'ದಂಡುಪಾಳ್ಯ' ಗ್ಯಾಂಗ್ 25 ಕೋಟಿ ರೂ. ಚಿತ್ರಕ್ಕೆ ಉಪ್ಪಿ ಹೀರೋ?

PR
ಹಸಿಹಸಿ ಕ್ರೈಮ್ ರಿಯಾಲಿಟಿ ಸಿನಿಮಾ 'ದಂಡುಪಾಳ್ಯ' ಕನ್ನಡ ಮತ್ತು ತೆಲುಗಿನಲ್ಲಿ ಅಬ್ಬರಿಸಿದ ನಂತರ ನಿರ್ದೇಶಕ ಶ್ರೀನಿವಾಸ ರಾಜು ಹೊಸ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಅದರಲ್ಲೂ 25 ಕೋಟಿ ರೂ. ವೆಚ್ಚದಲ್ಲಿ ಅವರು ಹೊಸ ಚಿತ್ರ ನಿರ್ದೇಶಿಸಲಿದ್ದಾರಂತೆ. ಆ ಚಿತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ನಾಯಕ ಅನ್ನೋದು ಸರ್‌ಪ್ರೈಸ್!

ಇನ್ನಷ್ಟೇ ಹೆಸರಿಡಬೇಕಿರುವ ಈ ಚಿತ್ರ ಏಕಕಾಲದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರೀಕರಣಗೊಳ್ಳಲಿದೆ. ಕನ್ನಡದಲ್ಲಿ ಉಪೇಂದ್ರ ಹಾಗೂ ತೆಲುಗಿನಲ್ಲಿ ಗೋಪಿಚಂದ್ ನಾಯಕ. ಒಂದೇ ಕಡೆ ಸೆಟ್ ಹಾಕಿ, ಎರಡೂ ಚಿತ್ರಗಳ ಚಿತ್ರೀಕರಣ ನಡೆಸಲಾಗುತ್ತದೆ.

ಉಪೇಂದ್ರ ಮತ್ತು ಗೋಪಿಚಂದ್‌ರನ್ನು ನಂಬಿ 25 ಕೋಟಿ ರೂ. ಸುರಿಯುತ್ತಿರುವವರು ಯಾರು ಎಂಬುದನ್ನು ಶ್ರೀನಿವಾಸ ರಾಜು ಸ್ಪಷ್ಪಡಿಸಿಲ್ಲ. ಆದರೆ ಮೂಲಗಳ ಪ್ರಕಾರ, ಹೈದಬಾರಾದ್‌ನ ರಮೇಶ್ ಎಂಬವರು ಈ ಚಿತ್ರ ನಿರ್ಮಿಸುತ್ತಿದ್ದಾರೆ. ಅವರಲ್ಲಿ ತ್ರಿಶಾ ಕೃಷ್ಣನ್ ಕಾಲ್‌ಶೀಟ್ ಇರುವುದರಿಂದ ಅವರೇ ನಾಯಕಿಯಾಗುವ ಸಾಧ್ಯತೆಗಳಿವೆ.

ಇದುವರೆಗೆ ಚಿತ್ರದ ಹೆಸರು ಬಹಿರಂಗಪಡಿಸಿಲ್ಲ. ಆದರೆ ಕಥೆ ಆಕ್ಷನ್ ಥ್ರಿಲ್ಲರ್. ಸದ್ಯ ನಿರ್ದೇಶಕರು ಕಥೆಗೆ ಅಂತಿಮ ರೂಪ ಕೊಡುತ್ತಿದ್ದಾರೆ.

ಈ ಸಂಬಂಧ ಉಪ್ಪಿ ಜತೆ ಮಾತುಕತೆ ನಡೆದಿದೆಯೇ? ಉಪ್ಪಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆಯೇ? ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪ್ರಸ್ತಾವಿತ ಪ್ರಾಜೆಕ್ಟ್ ಬಗ್ಗೆ ಇದುವರೆಗೆ ಉಪೇಂದ್ರ ಎಲ್ಲೂ ಮಾತನಾಡಿಲ್ಲ. ಹಾಗಾಗಿ ಪ್ರಾಜೆಕ್ಟ್ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂಬ ಮಾತುಗಳಿವೆ.

ಅಂದ ಹಾಗೆ, ಈ ಹಿಂದೆ ರಂಗನಾಯಕಿ, ಶುಭ ಮಂಗಳ ಚಿತ್ರಗಳನ್ನು ರಿಮೇಕ್ ಮಾಡುತ್ತೇನೆ ಎಂದು ಇದೇ ಶ್ರೀನಿವಾಸ ರಾಜು ಹೇಳಿಕೊಂಡಿದ್ದರು. ಅದರಲ್ಲಿ ಪೂಜಾ ಗಾಂಧಿ ನಾಯಕಿ ಎಂದೂ ಘೋಷಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಆ ಮಾತುಗಳು ಸುಳ್ಳಾಗಿದ್ದವು. ಅದೇ ರೀತಿ ಉಪ್ಪಿ 25 ಕೋಟಿ ರೂ. ಬಜೆಟ್ ಚಿತ್ರವೂ ಠುಸ್ಸಾದರೂ ಅಚ್ಚರಿಪಡಬೇಕಿಲ್ಲ!

ವೆಬ್ದುನಿಯಾವನ್ನು ಓದಿ