ಮುಂಬೈ: ಬಹುಭಾಷಾ ಗಾಯಕ ಸೋನು ನಿಗಂ ಆರ್ ಸಿಬಿ ಕಪ್ ಗೆದ್ದ ಮೇಲೆಯೇ ದೇಶದಲ್ಲಿ ಅವಾಂತರಗಳಾಗುತ್ತಿವೆ ಎಂದು ಟ್ವೀಟ್ ಮಾಡಿದ್ದಾರೆ ಎಂದು ಸುದ್ದಿಯಾಗಿದೆ. ಆದರೆ ಅಸಲಿ ಸತ್ಯ ಇಲ್ಲಿದೆ.
ಕೆಲವು ದಿನಗಳ ಹಿಂದೆ ಸೋನು ನಿಗಂ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಅವರ ಹೆಸರಿನಲ್ಲಿ ನಕಲಿ ಖಾತೆಗಳು ಇಲ್ಲ ಸಲ್ಲದ ಸಂದೇಶ ಕಳುಹಿಸಿ ಅದನ್ನು ಸೋನು ನಿಗಂ ಮುಖಕ್ಕೆ ಬಳಿಯಲು ನೋಡುತ್ತಿವೆ.
ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಂ ಕನ್ನಡ ಹಾಡು ಹಾಡಿ ಎಂದು ಬೇಡಿಕೆಯಿಟ್ಟ ಯುವಕರಿಗೆ ಈ ರೀತಿ ಕನ್ನಡ ಕನ್ನಡ ಎಂದು ಭಾಷೆ ಬಗ್ಗೆ ಬಡಿದಾಡಿಕೊಳ್ಳುತ್ತಿರುವ ಕಾರಣಕ್ಕೇ ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದರು. ಅವರು ನಿಮ್ಮ ಭಾಷೆ ಕೇಳಲಿಲ್ಲ ಎಂಬುದನ್ನು ಮರೆಯಬೇಡಿ ಎಂದಿದ್ದರು. ಅವರ ಹೇಳಿಕೆ ವಿವಾದಕ್ಕೆ ಕಾರಣವಾಯಿತು. ಕೊನೆಗೆ ಅವರನ್ನು ಕನ್ನಡ ಚಿತ್ರರಂಗದಿಂದಲೇ ಬ್ಯಾನ್ ಮಾಡಲಾಯಿತು.
ಇದಾದ ಬಳಿಕ ಸೋನು ನಿಗಂ ಹೆಸರಿನ ಟ್ವೀಟ್ ಖಾತೆಯೊಂದರಿಂದ ಕನ್ನಡ ಸ್ಟಾರ್ ನಟರಿಗೆ ಹಿಂದಿಗೆ ತಮ್ಮ ಸಿನಿಮಾ ಡಬ್ ಮಾಡುವುದು ಬೇಡ ಎಂದು ಹೇಳುವ ಧೈರ್ಯವಿದೆಯೇ ಎಂದು ಸಂದೇಶ ಬಂದಿತ್ತು. ಇದನ್ನು ಸೋನು ನಿಗಂ ಅವರೇ ಹೇಳಿದ್ದು ಎಂದುಕೊಂಡು ಸಾಕಷ್ಟು ಜನ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಸೋನು ನಿಗಂ ಅವರೇ ನನಗೆ ಯಾವುದೇ ಟ್ವೀಟ್ ಖಾತೆಯಿಲ್ಲ. ನನ್ನನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟಬೇಡಿ. ಇದು ಯಾರೋ ನನ್ನ ಹೆಸರಿನ ನಕಲಿ ಖಾತೆಯಿಂದ ಮಾಡಿದ ಟ್ವೀಟ್ ಎಂದು ಸ್ಪಷ್ಟನೆ ಕೊಡಬೇಕಾಗಿ ಬಂತು.
ಇದೀಗ ಮತ್ತೊಮ್ಮೆ ಸೋನು ಆರ್ ಸಿಬಿ ವಿರುದ್ಧ ಮಾಡಿದ್ದಾರೆ ಎನ್ನಲಾದ ಟ್ವೀಟ್ ವೈರಲ್ ಆಗಿದೆ. ಆದರೆ ಸೋನು ನಿಗಂ ಯಾವುದೇ ಟ್ವೀಟ್ ಖಾತೆ ಹೊಂದಿಲ್ಲ. ಅವರದೇ ಹೆಸರಿನಲ್ಲಿ ಟ್ವೀಟ್ ಖಾತೆ ಹೊಂದಿರುವ ವ್ಯಕ್ತಿ ಆರ್ ಸಿಬಿ ವಿರುದ್ಧ ಟ್ವೀಟ್ ಮಾಡಿದ್ದಾರೆ. ಆದರೆ ಇದನ್ನು ಸೋನು ಅವರೇ ಮಾಡಿದ್ದು ಎಂದುಕೊಂಡು ಅನೇಕರು ಅವರ ವಿರುದ್ಧ ಕಿಡಿ ಕಾರುತ್ತಿದ್ದಾರೆ.