ಕನ್ನಡದಿಂದ ಕಾಣೆಯಾದ ಹರಿಪ್ರಿಯಾ ತೆಲುಗಿನಲ್ಲಿ ರಾಕಿಂಗ್..!

PR
ಕನ್ನಡದ ಹುಡುಗಿ ಹರಿಪ್ರಿಯಾ ಸ್ಯಾಂಡಲ್‌ವುಡ್‌ನಿಂದ ಬಹುತೇಕ ಕಣ್ಮರೆಯಾಗಿದ್ದಾರೆ. ಕಿಲಾಡಿ ಕಿಟ್ಟಿ, ಸಾಗರ್, ಸೂಪರ್ ಶಾಸ್ತ್ರಿ ಚಿತ್ರಗಳು ಮಕಾಡೆ ಮಲಗಿದ ನಂತರ ಇಲ್ಲಿ ಯಾವ ನಿರ್ಮಾಪಕರೂ ಹರಿಪ್ರಿಯಾ ಬೇಕೆಂದು ಹೇಳುತ್ತಿಲ್ಲ. ಯಾವ ನಾಯಕರಿಗೂ ಹರಿಪ್ರಿಯಾ ಜತೆ ನಟಿಸುವ ಧೈರ್ಯ ಬರುತ್ತಿಲ್ಲ. ನಿರ್ದೇಶಕರ ಆಯ್ಕೆಯಂತೂ ಅಲ್ಲವೇ ಅಲ್ಲ.

ಹಾಗೆಂದು ಇತರೆ ಹಲವು ನಾಯಕಿಮಣಿಯರಂತೆ ಹರಿಪ್ರಿಯಾ ಮನೆಯಲ್ಲಿ ಕುಳಿತಿಲ್ಲ. ಆಕೆಗೆ ತೆಲುಗು ಚಿತ್ರರಂಗ ಬೊಂಬಾಟ್ ಅವಕಾಶಗಳನ್ನು ನೀಡುತ್ತಿದೆ. ಸೂಪರ್ ಸ್ಟಾರ್‌ಗಳ ಜತೆ ಅಲ್ಲದಿದ್ದರೂ, ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಅದರಲ್ಲೂ ಇತ್ತೀಚೆಗೆ ಸಿಕ್ಕಿರುವ 'ಅಬ್ಬಾಯಿ ಕ್ಲಾಸ್ ಅಮ್ಮಾಯಿ ಮಾಸ್' ಚಿತ್ರದಲ್ಲಿ ಹರಿಪ್ರಿಯಾ ರಾಕಿಂಗ್.

'ಅಬ್ಬಾಯಿ ಕ್ಲಾಸ್ ಅಮ್ಮಾಯಿ ಮಾಸ್' ಚಿತ್ರದಲ್ಲಿ ನನಗೆ ವರುಣ್ ಸಂದೇಶ್ ನಾಯಕ. ಚಿತ್ರದಲ್ಲಿ ನಾನು ನೀರು ಎಂಬ ಹುಡುಗಿಯ ಪಾತ್ರ ಮಾಡುತ್ತಿದ್ದೇನೆ. ತುಂಬಾ ಡಿಫರೆಂಟ್ ಲುಕ್ ನನಗೆ ಈ ಚಿತ್ರದಲ್ಲಿದೆ. ದೊಡ್ಡ ಮಟ್ಟದ ಯಶಸ್ಸಿನ ನಿರೀಕ್ಷೆಯಿದೆ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಹರಿಪ್ರಿಯಾ, ಈ ಬಾರಿ ತಾನೇ ಸ್ವತಃ ಡಬ್ ಕೂಡ ಮಾಡಲಿದ್ದಾರಂತೆ. ಆ ಮಟ್ಟಿಗಿನ ತೆಲುಗು ಕಲಿತಿದ್ದಾರೆ. ತಾನೇ ಡಬ್ ಮಾಡುವುದರಿಂದ ಪಾತ್ರದ ತೂಕವೂ ಹೆಚ್ಚುತ್ತದೆ ಎನ್ನುವುದು ಅವರ ಅಭಿಪ್ರಾಯ.

ಇದಲ್ಲದೆ ಇನ್ನೊಂದು ತೆಲುಗು ಚಿತ್ರವೂ ಹರಿಪ್ರಿಯಾಗೆ ಸಿಕ್ಕಿದೆ. ಅದರಲ್ಲೂ ವರುಣ್ ಸಂದೇಶ್ ನಾಯಕನಾಗಿರುವುದು ವಿಶೇಷ. ಚಿತ್ರದ ಹೆಸರು ಈ ವರ್ಷಂಗ ಸಾಕ್ಷಿಗ. ವರುಣ್ ಜತೆ ಮತ್ತೆ ನಟಿಸಲು ಖುಷಿಯಾಗುತ್ತಿದೆ ಎಂದು ಹರಿಪ್ರಿಯಾ ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡದಲ್ಲಿ ಹರಿಪ್ರಿಯಾ ನಟಿಸಿರುವ ಯಾವುದೇ ಚಿತ್ರಗಳು ಸದ್ಯ ಬಿಡುಗಡೆಗೆ ಕಾಯುತ್ತಿಲ್ಲ. ಒಂದೆರಡು ಚಿತ್ರಗಳಲ್ಲಿ ನಟಿಸಿದರೂ, ಅದು ಡಬ್ಬಾದಲ್ಲೇ ಕೊಳೆಯುತ್ತಿವೆ. ಹೊಸ ಚಿತ್ರಗಳ ಆಫರುಗಳು ಬಂದಿಲ್ಲ. ಆದರೆ ತಮಿಳಿನಲ್ಲಿ ಒಂದಷ್ಟು ಆಫರುಗಳು ಬಂದಿವೆ. ಅದರಲ್ಲಿ ಒಂದು ಇದೇ ತಿಂಗಳಲ್ಲಿ ಸೆಟ್ಟೇರಲಿದೆ. ಪೂರ್ತಿ ಹೊಸಬರ ಟೀಮ್‌ನಲ್ಲಿ ಹರಿಪ್ರಿಯಾ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ