ತಬ್ಬಿದ ಸಚಿನ್ ಜೋಷಿ; ಪ್ರಿಯಾಮಣಿ ತಬ್ಬಿಬ್ಬು..!

SUJENDRA
ಇದನ್ನು ನೇರವಾಗಿ ಹೇಳುವುದಿದ್ದರೆ ಲೈಂಗಿಕ ಕಿರುಕುಳ ಪ್ರಕರಣ. ಸ್ವಲ್ಪ ಆಚೀಚೆ ಮಾಡಿ ಹೇಳೋದಿದ್ರೆ, ಕಿಚಾಯಿಸಿದ್ದು. ಅದೇನೇ ಇರಲಿ, ಬಹುಭಾಷಾ ನಟಿ ಪ್ರಿಯಾಮಣಿ ಇದನ್ನು 'ಛೀ.. ಥೂ..' ಎಂದು ಉಗಿಯುವ ರೀತಿಯಲ್ಲಿ ದೂರಿದ್ದಾರೆ. ಹಾಗೆ ದೂರಲ್ಪಟ್ಟಿರುವ ವ್ಯಕ್ತಿ ಸಚಿನ್ ಜೋಷಿ!

ಯಾರು ಈ ಸಚಿನ್ ಜೋಷಿ? ಈ ಪ್ರಶ್ನೆಗೆ ಸರಳ ಉತ್ತರ ಬಾಲಿವುಡ್ ಕಮ್ ಟಾಲಿವುಡ್ ನಟ. ನಡೆದಿರುವುದೇನು? ಸಚಿನ್ ಪ್ರಿಯಾಮಣಿಯ ಅಲ್ಲಿ ಇಲ್ಲಿ ಕೈಯಾಡಿಸಿರುವುದು. ಘಟನೆ ನಡೆದಿರುವುದು ಎಲ್ಲಿ? ಸಿಸಿಎಲ್ ಪಂದ್ಯ ಮುಗಿದ ನಂತರದ ನಡುರಾತ್ರಿ ಪಾರ್ಟಿಯಲ್ಲಿ. ಇದಕ್ಕೇನು ಕಾರಣ? ಸಚಿನ್ ಪಾನಮತ್ತರಾಗಿದ್ದರು. ಇದು ಇಡೀ ಪ್ರಸಂಗದ ಸಿಂಪಲ್ ವಿವರಣೆ.

ಧಾಮ್ ಧೂಮ್ ಪಾರ್ಟಿ...
ಅದು ಜನವರಿ 22ರ ಭಾನುವಾರ. ಅಂದು ಕೊಚ್ಚಿಯಲ್ಲಿ ಬೆಂಗಾಲ್ ಟೈಗರ್ಸ್-ಚೆನ್ನೈ ರಿನೋಸ್ ಮತ್ತು ಕೇರಳ ಸ್ಟೈಕರ್ಸ್ - ಮುಂಬೈ ಹೀರೋಸ್ ನಡುವಿನ ಸಿಸಿಎಲ್ ಪಂದ್ಯ ನಡೆದಿತ್ತು. ಕೇರಳ ವರ್ಸಸ್ ಮುಂಬೈ ಪಂದ್ಯ ಮುಗಿಯುವಾಗಲೇ ರಾತ್ರಿ 10 ಕಳೆದಿತ್ತು. ನಂತರ ಒಂದು ಸುತ್ತಿನ ವಿಶ್ರಾಂತಿಯ ಬಳಿಕ ಕೊಚ್ಚಿಯ ಹೊಟೇಲೊಂದರಲ್ಲಿ ಗುಂಡು ಪಾರ್ಟಿ ಏರ್ಪಡಿಸಲಾಗಿತ್ತು.

ಈ ಪಾರ್ಟಿಗೆ ಕ್ರಿಕೆಟಿಗ ಶ್ರೀಶಾಂತ್, 'ಗಂಡ-ಹೆಂಡತಿ' ಸಂಜನಾ, ಬೆಳಗಾವಿ ಹುಡುಗಿ ಲಕ್ಷ್ಮಿ ರೈ, ಭಾವನಾ ಮೆನನ್, ಸೋನಿಯಾ ಅಗರ್ವಾಲ್, ಜೆನಿಲಿಯಾ ಡಿಸೋಜಾ ಮುಂತಾದವರು ಹೋಗಿದ್ದರು. ಸಿಸಿಎಲ್ ರಾಯಭಾರಿ ಪ್ರಿಯಾಮಣಿಯೂ ಅಲ್ಲಿದ್ದರು. ಇಡೀ ರಾತ್ರಿ ನಡೆದ ಪಾರ್ಟಿ ಮುಗಿಯುವಾಗ ಮುಂಜಾನೆ ನಾಲ್ಕು ಗಂಟೆಯಾಗಿತ್ತು.

ಕೈ ಹಿಡಿದೆಳೆದ ಸಚಿನ್...
ಪಾರ್ಟಿ ಸ್ಥಳದಿಂದ ಒಬ್ಬೊಬ್ಬರೇ ಕಳಚಿಕೊಳ್ಳುತ್ತಿದ್ದ ಹೊತ್ತು. ಅಲ್ಲಿದ್ದವರೆಲ್ಲರಿಗೂ ಗುಡ್ ಬೈ ಹೇಳುತ್ತಾ ಪ್ರಿಯಾಮಣಿ ಹೊರಟಿದ್ದರು. ಅಲ್ಲೇ ಶ್ರೀಶಾಂತ್ ಜತೆ ಮಾತನಾಡುತ್ತಿದ್ದಾಗ ಹಿಂದಿನಿಂದ ಬಂದ ಸಚಿನ್ ಜೋಷಿ, ಇದ್ದಕ್ಕಿದ್ದಂತೆ ಪ್ರಿಯಾಮಣಿ ಕೈ ಹಿಡಿದು ಎಳೆದರು. ಪ್ರಿಯಾಮಣಿ ತಳ್ಳಿದ ಹೊರತಾಗಿಯೂ ಅಪ್ಪಿಕೊಳ್ಳಲು ಯತ್ನಿಸಿದರು.

ಪಕ್ಕದಲ್ಲೇ ಇದ್ದ ಶ್ರೀಶಾಂತ್ ನೋಡನೋಡುತ್ತಿದ್ದಂತೆ ಇದೆಲ್ಲ ನಡೆದಿತ್ತು. ಆದರೆ ಶ್ರೀಶಾಂತ್ ಸುಮ್ಮನಿರಲಿಲ್ಲ. ಸಚಿನ್‌ನನ್ನು ಪ್ರಿಯಾಮಣಿ ತಳ್ಳುತ್ತಿದ್ದಂತೆ ಹಿಡಿದುಕೊಂಡ ಶ್ರೀಶಾಂತ್, ನಟಿಯನ್ನು ಅಲ್ಲಿಂದ ಹೋಗುವಂತೆ ಸೂಚಿಸಿದರು. ಗಾಯಗೊಂಡ ಚಿಗರೆಯಂತಾಗಿದ್ದ ಪ್ರಿಯಾಮಣಿ ಅಲ್ಲಿಂದ ಕೆಲವೇ ಕ್ಷಣಗಳಲ್ಲಿ ಕಾಲ್ಕಿತ್ತರು.

ಅದಾಗಲೇ ಕಂಠಪೂರ್ತಿ ಕುಡಿದಿದ್ದ ಸಚಿನ್ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದ. ತಾನೇನು ಮಾಡುತ್ತಿದ್ದೇನೆ ಅನ್ನೋ ಪ್ರಜ್ಞೆಯೇ ಆತನಿಗಿರಲಿಲ್ಲ.

ಮುಚ್ಚಿ ಹಾಕುತ್ತಿರುವ ಪ್ರಿಯಾಮಣಿ...
ಇಷ್ಟೆಲ್ಲ ನಡೆದರೂ ಈ ಪ್ರಸಂಗ ಎಲ್ಲೂ ಸುದ್ದಿಯಾಗಿರಲಿಲ್ಲ. ಅಲ್ಲಿದ್ದ ಯಾರೊಬ್ಬರೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಬಹಿರಂಗಪಡಿಸಿದ್ದು ಸ್ವತಃ ಪ್ರಿಯಾಮಣಿ. ಅವರು ನೇರವಾಗಿ ಹೇಳಿರಲಿಲ್ಲ. ಸುತ್ತು ಬಳಸಿ ಸಂಜ್ಞೆ ನೀಡುವಂತೆ ಟ್ವಿಟ್ಟರಿನಲ್ಲಿ ಆರೋಪ ಮಾಡಿದ್ದರು. ಅದರಲ್ಲಿ ಹೆಸರೇ ಬರೆದಿರಲಿಲ್ಲ. ಆದರೆ ಯಾವಾಗ ಪ್ರಿಯಾಮಣಿ ಟ್ವೀಟ್ ಬಯಲಾಯಿತೋ, ಆಗಲೇ ಆ ವ್ಯಕ್ತಿ ಯಾರೆಂಬುದು ಹೊರ ಜಗತ್ತಿಗೆ ಗೊತ್ತಾಯಿತು.

ಇಷ್ಟಾಗುತ್ತಿದ್ದಂತೆ ಪ್ರಿಯಾಮಣಿ ಎಚ್ಚೆತ್ತುಕೊಂಡು, ತನ್ನ ಟ್ವೀಟನ್ನೇ ತೆಗೆದು ಹಾಕಿದ್ದಾರೆ. ಇನ್ನಷ್ಟು ವಿವಾದ ಬೇಡ ಎಂಬ ನಿಟ್ಟಿನಲ್ಲಿ ಅವರು ಹೀಗೆ ಮಾಡಿದ್ದಾರೆ ಎನ್ನುತ್ತವೆ ಮೂಲಗಳು. ಈ ಸಂಬಂಧ ಪ್ರಿಯಾಮಣಿಯನ್ನು ಸಂಪರ್ಕಿಸಿದಾಗ, ಅಂತಹ ಯಾವುದೇ ಘಟನೆ ನಡೆದಿಲ್ಲ. ಪಾರ್ಟಿಯಲ್ಲಿ ಸಚಿನ್ ಇದ್ದಿದ್ದು ಹೌದು, ನಾನು ಮಾತನಾಡಿದ್ದು ಕೂಡ ಹೌದು. ತಲೆಕೆಡಿಸಿಕೊಳ್ಳುವಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸುಮ್ಮನಾಗಿದ್ದಾರೆ.

ಸಚಿನ್ ಜೋಷಿಯ ಮ್ಯಾನೇಜರ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ಯಾರೋ ಹೆಣೆದಿರುವ ಕಥೆಯಿದು. ತಮ್ಮ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳಲು ಇಂತಹ ಸುಳ್ಳು ಸುದ್ದಿಗಳನ್ನು ಯಾರೋ ಹಬ್ಬಿಸುತ್ತಿದ್ದಾರೆ. ಅಂತಹ ಯಾವುದೇ ಪ್ರಸಂಗ ನಡೆದಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ