54ನೇ ಹುಟ್ಟುಹಬ್ಬಕ್ಕೆ ಶುಭಾಶಯ ಪತ್ರದಲ್ಲೇ ಹಾರೈಕೆ

ಬುಧವಾರ, 31 ಜುಲೈ 2013 (10:05 IST)
PTI
ಜೈಲಿನಲ್ಲಿರುವ ಬಾಲಿವುಡ್ ನಟ ಸಂಜಯ್ ದತ್ ಸೋಮವಾರ 54ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಆದರೆ ಅವರು ಯರವಾಡ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಇರುವುದರಿಂದ ಅಭಿಮಾನಿಗಳು, ಸ್ನೇಹಿತರು, ಕುಟುಂಬ ಸ್ನೇಹಿತರಿಗೆ ಅವರನ್ನು ಭೇಟಿಯಾಗಿ ಶುಭಾಶಯ ಕೋರಲು ಸಾಧ್ಯವಾಗಿಲ್ಲ. ಹಾಗಾಗಿ ರಣಬೀರ್ ಕಪೂರ್, ರಾಜ್ಕುಮಾರ್ ಹಿರಾನಿ ಮತ್ತು ಬಂಟಿ ವಾಲಿಯಾ ಸೇರಿದಂತೆ ಬಿ-ಟೌನ್ನ ಅನೇಕ ಮಂದಿ ಅವರಿಗೆ ಪತ್ರ ಬರೆದು ಶುಭಾಷಯ ಕೋರಿದ್ದಾರೆ.

ಬಹುತೇಕರು ಪ್ರತಿ ವರ್ಷದಂತೆ ಅವರಿಗೆ ವಿಶ್ ಮಾಡಲು ಕಾಯುತ್ತಿದ್ದರು. ಆದರೆ ಅವರು ಜೈಲಿನಲ್ಲಿ ಇರುವುದರಿಂದ ಮುಖತಃ ಭೇಟಿ ಸಾಧ್ಯವಿಲ್ಲ. ಹೀಗಾಗಿ ಚಿತ್ರರಂಗದ ಅನೇಕ ಮಂದಿ ಪತ್ರ ಬರೆಯುವ ಮೂಲಕ ಸಂಜಯ್ಗೆ ವಿಶ್ ಮಾಡಿದ್ದಾರೆ. ಅವರೊಂದಿಗೆ ಅಭಿಪ್ರಾಯ ಹಂಚಿಕೊಳ್ಳಲು ಇರುವ ಏಕೈಕ ಮಾರ್ಗ ಇದು ಮಾತ್ರ ಎಂದು ಮೂಲಗಳು ತಿಳಿಸಿವೆ.

ಸಂಜಯ್ರನ್ನು ತಿಂಗಳಿಗೊಮ್ಮೆ ಭೇಟಿ ಆಗಲು ಅನುಮತಿ ಇದೆ. ಅವರ ಹುಟ್ಟುಹಬ್ಬದಂದು ಕುಟುಂಬದವರಿಗೂ ಭೇಟಿ ಮಾಡುವ ಅವಕಾಶ ಕಡಿಮೆ. ಮುಂಬರುವ ಆಗಸ್ಟ್ನಲ್ಲಿ ಅವರನ್ನಿನ್ನು ಭೇಟಿ ಮಾಡಬಹುದು. ಈ ಮಧ್ಯೆ ಜುಲೈ 22ರಂದು ಮಾನ್ಯತಾ ಅವರ ಹುಟ್ಟುಹಬ್ಬವಿತ್ತು. ಅಂದು ಸಂಜಯ್ ದತ್ ಜೈಲಿನ ಉದ್ಯಾನದಲ್ಲಿದ್ದ ಗುಲಾಬಿ ಕಿತ್ತು ಅದನ್ನು ಪುಸ್ತಕದ ಮಧ್ಯೆ ಇಟ್ಟು ಒಣಗಿಸಿ ಕವನ ಬರೆದು ಪತ್ನಿಗೆ ಕಳುಹಿಸಿದ್ದರಂತೆ!

ವೆಬ್ದುನಿಯಾವನ್ನು ಓದಿ