ಎಸ್. ನಾರಾಯಣ್ ನಿರ್ದೇಶನದ 'ಬೃಹಸ್ಪತಿ'ಗೆ ಉಪೇಂದ್ರ ನಾಯಕ!

ಸೋಮವಾರ, 29 ಏಪ್ರಿಲ್ 2013 (14:31 IST)
PR
ಕಲಾ ಸಾಮ್ರಾಟ್ ಖ್ಯಾತಿಯ ಎಸ್. ನಾರಾಯಣ್ ಈ ಬಾರಿ ರಿಯಲ್ ಸ್ಟಾರ್ ಉಪೇಂದ್ರ ತಲೆ ಮೇಲೂ ಕೈ ಇಟ್ಟಿದ್ದಾರೆ. ಉಪ್ಪಿ ನಾಯಕನಾಗಿರುವ ಚಿತ್ರವೊಂದನ್ನು ಕೈಗೆತ್ತಿಕೊಳ್ಳಲಿರುವ ಅವರು, ಚಿತ್ರಕ್ಕೆ 'ಬೃಹಸ್ಪತಿ' ಎಂದು ಹೆಸರಿಟ್ಟಿದ್ದಾರೆ!

ಅರೆ, ಮೊನ್ನೆ ತಾನೇ 'ಬ್ರಹ್ಮ' ಎಂಬ ಹೆಸರಿನ ಚಿತ್ರದಲ್ಲಿ ಉಪ್ಪಿ ನಟಿಸುತ್ತಾರೆ ಎಂದು ಸುದ್ದಿಯಾಯ್ತಲ್ವೇ ಎಂದು ಕಾಡಬಹುದು. ಅದೂ ನಿಜ. 'ಬ್ರಹ್ಮ' ಚಿತ್ರವನ್ನು ನಿರ್ದೇಶಿಸುತ್ತಿರುವುದು 'ಚಾರ್‌ಮಿನಾರ್' ನಿರ್ದೇಶಕ ಆರ್. ಚಂದ್ರು. ಇದೇ ಬೇರೆ, ಅದೇ ಬೇರೆ.

'ಛತ್ರಿಗಳು ಸಾರ್ ಛತ್ರಿಗಳು' ಚಿತ್ರ ಹಿಟ್ ಹಾದಿಯಲ್ಲಿ ಸಾಗುತ್ತಿದ್ದಂತೆ ಪುಳಕಿತರಾಗಿರುವ ನಾರಾಯಣ್ 'ಬೃಹಸ್ಪತಿ' ನಿರ್ದೇಶನಕ್ಕೆ ಮುಂದಾಗಿದ್ದಾರೆ. ಉಪ್ಪಿ ಚಿತ್ರವಾಗಿರುವುದರಿಂದ ಅದಕ್ಕೆ ಬೇರೆಯೇ ರೀತಿಯ ಕಥೆ ಬೇಕು. ಅವರ ಬಾಡಿ ಲ್ಯಾಂಗ್ವೇಜ್‌ಗೆ ಹೊಂದಿಕೊಳ್ಳುವ ರೀತಿ ಚಿತ್ರಕಥೆ ಇರಬೇಕು. ಸಾಕಷ್ಟು ಸಿದ್ಧತೆ ಮಾಡುತ್ತಿದ್ದೇನೆ ಎಂದು ನಾರಾಯಣ್ ತಿಳಿಸಿದ್ದಾರೆ.

ನಾರಾಯಣ್ ಈಗಾಗಲೇ ಉಪ್ಪಿಗೆ ಕಥೆ ಹೇಳಿದ್ದಾರಂತೆ. ತುಂಬಾ ಖುಷಿಯಾಗಿರುವ ಉಪ್ಪಿ ಹಿಂದೆ ಮುಂದೆ ನೋಡದೆ ರೈಟ್ ಎಂದಿದ್ದಾರೆ. ಮೊದಲು ಚಂದ್ರು 'ಬ್ರಹ್ಮ', ಅದು ಮುಗಿದ ನಂತರ 'ಬೃಹಸ್ಪತಿ' ಚಿತ್ರೀಕರಣ ಆರಂಭವಾಗುವ ಸಾಧ್ಯತೆಗಳಿವೆ.

ಕನ್ನಡ ಚಿತ್ರರಂಗದ ಬಹುತೇಕ ನಾಯಕರ ಜತೆ ಕೆಲಸ ಮಾಡಿರುವ ನಾರಾಯಣ್, ಇದೀಗ ಉಪ್ಪಿ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ದರ್ಶನ್ ಚಿತ್ರವೊಂದನ್ನು ನಿರ್ದೇಶಿಸುವ ಮಾತುಕತೆ ನಡೆದಿತ್ತಾದರೂ, ಕೊನೆಯ ಹಂತದಲ್ಲಿ ಅದು ಮುರಿದು ಬಿದ್ದಿತ್ತು.

ವೆಬ್ದುನಿಯಾವನ್ನು ಓದಿ