ಇನ್ನೊಂದು ಜನ್ಮವಿದ್ದರೆ ಕರ್ನಾಟಕದಲ್ಲೇ ಜನಿಸುವೆ: ಎಸ್‌ಪಿಬಿ

ಬುಧವಾರ, 24 ಜುಲೈ 2013 (18:08 IST)
PTI
ಮಧುರ ಮಧುರವೀ ಮಂಜುಳಗಾನ ಎಂಬ 514 ಹಾಡುಗಳುಳ್ಳ ಹಳೇ ಚಿತ್ರಗೀತೆಗಳ ಸಾಹಿತ್ಯ ಪುಸ್ತಕವನ್ನು ಬಿಡುಗಡೆ ಮಾಡಲು ಎಸ್. ಪಿ. ಬಾಲಸುಬ್ರಹ್ಮಣ್ಯಂ ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಸಂಗೀತ ಹಾಗೂ ಕನ್ನಡ ಚಿತ್ರರಂಗದ ಬಗ್ಗೆ ಅವರು ಹೇಳಿದ್ದಿಷ್ಟು...

ಸಂಗೀತ ಯಾರ ಸ್ವಂತದ ಸೊತ್ತೂ ಅಲ್ಲ. ಅದನ್ನು ಜನರ ಹತ್ತಿರಕ್ಕೆ ತಲುಪಿಸುವುದು ಇಂದಿನ ಯುವ ಗಾಯಕರ ಕರ್ತವ್ಯವಾಗಬೇಕು. ಹಾಡುವುದು ಹೊಸ ನಾಯಕನಿಗೋ ಅಥವಾ ಈಗಾಗಲೇ ಪ್ರಸಿದ್ಧವಾಗಿರುವ ನಾಯಕನಿಗೋ ಎಂಬುದು ಮುಖ್ಯವಾಗುವುದಿಲ್ಲ. ಬದಲಾಗಿ ನಮ್ಮ ಗಮನ ಹಾಡುವ ಹಾಡಿನ ಮೇಲೆ ಇರಬೇಕು. ಚಿತ್ರ ಬಿಡುಗಡೆಯಾದ ಬಳಿಕ ಪ್ರೇಕ್ಷಕನಿಗೆ ಆ ಹಾಡು ಎಷ್ಟು ಇಷ್ಟವಾಗುತ್ತದೆ ಎಂಬುದರಲ್ಲಿ ಗಾಯಕನ ಸ್ಟ್ರೆಂಥ್ ಅಡಗಿರುತ್ತದೆ ಎಂದು ಅಭಿಪ್ರಾಯ ಪಟ್ಟರು.

ನಾನು 1966ರಲ್ಲಿ ಗಾಯಕನಾಗಿ ಚಿತ್ರರಂಗಕ್ಕೆ ಬಂದೆ. ನಾನು ಹಾಡಿದ ಎರಡನೇ ಹಾಡು ಕನ್ನಡ ಚಿತ್ರದ್ದು. ಅಂದಿನಿಂದ ಇಂದಿನವರೆಗೆ ನನ್ನನ್ನು ಬೆಳೆಸಿದ ಕನ್ನಡ ಚಿತ್ರರಂಗಕ್ಕೆ ನಾನು ಸದಾ ಋಣಿ. ನನಗೇನಾದರೂ ಇನ್ನೊಂದು ಜನ್ಮ ಅಂತಿದ್ದರೆ ಕರ್ನಾಟಕದಲ್ಲೇ ಹುಟ್ಟುವಾಸೆ ಎಂದರು ಎಸ್ಪಿಬಿ.
ಈ ಸಂಗ್ರಹದಲ್ಲಿರುವ ಹಾಡುಗಳು ಸಂಗೀತ ಕಲಿಯುತ್ತಿರುವ ಉದಯೋನ್ಮುಖ ಪ್ರತಿಭೆಗಳಿಗೆ ದಾರಿದೀಪವಾಗಲಿದೆ. ಗುರುರಾಜ್ ಅವರು ಎರಡು ವರ್ಷಗಳ ಕಾಲ ಶ್ರಮವಹಿಸಿ ಈ ಪುಸ್ತಕ ಹೊರತಂದಿದ್ದಾರೆ. ಇದರಲ್ಲಿ ಹಲವಾರು ಮಹನೀಯರ ಸಹಕಾರವಿದೆ ಎಂದರು ಗುರುರಾಜ್.

ವೆಬ್ದುನಿಯಾವನ್ನು ಓದಿ