ಕಾರ್ಕಳದ ಪವಾಡ ಪುರುಷ ಸಂತ ಲಾರೆನ್ಸ್ ಬಿಡುಗಡೆಗೆ ಸಿದ್ಧ

ಸೋಮವಾರ, 28 ಅಕ್ಟೋಬರ್ 2013 (19:26 IST)
ಕಾರ್ಕಳದ ಪವಾಡ ಪುರುಷ ಸಂತ ಲಾರೆನ್ಸ್ ಹೆಸರಿನ ಚಿತ್ರವೊಂದು ತಯಾರಾಗುತ್ತಿರುವುದರ ಬಗ್ಗೆ ನೀವು ಇದೇ ಕಾಲಂನಲ್ಲಿ ಓದಿರುತ್ತೀರಿ. ಇದು ಕಾರ್ಕಳದ ಸಂತ ಲಾರೆನ್ಸ್ ಅವರ ಪವಾಡದ ಸುತ್ತ ನಡೆಯುವ ಚಿತ್ರ. ರೋಮ್ನಿಂದ ಗೋವಾಕ್ಕೆ ತಂದು ಅಲ್ಲಿಂದ ಬೇರೆಡೆಗೆ ಸಾಗಿಸುತ್ತಿದ್ದ ಮೂರ್ತಿಯೊಂದು ಕರಾವಳಿಗೆ ಬಂದೊಡನೆ ಅಲ್ಲೇ ಸ್ಥಾಪಿತಗೊಳ್ಳುತ್ತದೆ. ಪ್ರತಿಮೆಯಲ್ಲಿ ಅಲ್ಲಿಂದ ಸ್ಥಳಾಂತರಿಸುವುದು ಅಸಾಧ್ಯವಾಗುತ್ತದೆ. ಇಲ್ಲೇ ಗುಡಿ ಕಟ್ಟಿ ಪ್ರತಿಷ್ಠಾಪಿಸುತ್ತೇವೆ ಎಂದ ಬಳಿಕವೇ ಅದು ಅಲುಗಾಡುತ್ತದೆ. ಕಾರ್ಕಳದಲ್ಲಿ ಪ್ರತಿಷ್ಠಾಪಿತವಾದ ಈ ಮೂರ್ತಿ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯಿತು. ಈ ಕಥೆಯೇ ಚಿತ್ರದ ತುಂಬೆಲ್ಲಾ ತುಂಬಿಕೊಂಡಿದೆ.

ನಿರ್ಮಾಪಕ ಸ್ಟೀಫನ್ ಮೆಂಡಿಸ್ ಲಾರೆನ್ಸ್ರ ಭಕ್ತರು. ಅವರಿಗೆ ಈ ಪವಾಡ ಪುರುಷನಿಂದ ಶ್ರೇಯಸ್ಸಾಗಿದೆ. ಈ ಕಾರಣದಿಂದ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿತ್ರದ ಬಹುಪಾಲು ಚಿತ್ರೀಕರಣ ನಡೆದಿದೆ. ಚಿತ್ರದಿಂದ ಬರುವ ಗಳಿಕೆಯನ್ನು ಡಿವೈನ್ ಚಾರಿಟಬಲ್ ಟ್ರಸ್ಟ್ಗೆ ವಿನಿಯೋಗಿಸುವ ಗುರಿ ಅವರದ್ದು. ನಟ ರವಿಚೇತನ್ ಸಂತ ಲಾರೆನ್ಸ್ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ನಿರ್ದೇಶನ ಮಾಡಿದ್ದು ಪ್ರವೀಣ್. ಡಿ.27ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು ಟೆನ್ನಿಸ್ ಕೃಷ್ಣ, ಭವ್ಯ, ಶೋಭರಾಜ್ ಮತ್ತಿತರರು ತಾರಾಗಣದಲ್ಲಿ ನಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ