ಕ್ರೈಸ್ತ ಸಂನ್ಯಾಸಿಯರ ಬಗ್ಗೆ ನಿಮ್ಮ ನಿಲುವೇನು? ಎಂದು ಕೇಳಿದ್ದಕ್ಕೆ ಪತ್ರಕರ್ತರ ಮೇಲೆ ಕಿಡಿಕಾರಿದ ಮೋಹನ್‌ ಲಾಲ್

ಬುಧವಾರ, 19 ಸೆಪ್ಟಂಬರ್ 2018 (07:31 IST)
ಕೇರಳ : ಅತ್ಯಾಚಾರ ಪ್ರಕರಣವೊಂದರ ಕುರಿತಾಗಿ ಪತ್ರಕರ್ತರ ಮೇಲೆ ಕಿಡಿಕಾರಿದ ನಟ ಮೋಹನ್‌ ಲಾಲ್ ಇದೀಗ ಪತ್ರಕರ್ತರ ಬಳಿ ಕ್ಷಮೆಯಾಚಿಸಿದ್ದಾರೆ.


ಶನಿವಾರ ಕೊಚ್ಚಿಯಲ್ಲಿ , ವಿಶ್ವಶಾಂತಿ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಲಾದ ಕೇರಳ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿಗಳನ್ನು ರವಾನಿಸುವ ಕಾರ್ಯಕ್ರಮದಲ್ಲಿ ನಟ ಮೋಹನ್‌ಲಾಲ್ ಪಾಲ್ಗೊಂಡಿದ್ದರು. ಈ ಸಂದರ್ಭ ಪತ್ರಕರ್ತರೊಬ್ಬರು, ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಷಪ್‌ರನ್ನು ಬಂಧಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕ್ರೈಸ್ತ ಸನ್ಯಾಸಿನಿಯರ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದ್ದರು.


ಈ ಪ್ರಶ್ನೆಯಿಂದ ಕೋಪಗೊಂಡ ಮೋಹನ್‌ಲಾಲ್, ಇಂತಹ ಒಳ್ಳೆಯ ಕಾರ್ಯ ಮಾಡುತ್ತಿರುವಾಗ ಈ ರೀತಿಯ ಪ್ರಶ್ನೆ ಕೇಳಲು ನಿಮಗೆ ನಾಚಿಕೆಯಾಗೋಲ್ಲವೇ ಎಂದು ಪತ್ರಕರ್ತರ ಮೇಲೆ ಕಿಡಿಕಾರಿದ್ದಾರೆ. ಅಲ್ಲದೆ, ಕ್ರೈಸ್ತ ಸನ್ಯಾಸಿನಿಯರ ಪ್ರಕರಣಕ್ಕೂ ನೆರೆ ಪರಿಹಾರ ಕಾರ್ಯಕ್ರಮಕ್ಕೂ ಏನಾದರೂ ಸಂಬಂಧವಿದೆಯೇ ಎಂದೂ ಪ್ರಶ್ನಿಸಿದ್ದಾರೆ.


ಈ ಹೇಳಿಕೆಯ ಬಗ್ಗೆ  ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಇದೀಗ ನಟ ಮೋಹನ್‌ಲಾಲ್ ಫೇಸ್‌ಬುಕ್‌ನಲ್ಲಿ ಈ ಹೇಳಿಕೆಯ ಬಗ್ಗೆ ಪತ್ರಕರ್ತರಲ್ಲಿ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ನೆರೆ ಪರಿಹಾರ ವಿತರಣೆಯ ಕುರಿತು ನಾನು ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡುತ್ತಿರುವಾಗ ಈ ಪ್ರಶ್ನೆ ಎತ್ತಲಾಗಿದೆ. ಇದು ಆ ಸಂದರ್ಭಕ್ಕೆ ಪೂರಕವಾಗಿರಲಿಲ್ಲ. ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣ ಈಗ ಖಂಡಿತಾ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವ ವಿಷಯವಾಗಿದೆ. ಆದರೆ ಆಗ ನಾನು ಬೇರೆಯೇ ಮನಸ್ಥಿತಿಯಲ್ಲಿದ್ದೆ. ಆದ್ದರಿಂದ ಇಂತಹ ಪ್ರತಿಕ್ರಿಯೆ ಬಂದಿದೆ ಎಂದು ಮೋಹನ್‌ಲಾಲ್ ಸ್ಪಷ್ಟನೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ