಿಗೂ ಕುತೂಹಲವೇ. ತುಂಬ ಓದಿ ತಿಳಿದ ಆಧುನಿಕ ವಿದ್ಯಾವಂತರೂ ಒಂಭತ್ತರ ಮೋಡಿಗೆ ಈಗ ಒಗಾಗಿದ್ದಾರೆ. 9 ಹೆಸರಿನ ಹಿಂದಿ ಚಿತ್ರವೂ ಇಂದು ಬಿಡುಗಡೆಗೊಂಡಿದೆ. ಅಷ್ಟೇ ಅಲ್ಲ, ಹಲವು ಚಿತ್ರಗಳು ಇಂದು ಬಿಡುಗಡೆಗೊಳ್ಳತ್ತಿದ್ದು ಶುಭಫಲಕ್ಕಾಗಿ ಕಾಯುತ್ತಿವೆ. ಹಲವು ಗರ್ಭಿಣಿಯರು ಒಂಭತ್ತನೇ ತಾರೀಕಿನಂದೇ ಹೆರಿಗೆಯಾಗಬೇಕೆಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮಗುವನ್ನು ಹೆರುವ ಮೂಲಕ ಶುಭವಾಗಲೆಂದು ಬಯಸುತ್ತಿದ್ದಾರೆ.

ಹೆರಿಗೆಗಾಗಿ ಕ್ಯೂ: ಮುಂಬೈಯಂತಹ ವಾಣಿಜ್ಯ ನಗರಿಯಲ್ಲೂ ವಿದ್ಯಾವಂತರು ಇಂದು ಹೆರಿಗೆಗಾಗಿ ಕ್ಯೂ ನಿಂತಿದ್ದಾರಂತೆ. ಹಿರಾನಂದನಿ ಆಸ್ಪತ್ರೆಯ ಡಾ.ಅನಿತಾ ಸೋನಿ ಹೇಳುವಂತೆ, ಹಲವು ಗರ್ಭಿಣಿ ಸ್ತ್ರೀಯರು ಇಂದೇ ಸಿಸೇರಿಯನ್ ಮೂಲಕ ಮಗು ಹೊರತೆಗೆಯಬೇಕೆಂದು ಹೇಳಿದ್ದಾರೆ. ಎಲ್ಲವೂ ಇಂದಿನ ಸಂಖ್ಯೆಗಾಗಿ ಎಂದು ಸೋನಿ ವಿವರಿಸುತ್ತಾರೆ.

ಜ್ಯೋತಿಷಿ ಸುನಿಲ್ ಹಾರ್ಲಾಲ್ಕಾ ಹೇಳುವಂತೆ, ಒಂಭತ್ತನೇ ತಾರೀಕಿನ ಇಂದಿನ ದಿನ ಹುಟ್ಟಿದ ಮಕ್ಕಳು ದೇವರ ವರಪ್ರಸಾದವೆಂಬಂತೆ ಭಾವಿಸಲಾಗುತ್ತದೆ. ಈ ಮಕ್ಕಳಿಗೆ ವಿಶೇಷ ದೇಹಶಕ್ತಿ ಇರುತ್ತದೆ. ಭಾವನಾತ್ಮಕವಾಗಿ ಭಾವುಕರಾಗಿದ್ದರೂ, ಈ ಮಕ್ಕಳು ತುಂಬ ಕ್ರಿಯೇಟಿವ್ ಆಗಿರುತ್ತಾರೆ ಎನ್ನುತ್ತಾರೆ.

ಮತ್ತೊಬ್ಬ ಜ್ಯೋತಿಷಿ ಭಾವೇಶ್ ಎನ್.ಪಟ್ನಿ ಹೇಳುವಂತೆ, ಒಂಭತ್ತು ಸಂಖ್ಯೆ ತುಂಬ ವಿಶೇಷವಾದುದು. ಒಂಭತ್ತು ಎಂದರೆ ಸರ್ವೋಚ್ಛ ಸ್ಥಾನ. ಒಂಭತ್ತಕ್ಕಿಂತ ಮಿಗಿಲಾದುದಿಲ್ಲ ಎಂದು ಜ್ಯೋತಿಷ್ಯಶಾಸ್ತ್ರವೇ ಹೇಳಿದೆ. ಈ ಸಂಖ್ಯೆಗೆ ಮಂಗಳ ಅಧಿಪತಿಯಾಗಿದ್ದು, ಇದು ಜೀವನಶಕ್ತಿ, ಮಾನಸಿಕ ಶಕ್ತಿ, ದೇಹಶಕ್ತಿ ಹಾಗೂ ಕ್ರಿಯಾಶೀಲತೆಯ ಸಂಕೇತ. ಒಂಭತ್ತು ಸಂಖ್ಯೆಯನ್ನು ಹೊಂದಿರುವವರು ತುಂಬ ಶಕ್ತಿವಂತರೂ, ಉತ್ಸಾಹಿಗಳೂ ಆಗಿರುತ್ತಾರೆ ಎನ್ನುತ್ತಾರೆ.

ವೆಬ್ದುನಿಯಾವನ್ನು ಓದಿ