ಯಶ್ ಚೋಪ್ರಾ ತೀರಿಹೋದರು ಎಂಬ ಕಾರಣಕ್ಕೆ ಹುಟ್ಟುಹಬ್ಬ ಆಚರಿಸದಿರುವುದು ಎಷ್ಟು ಸರಿ ಎಂಬುದು ಪಮೇಲಾ ಚೋಪ್ರಾ ಅವರ ಪ್ರಶ್ನೆ. ಹೀಗಾಗಿ ಯಶ್ ಅವರ ನೆನಪಿನಲ್ಲಿ ಶುಕ್ರವಾರ ವಿಶೇಷವಾದ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಶ್ರೀದೇವಿ, ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ, ಪ್ರೀತಿ ಜಿಂಟಾ, ಕತ್ರಿನಾ ಕೈಫ್ ಮೊದಲಾದವರೆಲ್ಲಾ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಭಾರತೀಯ ಸಿನೆಮಾದಲ್ಲಿ ಭಾರತೀಯ ವಸ್ತ್ರವೈಭವವನ್ನು ಹೊಸತನದಿಂದ ತೋರಿಸಿದ್ದು ಯಶ್. ಅವರಿಷ್ಟದಂತೆ ವಸ್ತ್ರವಿನ್ಯಾಸಕಿಯರೊಂದಿಗೆ ದಿವಾ ನಿ ಎಂಬ ಬ್ರ್ಯಾಂಡ್ ಒಂದನ್ನು ಹೊಸದಾಗಿ ಪರಿಚಯಿಸಲಾಯಿತು. ಸೀರೆ ಹಾಗೂ ಭಾರತೀಯ ಉಡುಗೆ ತೊಟ್ಟಿದ್ದ ಬೆಡಗಿಯರು ರ್ಯಾಂಪ್ ಮೇಲೆ ನಡೆದು ಕಾರ್ಯಕ್ರಮವನ್ನು ಮತ್ತಷ್ಟು ಚಂದಗಾಣಿಸಿದರು.
ಯಶ್ಗೆ ಹೆಣ್ಣುಮಕ್ಕಳೆಂದರೆ ಅಪಾರ ಗೌರವವಿತ್ತು. ದೇವತೆ ಎಂದೇ ಅವರನ್ನು ಸಂಬೋಧಿಸುತ್ತಿದ್ದರು. ಯಶ್ ಅವರ ಎಲ್ಲಾ ಚಿತ್ರಗಳಲ್ಲಿ ಹೆಣ್ಣುಮಕ್ಕಳ ಉಡುಗೆಗಳನ್ನು ಅವರೇ ವಿನ್ಯಾಸ ಮಾಡುತ್ತಿದ್ದರು. ಪ್ರೀತಿ, ಗೌರವ, ವಾತ್ಸಲ್ಯ, ತಾಳ್ಮೆ ಇರುವ ಹೆಣ್ಣುಮಕ್ಕಳ ಪಾತ್ರವನ್ನೇ ಸೃಷ್ಟಿಸುತ್ತಿದ್ದುದು ಅವರ ವಿಶೇಷ ಎಂದಿದ್ದಾರೆ ಪಮೇಲಾ ಚೋಪ್ರಾ. ಈ ಸಂಗ್ರಹವನ್ನು ಮಾರುಕಟ್ಟೆಗೆ ಪರಿಚಯಿಸಲು ಯಶ್ ಅವರ ಹುಟ್ಟುಹಬ್ಬಕ್ಕಿಂತ ಉತ್ತಮವಾದ ದಿನ ಇನ್ನೊಂದು ಸಿಗದು ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ಪಮೇಲಾ ಹೇಳಿದರು. ಬಾಲಿವುಡ್ ಶೈಲಿಯ ವಸ್ತ್ರವೈಭವವನ್ನು ಅವರಿಷ್ಟದ ನಾಯಕಿಯರು ಪ್ರಸ್ತುತಪಡಿಸಿದರೆ, ಶಾರೂಖ್ ಅವರೊಂದಿಗೆ ಹೆಜ್ಜೆ ಹಾಕಿದರು. ಯಶ್ ಚೋಪ್ರಾ ಇಲ್ಲದೆ ವರ್ಷ ಕಳೆದದ್ದು ಹೇಗೆ ಎಂಬ ಪ್ರಶ್ನೆಗೆ ಕಣ್ಣೀರೇ ಅವರ ಉತ್ತರವಾಗಿತ್ತು.