ಮದುವೆಯಾಗಿ ಹೊಸ ಜೀವನವನ್ನು ಪ್ರಾರಂಭಿಸುವ ಹೊಂಗನಸನ್ನು ಹೊತ್ತು ಹಸೆಮಣೆ ಏರಿದ್ದ ಆ ಯುವಕ ನಿರೀಕ್ಷಿಸಿರದಿದ್ದು ನಡೆದು ಹೋಯಿತು. ಹರಿದ್ವಾರದ ಸಮೀಪದ ಆವದಿಪುರ್ಹಾಲ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಧುವರರಿಬ್ಬರು ಹೂಮಾಲೆಯನ್ನು ಬದಲಾಯಿಸಿಕೊಂಡು ವಿವಾಹದ ಪ್ರತಿಜ್ಞಾ ವಿಧಿಗಳನ್ನು ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಸಿಡಿಗುಂಡಿನಂತೆ ಅಲ್ಲಿಗೆ ಬಂದ ಯುವತಿಯೊಬ್ಬಳು ಎಲ್ಲರ ಎದುರು ವರನ ಕಪಾಳಕ್ಕೆ ಅನೇಕ ಬಾರಿ ಬಾರಿಸಿದಳು. ಆತ ಹಲವು ವರ್ಷಗಳಿಂದ ತನ್ನ ಜತೆ ಪ್ರೇಮ ಸಂಬಂಧವನ್ನು ಹೊಂದಿದ್ದು ಕಾನೂನು ಪ್ರಕಾರ ಮದುವೆ ಕೂಡ ಆಗಿದ್ದಾನೆ. ಮತ್ತೆ ಬೇರೆ ಹುಡುಗಿಯ ಜತೆ ಮದುವೆಯಾದರೆ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತೇನೆ ಎಂದು ಆಕೆ ಬೆದರಿಸಿದ್ದಾಳೆ.
ಆಕೆ ಮದುವೆ ಮಂಟಪದಿಂದ ಹೊರಗೆ ಹೋದ ನಂತರ ಕೂಡ ಸನ್ನಿವೇಶ ವರನ ಪರವಾಗಿ ಬದಲಾಗಲಿಲ್ಲ. ಆಕೆ ಹೋದಳು, ಇನ್ನೇನು ಮದುವೆ ಮುಂದುವರೆಸೋಣ ಎಂದು ಹಿರಿಯರು ಮುಂದಾದರೆ ವಧು ಮಾತ್ರ ಪ್ರೀತಿಸಿದ ಹೆಣ್ಣಿಗೆ ಮೋಸ ಮಾಡಿದವನನ್ನು ನಾನು ಮದುವೆಯಾಗಲಾರೆ ಎಂದು ಹಠ ಹಿಡಿದಿದ್ದಾಳೆ.
ಹೀಗಾಗಿ ಎರಡು ಕಡೆಯ ಕುಟುಂಬದವರು ಪ್ರಕರಣವನ್ನು ಪಂಚಾಯತ್ ಮುಂದಿಟ್ಟಿದ್ದಾರೆ.
ಪಂಚಾಯತ್ ಅಲ್ಲಿ ವರನ ಕಡೆಯವರು ತಮಗೆ ಮತ್ತೆ ಹೆಚ್ಚಿನ ಅವಮಾನವಾಗದಂತೆ ಏನಾದರೂ ಪರಿಹಾರ ತಿಳಿಸಿ ಎಂದು ಕೇಳಿಕೊಂಡಿದ್ದಾರೆ. ವಿಚಾರಣೆ ನಡೆಸಿದ ಪಂಚಾಯತ್ ವಧುವಿಗೆ ವರನ ಕಿರಿಯ ಸಹೋದರನ ಜತೆ ಮದುವೆ ಮಾಡಿಸುವಂತೆ ಸೂಚಿಸಿದೆ.