ತುಪ್ಪ ಬೇಕಾ ತುಪ್ಪ?- ರಾಗಿಣಿಗೆ ಜೇನ್ನೊಣ ದಾಳಿ..!

PR


ಬಹುಶಃ ಇತ್ತೀಚೆಗಷ್ಟೇ 'ತುಪ್ಪ ಬೇಕಾ ತುಪ್ಪ..?' ಅಂತ ಬೇಕಾಬಿಟ್ಟಿಯಾಗಿ ಹಾಡಿ ಕುಣಿದಿರುವುದು ಜೇನ್ನೊಣಗಳಿಗೂ ಗೊತ್ತಾಯಿತೋ ಏನೋ? ಇದ್ದಕ್ಕಿದ್ದಂತೆ ಗ್ಲಾಮರ್ ಬೊಂಬೆ ರಾಗಿಣಿಯನ್ನು ಓಡಿಸಿಕೊಂಡು ಹೋಗಿವೆ. ಬದುಕಿದರೆ ಬೇಡಿಯಾದರೂ ತಿಂದೇನು ಅಂತ ಅಲ್ಲೇ ಇದ್ದ ಇನ್ನೋವಾ ಕಾರಿನಲ್ಲಿ ರಾಗಿಣಿ ಪರಾರಿಯಾಗಿದ್ದಾರೆ!

ಇದು ನಡೆದಿರುವುದು ಕೋಲಾರದಲ್ಲಿ. ಲೂಸ್ ಮಾದ ಯೋಗೀಶ್ ನಾಯಕರಾಗಿರುವ 'ಬಂಗಾರಿ' ಚಿತ್ರದ ಶೂಟಿಂಗ್ ನಡೆಯುತ್ತಿದ್ದಾಗ ಹೆಜ್ಜೇನುಗಳ ಹಿಂಡು ದಾಳಿ ಮಾಡಿತ್ತು. ಅಲ್ಲೇ ಇದ್ದ ರಾಗಿಣಿಯನ್ನು ಜೇನ್ನೊಣಗಳು ಓಡಿಸಿಕೊಂಡು ಬಂದಿದ್ದವು.

ಈ ಸಂದರ್ಭದಲ್ಲಿ ಯೋಗಿಯ ಕಾರಿನತ್ತ ಓಡಿ ಹೋದ ರಾಗಿಣಿ ತಪ್ಪಿಸಿಕೊಂಡರಂತೆ. ಜೇನ್ನೊಣಗಳಿಂದ ರಾಗಿಣಿಗೆ ಯಾವುದೇ ಅಪಾಯಗಳಾಗಿಲ್ಲ.

PR


ಬಂಗಾರಿ ಚಿತ್ರತಂಡ ಕೋಲಾರದ ವಕ್ಕಲೇರಿ ಬೆಟ್ಟದಲ್ಲಿ (ಮಾರ್ಕಂಡೇಯ ಬೆಟ್ಟ) ಚಿತ್ರೀಕರಣ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಜೇನ್ನೊಣಗಳ ಗೂಡಿಗೆ ಯಾರೋ ಕಲ್ಲು ಹೊಡೆದ ನಂತರ ಹೀಗೆ ಚಿತ್ರತಂಡವನ್ನು ಓಡಿಸಿಕೊಂಡು ಬಂದಿದ್ದವು. ರಾಗಿಣಿ ತಪ್ಪಿಸಿಕೊಂಡರೂ, ಇತರ ಮೂವರನ್ನು ನೊಣಗಳು ಬಿಟ್ಟಿಲ್ಲ. ಗಾಯಗೊಂಡ ಅವರನ್ನು ಅಲ್ಲೇ ಪಕ್ಕದ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆಯಂತೆ.

ಚಿತ್ರೀಕರಣವನ್ನು ತಾತ್ಕಾಲಿಕವಾಗಿ ರದ್ದು ಮಾಡಿರುವ ಚಿತ್ರತಂಡ ಬೆಂಗಳೂರಿಗೆ ವಾಪಸ್ಸಾಗಿದೆ. ಮಾ. ಚಂದ್ರು ನಿರ್ದೇಶನದ ಈ ಚಿತ್ರದಲ್ಲಿ ಯೋಗಿಗೆ ರಾಗಿಣಿ ನಾಯಕಿ.

ಇತ್ತೀಚೆಗಷ್ಟೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೂ ಜೇನ್ನೊಣಗಳು ತಮ್ಮ ಸೂಜಿಯನ್ನು ಚುಚ್ಚಿದ್ದವು. ಯೋಗರಾಜ್ ಭಟ್ ನಿರ್ದೇಶನದ ಪರಮಾತ್ಮ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಹೀಗಾಗಿತ್ತಂತೆ. ತಪ್ಪಿಸಿಕೊಳ್ಳಲು ಪುನೀತ್ ಓಡಿದ್ದರೂ ಹೆಜ್ಜೇನುಗಳು ಬಿಟ್ಟಿರಲಿಲ್ಲ. ಮುಖ-ಮೂತಿ ನೋಡದೆ ಎಲ್ಲೆಂದರಲ್ಲಿ ಕಚ್ಚಿದ್ದವು. ಆದರೂ ಪುನೀತ್ ಒಂದೇ ಗಂಟೆಯಲ್ಲಿ ಚಿತ್ರೀಕರಣಕ್ಕೆ ರೆಡಿಯಾಗಿದ್ದರು ಅನ್ನೋದು ನಾಲ್ಕಾರು ತಿಂಗಳುಗಳ ಹಿಂದೆ ಭಾರೀ ಸುದ್ದಿಯಾಗಿತ್ತು.

ವೆಬ್ದುನಿಯಾವನ್ನು ಓದಿ