ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ `ಮುಂಗಾರು ಮಳೆ’ ಜೋಡಿ ನಂತರ ಗಾಳಿಪಟ ಸಿನಿಮಾದಲ್ಲಿ ಒಂದಾಗಿದ್ದ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಹ್ಯಾಟ್ರಿಕ್ಕಿಟ್ ಎಂದು ಬಣ್ಣಿಸಲಾಗುತ್ತಿರುವ ಚಿತ್ರ `ಮುಗುಳ್ನಗೆ’. ಈ ಚಿತ್ರ ತಂಡವೀಗ ಮಲ್ಲಿಗೆಯ ನಗರ, ಅರಮನೆಗಳ ನಗರ ಎಂದು ಖ್ಯಾತಿ ಪಡೆದಿರುವ ಮೈಸೂರಿಗೆ ಮೊದಲ ಹಂತದ ಚಿತ್ರೀಕರಣಕ್ಕೆ ಹೊರಟಿದೆ.
ಸೋಮವಾರದಿಂದ ಎಂಟು ದಿವಸಗಳ ಚಿತ್ರೀಕರಣ ನಡೆಸಿ ವಾಪಾಸಗಲಿದೆ `ಮುಗುಳ್ನಗೆ’ ತಂಡ. ಯಶಸ್ ಫಿಲ್ಮ್, ಯೋಗರಾಜ್ ಮೂವೀಸ್ ಹಾಗೂ ಗೋಲ್ಡನ್ ಮೂವೀಸ್ ಜಂಟಿಯಾಗಿ ನಿರ್ಮಾಣಕ್ಕೆ ಮುಂದಾಗಿರುವ ಈ `ಮುಗುಳ್ನಗೆ’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಜನಪ್ರಿಯ ನಟಿ ಅಮೂಲ್ಯ, ಆಶಿಕ (`ಕ್ರೇಜಿ ಬಾಯ್’ ನಾಯಕಿ) ನಿಕಿತ ನಾರಾಯಣ್ (`ಮಡಮಕ್ಕಿ’ ನಾಯಕಿ) ನಾಯಕಿಯರಾಗಿದ್ದಾರೆ.
ಸಲಾಂ ಈ ಚಿತ್ರದ ಪ್ರಮುಖ ನಿರ್ಮಾಪಕರು. ಚಿತ್ರದ ಪ್ರತಿಯೊಂದು ಪಾತ್ರವೂ ನಗುವಿನಲ್ಲೇ ತೊಡಗಿಕೊಂಡಿರುವ ಹಾಗೆ ಚಿತ್ರಕತೆಯಲ್ಲಿ ಪ್ರಯತ್ನಿಸಿದ್ದಾರೆ ಜನಪ್ರಿಯ ನಿರ್ದೇಶಕ ಯೋಗರಾಜ ಭಟ್ಟರು. ಅನಂತ್ ನಾಗ್, ಅಚ್ಯುತ್ಕುಮಾರ್ ಹಾಗೂ ಇನ್ನಿತರರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಐದು ಹಾಡುಗಳು ಸಿದ್ಧವಾಗುತ್ತಿದೆ. ಸುಜ್ಞಾನ್ ಮೂರ್ತಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.