ಗುಲ್ಲೋ ಗುಲ್ಲು: ಭಟ್ಟರ ಜತೆ 'ಲೂಸಿಯಾ' ಪವನ್ ಮುನಿಸು!

ಮಂಗಳವಾರ, 7 ಮೇ 2013 (19:28 IST)
PR
ಯೋಗರಾಜ್ ಭಟ್ ಮತ್ತು ಅವರ ಶಿಷ್ಯ ಪವನ್ ಕುಮಾರ್ ನಡುವೆ ಈಗ ಎಲ್ಲವೂ ಸರಿ ಇಲ್ಲವಂತೆ. ಅವರಿಬ್ಬರೂ ದೂರವಾಗಿದ್ದಾರಂತೆ. ಹೀಗೆ ಇಬ್ಬರ ಬಗ್ಗೆ ಹರಡುತ್ತಿರುವ ಗಾಳಿಸುದ್ದಿಗಳಿಗೆ ಸ್ವತಃ ಪವನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ನಮ್ಮ ನಡುವೆ ಅಂತದ್ದೇನೂ ನಡೆದಿಲ್ಲ, ನಾವು ಚೆನ್ನಾಗಿಯೇ ಇದ್ದೇವೆ ಎಂದು ಹೇಳಿದ್ದಾರೆ!

ಪವನ್ ಕುಮಾರ್ ಗೊತ್ತಲ್ವೇ? ಸಿಂಧು ಲೋಕನಾಥ್, ಸಂಯುಕ್ತಾ ಹೊರನಾಡು ಸೇರಿದಂತೆ ಹಲವು ಹುಡುಗಿಯರ ದಾಳವಾಗಿ ದಿಗಂತ್ ನಟಿಸಿದ್ದ 'ಲೈಫು ಇಷ್ಟೇನೆ' ಚಿತ್ರದ ನಿರ್ದೇಶಕ. ಈ ಚಿತ್ರವನ್ನು ನಿರ್ಮಿಸಿದ ಹಲವು ನಿರ್ಮಾಪಕರಲ್ಲಿ ಯೋಗರಾಜ್ ಭಟ್ ಕೂಡ ಒಬ್ಬರಾಗಿದ್ದರು. ಶಿಷ್ಯನ ಚಿತ್ರಕ್ಕೆ ಸ್ವತಃ ಗುರು ಹಣ ಹಾಕಿದ್ದರು. ಇಬ್ಬರ ನಡುವಿನ ಬಾಂಧವ್ಯ ಈ ಚಿತ್ರದ ನಂತರ ಮತ್ತಷ್ಟು ವೃದ್ಧಿಸಿತ್ತು.

ಇದಾದ ನಂತರ ಪವನ್ ಕುಮಾರ್ ಹೊಸ ಚಿತ್ರ ಕೈಗೆತ್ತಿಕೊಂಡಿದ್ದರು. ಚಿತ್ರದ ಹೆಸರು 'ಲೂಸಿಯಾ'. ಇಂಟರ್ನೆಟ್ ಮಾಧ್ಯಮದಲ್ಲಿ ಭಾರಿ ಅಲೆಯನ್ನು ಎಬ್ಬಿಸುತ್ತಿರುವ ಪ್ರಾಜೆಕ್ಟ್. ಇದರ ಪೋಸ್ಟ್ ಪ್ರೊಡಕ್ಷನ್ ಕೆಲಸ ಇನ್ನಷ್ಟೇ ಮುಗಿಯಬೇಕು. ಇದರ ವಿಶೇಷವೇನೆಂದರೆ, ಚಿತ್ರವನ್ನು ನಿರ್ಮಿಸುತ್ತಿರುವುದು, ವಿತರಿಸುತ್ತಿರುವುದು ಪ್ರೇಕ್ಷಕರು. ಕ್ರೌಡ್ ಫಂಡಿಂಗ್ ಮೂಲಕ ಹೊಸದೊಂದು ಅವಕಾಶವನ್ನು ಹುಡುಕಲು ಹೊರಟಿದ್ದಾರೆ ಪವನ್.

PR
ಆದರೆ ತುಂಬಾ ಕಷ್ಟ. ಎಷ್ಟೇ ಪ್ರಯತ್ನಪಟ್ಟರೂ ಪವನ್‌ಗೆ ಗುರಿ ಮುಟ್ಟಲಾಗುತ್ತಿಲ್ಲ. ಬೇಕಾದಷ್ಟು ಹಣ ಸಂಗ್ರಹವಾಗಿಲ್ಲ. ಇಷ್ಟಾದರೂ ಗುರು ಯೋಗರಾಜ್ ಭಟ್ ಹತ್ತಿರಕ್ಕೆ ಪವನ್ ಯಾಕೆ ಹೋಗಿಲ್ಲ ಎನ್ನುವುದು ಗಾಳಿ ಸುದ್ದಿಯ ಸೆಳೆ. ಭಟ್ಟರ ಹತ್ತಿರ ಪವನ್ ಹೋಗಿದ್ದರೆ ಚಿತ್ರ ಸುಲಭವಾಗಿ ತೆರೆಗೆ ಬರುತ್ತಿತ್ತು. ಹೋಗಿಲ್ಲವೆಂದ ಮೇಲೆ ಅವರಿಬ್ಬರ ನಡುವೆ ಏನೋ ನಡೆದಿರಬೇಕು ಎಂದೆಲ್ಲ ಅಲ್ಲಲ್ಲಿ ಮಾತನಾಡುವವರ ಸಂಖ್ಯೆ ಗಾಂಧಿನಗರದಲ್ಲಿ ಹೆಚ್ಚುತ್ತಿದೆ.

ಇದಕ್ಕೆ ಪವನ್ ಸ್ಪಷ್ಟನೆ ನೀಡಿದ್ದಾರೆ. ನಾವು ಚೆನ್ನಾಗಿಯೇ ಇದ್ದೇವೆ ಎಂದು ಹೇಳಿದ್ದಾರೆ.

ನಾನು ಮತ್ತು ಯೋಗರಾಜ್ ಭಟ್ ಪರಸ್ಪರ ಮುನಿಸಿಕೊಂಡಿದ್ದೇವೆ. ಅದೇ ಕಾರಣದಿಂದ ಕ್ರೌಢ್ ಫಂಡ್ ಮೂಲಕ ನಾನು ಲೂಸಿಯಾ ಚಿತ್ರ ಮಾಡುತ್ತಿದ್ದೇನೆ ಎಂಬುದು ನಿಜವಲ್ಲ. ನಾವಿಬ್ಬರೂ ಜತೆಯಾಗಿಯೇ ಇದ್ದೇವೆ. ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ನನಗೆ ಸಹಾಯ ಮಾಡುವ ಬಗ್ಗೆ ಆಗಾಗ ಪ್ರಸ್ತಾಪಿಸುತ್ತಿದ್ದಾರೆ. ಆದರೆ ನಾನು ತೆಗೆದುಕೊಂಡಿಲ್ಲ, ಅಷ್ಟೇ.

ಅದಕ್ಕೆ ಕಾರಣ, ನನ್ನ ಹೊಸ ಪ್ರಯತ್ನ. ನಾನು ಹೊಸತೊಂದು ವ್ಯವಸ್ಥೆಯ ಸೃಷ್ಟಿಗೆ ಹೊರಟಿದ್ದೇನೆ. ಅದರಲ್ಲಿ ಯಶಸ್ವಿಯಾಗುವ ವಿಶ್ವಾಸದಲ್ಲಿದ್ದೇನೆ. ಇದರ ಅರ್ಥ ಭಟ್ಟರ ಜತೆ ನಾನು ಚೆನ್ನಾಗಿಲ್ಲ ಎಂದಲ್ಲ. ಹೀಗೆ ಫೇಸ್‌ಬುಕ್‌ನಲ್ಲಿ ಪವನ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ