ಇನ್ನು ಕಾಯಲ್ಲ, ಬೇಗ ಮದುವೆ ಆಗ್ತೀನಿ: ನಿಖಿತಾ

SUJENDRA
ಅಪ್ಪ ಬದುಕಿರುವಾಗಲೇ ಮದುವೆ ಮಾತುಕತೆಗಳು ನಡೆದಿದ್ದವು. ಆದರೆ ಅವರು ತೀರಿಕೊಂಡಿದ್ದರಿಂದ ಎಲ್ಲವೂ ನನೆಗುದಿಗೆ ಬಿದ್ದಿತ್ತು. ಈಗ ಮತ್ತೆ ಅವರ ವರ್ಷದ ಕಾರ್ಯಕ್ರಮ ಮುಗಿದ ನಂತರ ಮತ್ತೆ ಮದುವೆ ಮಾತುಕತೆ ಮುಂದುವರಿಯುತ್ತದೆ. ಖಂಡಿತಾ ಬೇಗ ಮದುವೆಯಾಗುತ್ತೇನೆ ಎಂದಿದ್ದಾರೆ ನಿಖಿತಾ.

ದರ್ಶನ್ ಕುಟುಂಬದಲ್ಲಿ ಬಿರುಗಾಳಿಯೆಬ್ಬಿಸಿದ ಆರೋಪದಿಂದ ನಲುಗಿ ಹೋಗಿದ್ದ ಹುಡುಗಿ ಈಗ ಸ್ಟ್ರಾಂಗ್ ಆಗಿ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಸದ್ಯದ ಮಟ್ಟಿಗೆ ಗೆದ್ದರೂ, ಈ ಹೋರಾಟಗಳು ನಿಖಿತಾಗೆ ಸಾಕಾದಂತಿದೆ. ಬಣ್ಣದ ಬದುಕು ಅವರಿಗೆ ಹಲವು ಪಾಠಗಳನ್ನು ಕಲಿಸಿದೆ. ನಂಬಿದವರೇ ಕೈಕೊಟ್ಟಿರುವುದಂತೂ ತುಂಬಾ ನೋವು ಕೊಟ್ಟಿದೆ. ಹೀಗಿರುವಾಗ ಮದುವೆ ಯೋಚನೆ ಮಾಡುತ್ತಿದ್ದಾರೆ.

ಕಳೆದ ವರ್ಷ ಇದೇ ಹೊತ್ತಿಗೆ ನಿಖಿತಾ ಮದುವೆ ಸುದ್ದಿಗಳು ಹರಿದಾಡುತ್ತಿದ್ದವು. ನಿಖಿತಾರನ್ನು ದರ್ಶನ್ ಮದುವೆ ಮಾಡಿಕೊಂಡರಂತೆ. ಪ್ರಿನ್ಸ್ ಚಿತ್ರದ ಶೂಟಿಂಗ್‌ನಲ್ಲೇ ಮದುವೆ ನಡೆಯಿತಂತೆ. ಅದು ಸಿನಿಮಾಕ್ಕಾಗಿ ನಡೆದ ಮದುವೆಯಲ್ಲ, ನೈಜ ಮದುವೆ ಎಂದೆಲ್ಲ ಸುದ್ದಿಯಾಗಿತ್ತು.

ಆದರೆ ಅವೆಲ್ಲವನ್ನೂ ತಳ್ಳಿ ಹಾಕಿದ್ದ ನಿಖಿತಾ, ಈಗ ನಾನು ಅಪ್ಪನನ್ನು ಕಳೆದುಕೊಂಡ ನೋವಿನಲ್ಲಿದ್ದೇನೆ. ಸದ್ಯಕ್ಕೆ ಮದುವೆ ಯೋಚನೆಯಿಲ್ಲ. ಇನ್ನು ಅಮ್ಮ ನೋಡಿದ ಹುಡುಗನನ್ನೇ ಮದುವೆಯಾಗುತ್ತೇನೆ ಎಂದಿದ್ದರು. ಈಗಲೂ ಅದನ್ನೇ ಹೇಳುತ್ತಿದ್ದಾರೆ. ಆಯ್ಕೆ ನನ್ನದಲ್ಲ, ಅಮ್ಮನದು. ಆಕೆ ಹೇಳುವ ಹುಡುಗನ ಜತೆ ಹಸೆಮಣೆಯೇರುತ್ತೇನೆ. ಎಲ್ಲರಿಗೂ ಹೇಳುತ್ತೇನೆ ಅಂತಿದ್ದಾರೆ.

ಪ್ರಸಕ್ತ ಮಂಜು ಮಸ್ಕಲ್ ಮಟ್ಟಿ ನಿರ್ದೇಶನದ 'ಗೌರಿಪುತ್ರ' ಚಿತ್ರದ ಶೂಟಿಂಗ್‌ಗಾಗಿ ಬೆಂಗಳೂರಿಗೆ ಬಂದಿರುವ ನಿಖಿತಾ, ವಿವಾದಗಳ ನಂತರ ಇದೇ ಮೊದಲ ಬಾರಿಗೆ ಮುಕ್ತವಾಗಿ ಮಾಧ್ಯಮಗಳ ಜತೆ ಮಾತನಾಡುತ್ತಿದ್ದಾರೆ.

ದರ್ಶನ್ ವಿವಾದ ಜೋರಾಗಿದ್ದಾಗ, ತಾನು ಆಪ್ತರು ಎಂದು ಭಾವಿಸಿದ್ದ ಕೆಲವರು ಬೆನ್ನಿಗೆ ಚೂರಿ ಹಾಕಿದರು ಎಂದೂ ನಿಖಿತಾ ದೂರಿದ್ದಾರೆ. ಆದರೆ ಅವರು ಯಾರೆಂದು ಹೆಸರು ಹೇಳಿಲ್ಲ. ಜತೆಗಿದ್ದವರೇ ಕೈ ಕೊಟ್ಟರು, ಬಣ್ಣ ಬದಲಾಯಿಸಿದರು ಎಂದಷ್ಟೇ ಹೇಳಿದ್ದಾರೆ.

ಏನೇ ಆಗಲಿ, ವಿವಾದದಿಂದ ನಾನು ಐದು ವರ್ಷಗಳಷ್ಟು ಹೆಚ್ಚು ಪ್ರಬುದ್ಧಳಾಗಿದ್ದೇನೆ. ನನ್ನ ತಾಯಿ ಜತೆಗೆ ಇರದೇ ಇರುತ್ತಿದ್ದರೆ ನಾನು ಬದುಕುವುದು ಸಾಧ್ಯವಾಗುತ್ತಿರಲಿಲ್ಲ. ಅಕ್ಕನ ಬೆಂಬಲವನ್ನು ಮರೆಯಲಾರೆ. ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳೂ ಕೈ ಬಿಡಲಿಲ್ಲ ಎಂದರು.

ವೆಬ್ದುನಿಯಾವನ್ನು ಓದಿ