ನವದೆಹಲಿ: ಸ್ವಂತವಾದ ಮನೆಯನ್ನು ಹೊಂದಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ, ಮನೆಯನ್ನು ಖರೀದಿಸುವ ಆಸಕ್ತರು ಮುಂಗಡ ಹಣ ನೀಡಿದರೂ ಬಿಲ್ಡರ್ಗಳ ವಂಚನೆಯಿಂದ ಸರಿಯಾದ ಸಮಯಕ್ಕೆ ಅಪಾರ್ಟ್ಮೆಂಟ್ ದೊರೆಯದೆ ಕಂಗಾಲಾದ ಘಟನೆಗಳು ಸಾವಿರಾರು. ಆದರೆ, ಇದೀಗ ನಿಗದಿತ ಅವಧಿಯಲ್ಲಿ ಮನೆ ಗ್ರಾಹಕರ ವಶಕ್ಕೆ ನೀಡದಿದ್ದಲ್ಲಿ ಬಿಲ್ಡರ್ಗಳು ಶೇ.11 ರಷ್ಟು ಬಡ್ಡಿ ಹಣ ಪಾವತಿಸಬೇಕಾಗುತ್ತದೆ.
ಕಳೆದ ವಾರ, ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆ ತಂದು ವಸತಿ ಕಾಯ್ದೆ ಯೋಜನೆ ಅಡಿಯಲ್ಲಿ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರಕಾರ, ಐದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರಡು ನಿಯಮಗಳನ್ನು ಅನಾವರಣಗೊಳಿಸಿದೆ.
ವಸತಿ ಯೋಜನೆ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ, ಕರುಡು ನಿಯಮಗಳನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಚಂಡೀಘಢ್, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು ಮತ್ತು ಲಕ್ಷದ್ವೀಪದ ಜನರಿಂದ ಎರಡು ವಾರಗಳಲ್ಲಿ ಆಕ್ಷೇಪಣೆ ಮತ್ತು ಸಲಹೆಗಳನ್ನು ನೀಡುವಂತೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.