18 ವರ್ಷದ ಬಳಿಕ 'ಸೂಪರ್ ಮೂನ್' ಚಂದಿರನನ್ನು ನೋಡಿ!

ND
ಆಗಸದಲ್ಲಿ ಇದೇ ಮಾರ್ಚ್ 19 ರ ಹುಣ್ಣಿಮೆಯ ದಿವಸ ಚಂದ್ರನು ಭೂಮಿಗೆ ಅತ್ಯಂತ ಸಮೀಪದಲ್ಲಿ ಬಂದು ಎಂದಿಗಿಂತ ಬೃಹದಾಕಾರದಲ್ಲಿ ಗೋಚರಿಸುತ್ತಾನೆ. ಚಂದ್ರನು ಭೂಮಿಗೆ ಸಮೀಪದಲ್ಲಿ ಅಂದರೆ 2,21,567 ಮೈಲಿ ದೂರದಲ್ಲಿರುತ್ತಾನೆ. ಈ ಹಿಂದೆ 18 ವರ್ಷಗಳ ಹಿಂದೆ ಈ ರೀತಿ ಚಂದ್ರನು ಭೂಮಿಗೆ ಅತ್ಯಂತ ಸಮೀಪದಲ್ಲಿ ಗೋಚರಿಸಿತ್ತು. ಇನ್ನೂ ಹಿನ್ನೋಟ ಹರಿಸಿದರೆ, ಚಂದ್ರನು 1955, 1974, 1992 ಮತ್ತು 2005 ರಲ್ಲಿ ಭೂಮಿಯ ಸಮೀಪದಲ್ಲಿ ಗೋಚರಿಸಿತ್ತು.

ಆದರೆ ಇವುಗಳಲ್ಲಿ 1992 ರಲ್ಲಿ ಚಂದಿರ ಭೂಮಿಗೆ ಅತಿ ಸಮೀಪಕ್ಕೆ ಬಂದಿದ್ದ. ಆ ಬಳಿಕ ಚಂದ್ರನು ಇಷ್ಟು ಸಮೀಪದಲ್ಲಿ ಗೋಚರಿಸುತ್ತಿರುವುದು ಇದೇ ಶನಿವಾರ. ಭಾರತೀಯ ಕಾಲಮಾನ ರಾತ್ರಿ 8 ಗಂಟೆ 20 ನಿಮಿಷಕ್ಕೆ ಪೂರ್ಣ ಪ್ರಮಾಣದ ಚಂದ್ರನು ಗೋಚರಿಸುತ್ತಾನೆ. ಈ ಹಿಂದೆ ಹುಣ್ಣಿಮೆಯ ದಿವಸ ಗೋಚರಿಸುತ್ತಿದ್ದುಕ್ಕಿಂತಲೂ ಶೇ.30ರಷ್ಟು ಹೆಚ್ಚು ಬೆಳಕು ಹಾಗೂ ಗಾತ್ರದಲ್ಲಿ ಶೇ.15ರಷ್ಟು ಹೆಚ್ಚು ಗಾತ್ರದಲ್ಲಿ ಗೋಚರಿಸುವುದು ಒಂದು ವಿಶೇಷವಾಗಿದೆ. ಅಂದರೆ ಚಂದ್ರನ ಒಟ್ಟು ಗಾತ್ರದಲ್ಲಿ ಶೇ.90 ಪೂರ್ಣಚಂದ್ರ ಕಂಡುಬರುತ್ತದೆ.

ಖಗೋಲ ವಿದ್ಯಮಾನದಲ್ಲಿ ಸೂರ್ಯ, ಚಂದ್ರ ಮತ್ತು ಭೂಮಿಯ ಸಹವರ್ತನೆಯಿಂದ ಅವುಗಳದೇ ಆದ ಪಥಗಳನ್ನು ಹೊಂದಿರುವ ಇವುಗಳ ವಿಶಿಷ್ಟ ಹೊಂದಾಣಿಕೆಯಿಂದ ನಿರ್ದಿಷ್ಟ ಸಮಯಗಳಲ್ಲಿ, ನಿಶ್ಚಿತ ಸಮಯಕ್ಕೆ ಅಮಾವಾಸ್ಯೆ, ಹುಣ್ಣಿಮೆಗಳು ಗೋಚರಿಸುತ್ತವೆ. ಅಮಾವಾಸ್ಯೆಯಂದು ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದು ಒಂದೇ ಸರಳ ರೇಖೆಯಲ್ಲಿರುತ್ತವೆ. ಹಾಗೆಯೇ ಹುಣ್ಣಿಮೆಯಂದು ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಬಂದು ಒಂದೇ ಸರಳ ರೇಖೆಯಲ್ಲಿರುತ್ತವೆ.

ಚಂದ್ರನ ಚಲನೆಯಲ್ಲಿ ವ್ಯತ್ಯಾಸ ಉಂಟಾಗುವಂತೆ ಚಂದ್ರನ ಪಥದಲ್ಲೂ ಭೂಮಿಯ ಸುತ್ತ ಚಲಿಸುವಾಗ ವ್ಯತ್ಯಾಸ ಉಂಟಾಗುತ್ತಿರುತ್ತವೆ. ಚಂದ್ರನು ಭೂಮಿಯ ಉಪಗ್ರಹ. ಹೀಗಾಗಿ ಅದು ಭೂಮಿಯ ಸುತ್ತ ಪರಿಭ್ರಮಿಸುತ್ತಿರುತ್ತದೆ. ಈ ಪರಿಭ್ರಮಣದ ಕಕ್ಷೆಯು ಅಥವಾ ಪಥವು ವೃತ್ತಾಕಾರವಾಗಿಲ್ಲ. ಇದು ದೀರ್ಘ ವೃತ್ತಾಕಾರ ಅಥವಾ ಅಂಡಾಕಾರ ಎನ್ನಬಹುದಾದ ಕಕ್ಷೆ ಆಗಿರುವುದರಿಂದ ಭೂಮಿಗೆ ಸಮೀಪವೇ ಚಂದ್ರ ಕಂಡುಬರುವುದು ಹೊಸತೇನಲ್ಲ.

ಭೂಮಿಯಿಂದ ಚಂದ್ರನ ಅತ್ಯಂತ ದೂರದ ಪಥ 2,53,000 ಮೈಲಿಗಳು ಅಥವಾ 4,10,00 ಕಿ.ಮೀ.ಗಳು. ಈ ವರ್ಷದ ವಿಶೇಷವೆಂದರೆ (ಮಾರ್ಚ್ 19 ರಂದು) ಚಂದ್ರನು ಭೂಮಿಗೆ ಅತೀ ಸಮೀಪದಲ್ಲಿ ಗೋಚರಿಸುವುದು. ಹಾಗೆಯೇ ಇದೇ ಚಂದ್ರನು ಇದೇ ವರ್ಷದ ಅಕ್ಟೋಬರ್ 11/12 ರಂದು ಹುಣ್ಣಿಮೆ ದಿವಸ ಭೂಮಿಗೆ ಅತ್ಯಂತ ದೂರದಲ್ಲಿ (4,06,434 ಕಿ.ಮೀ.) ಗೋಚರಿಸುತ್ತಾನೆ.

ಯಾವುದೇ ಭಯ, ಆತಂಕಗಳಿಲ್ಲ...
ಭೂಮಿಗೆ ಹತ್ತಿರವಾಗುವ ಚಂದ್ರನಿಂದಾಗಿ ಯಾವುದೇ ರೀತಿಯ ಭೂಕಂಪ, ಸುನಾಮಿ ಉಂಟಾಗುವುದಿಲ್ಲವೆಂದು ಈಗಾಗಲೇ ಭೂ ವೈಜ್ಞಾನಿಕ ತಜ್ಞರು ಸ್ಪಷ್ಟನೆ ನೀಡಿರುತ್ತಾರೆ. ಬಹುಷಃ ಹವಾಮಾನ ಸ್ವಲ್ಪ ಬದಲಾವಣೆಯಾಗಬಹುದೆಂದು ಅಭಿಪ್ರಾಯ ಪಟ್ಟಿರುತ್ತಾರೆ. ಭೂಮಿಯ ಮೇಲೆ ಯಾವುದೇ ದುಷ್ಟರಿಣಾಮ ಉಂಟಾಗುವುದಿಲ್ಲ. ಜಪಾನಿನ ಸುನಾಮಿ, ಭೂಕಂಪಕ್ಕೂ ಈ ಚಂದ್ರನು ಭೂಮಿಯ ಹತ್ತಿರ ಬರುವುದಕ್ಕೂ ಯಾವುದೇ ಸಂಬಂಧವಿಲ್ಲ.

ಈ ಹುಣ್ಣಿಮೆಯಂದು ಗ್ರಹಣ ಸಂಭವಿಸದಿರುವುದು ಒಂದು ಒಳ್ಳೆಯ ಸೂಚನೆ. ಒಂದು ವೇಳೆ ಗ್ರಹಣವೇನಾದರೂ ಇದ್ದಿದ್ದರೆ, ಭೂಕಂಪ ಅಥವಾ ಸುನಾಮಿಯಂತಹ ದುಷ್ಪರಿಣಾಮ ಭೂಮಿಗೆ ಉಂಟಾಗಬಹುದಾಗಿತ್ತು. ಈ ಹುಣ್ಣಿಮೆಯಂದು ಚಂದ್ರನು ಹತ್ತಿರವಾಗುವುದರಿಂದ ಸಮುದ್ರವು ಚಂದ್ರನ ಗುರುತ್ವಾಕರ್ಷಣೆಗೆ ಒಳಪಟ್ಟು ಒಂದಿಷ್ಟು ಉಬ್ಬರ ಹೆಚ್ಚಬಹುದಷ್ಟೇ. ಯಾಕೆಂದರೆ ಪ್ರತೀ ಹುಣ್ಣಿಮೆಯಲ್ಲಿ ಕೂಡ ಚಂದ್ರನ ಉಬ್ಬರ ಹೆಚ್ಚಿರುತ್ತದೆ. ಈ ಬಾರಿ ಚಂದ್ರನು ಭೂಮಿಗೆ ಒಂದಿಷ್ಟು ಹೆಚ್ಚು ಸಮೀಪಕ್ಕೆ ಬಂದಿರುವುದರಿಂದ ಈ ಉಬ್ಬರವೂ ಅಲ್ಪ ಮಟ್ಟದಲ್ಲಿ ಹೆಚ್ಚಬಹುದೇ ಹೊರತು, ಸುನಾಮಿಯಂತಹಾ ಆತಂಕ, ನೈಸರ್ಗಿಕ ಪ್ರಕೋಪಗಳ ಭೀತಿ ಬೇಕಾಗಿಲ್ಲ.

ನಿರ್ಭಯವಾಗಿ ಚಂದ್ರನನ್ನು ಹತ್ತಿರದಿಂದ ನೋಡಿ, ಆನಂದಿಸಿ!

- ಆರ್. ಸೀತಾರಾಮಯ್ಯ
ಜ್ಯೋತೀಷ್ಕರು,
'ಕಮಲ', 5ನೇ ತಿರುವು,
ಬಸವನಗುಡಿ,
ಶಿವಮೊಗ್ಗ - 577 201
ಮೊ: 94490 48340
ಪೋನ್: 08182-227344

ವೆಬ್ದುನಿಯಾವನ್ನು ಓದಿ