ದರ್ಶನ್ ಜನಪ್ರಿಯತೆ ಇನ್ನೂ ಹಾಗೇ ಇದೆ: ಪ್ರಣೀತಾ

PR
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಪ್ರಹಸನದ ನಂತರ ಅವರ ಬಗ್ಗೆ ಯಾರೂ ಹೆಚ್ಚು ಮಾತನಾಡುತ್ತಿಲ್ಲ. ಆದರೆ 'ಪೊರ್ಕಿ'ಯ ಮೂಲಕ ಬಂದ ಪ್ರಣೀತಾ ಹಾಗಲ್ಲ. ಅವರ ಪ್ರಕಾರ ಇತ್ತೀಚಿನ ಪ್ರಸಂಗಗಳು ದರ್ಶನ್‌ಗೆ ಸಮಸ್ಯೆಯೇ ಅಲ್ಲ, ಅವರ ಜನಪ್ರಿಯತೆ ಒಂಚೂರೂ ಕಡಿಮೆಯಾಗಿಲ್ಲ. ಅದಕ್ಕೆ ಸಾರಥಿ ಚಿತ್ರದ ಅದ್ಭುತ ಗೆಲುವೇ ಸಾಕ್ಷಿಯಂತೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ದರ್ಶನ್‌ಗೆ ಜೋಡಿಯಾಗುವುದೆಂದರೆ ಖುಷಿಯೋ ಖುಷಿ ಅಂತ ಮೊನ್ನೆ ತಾನೇ ಹೇಳಿಕೊಂಡಿದ್ದವರು ಪ್ರಣೀತಾ. ದರ್ಶನ್ ವೈಯಕ್ತಿಕ ಜೀವನದಲ್ಲಿ ಎದುರಾದ ಸಮಸ್ಯೆಗೂ ನನಗೂ ಸಂಬಂಧವಿಲ್ಲ, ನಾನ್ಯಾಕೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ಒಬ್ಬ ನಟಿಯಾಗಿ ಅವರ ಜತೆ ನನಗೇನೂ ಸಮಸ್ಯೆಯಿಲ್ಲ ಎಂದಿದ್ದಾರೆ.

ದರ್ಶನ್ ಪಾಲಿಗೆ ಅದೊಂದು ಕೆಟ್ಟ ಘಳಿಗೆ. ಅವರೊಬ್ಬ ಜನಪ್ರಿಯ ನಟ. ಇಷ್ಟೆಲ್ಲ ಆದ ಮೇಲೂ ಅವರ ಖ್ಯಾತಿ ಕಡಿಮೆಯಾಗಿಲ್ಲ. ಈ ನಡುವೆ ಬಿಡುಗಡೆಯಾದ ಅವರ ಚಿತ್ರವೇ ಇದನ್ನು ಸಾಬೀತು ಮಾಡಿದೆ. ಪರಿಸ್ಥಿತಿ ಹೀಗಿರುವಾಗ ನಾನು ಅವರ ಜತೆ ನಟಿಸಲು ಯಾಕೆ ಹಿಂದೇಟು ಹಾಕಬೇಕು? ನಾನು ಅವರ ಜತೆ ನಟಿಸುತ್ತಿದ್ದೇನೆಯೇ ಹೊರತು ಬೇರೆ ಇನ್ನೇನಲ್ಲ ಅಂತ ಪ್ರಣೀತಾ ಸಮರ್ಥನೆ ಮಾಡಿಕೊಂಡರು.

ಇನ್ನೇನು ಬಿಡುಗಡೆಯಾಗಲಿರುವ ದುನಿಯಾ ವಿಜಿ ನಾಯಕನಾಗಿರುವ 'ಜರಾಸಂಧ'ದಲ್ಲಿ ಪ್ರಣೀತಾ ತುಂಡುಡುಗೆ ತೊಟ್ಟಿದ್ದಾರೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೌದು. ಇಲ್ಲಿ ನಾನು ಮಾಡೆಲ್ ಪಾತ್ರ ಮಾಡುತ್ತಿದ್ದೇನೆ. ಪಾತ್ರಕ್ಕೆ ತಕ್ಕಂತೆ ಬಟ್ಟೆ ಹಾಕಿಕೊಂಡಿದ್ದೇನೆ. ಹಾಗೆಂದು ಇಲ್ಲಿ ಅದು ಮಿತಿ ಮೀರಿದೆ ಅಂತ ತಿಳಿದುಕೊಳ್ಳಬೇಕಿಲ್ಲ. ನಿರ್ದೇಶಕ ಶಶಾಂಕ್ ಅದನ್ನು ಸಭ್ಯ ರೀತಿಯಲ್ಲೇ ಚಿತ್ರೀಕರಿಸಿದ್ದಾರೆ ಎಂದರು.

ಜರಾಸಂಧ ತೆರೆಗೆ ಬರುವ ಮೊದಲೇ ವಿಜಯ್ ಜತೆ ಇನ್ನೊಂದು ಚಿತ್ರಕ್ಕೂ ಪ್ರಣೀತಾ ಸಹಿ ಹಾಕಿದ್ದಾರೆ. ಇದರ ಕುರಿತ ವಿವರಗಳು ಕೆಲವೇ ದಿನಗಳಲ್ಲಿ ಬಹಿರಂಗವಾಗಲಿದೆ. ಆದರೂ ಮೊದಲ ಚಿತ್ರ ಬಿಟ್ಟರೆ ನಂತರ ಪ್ರಣೀತಾ ಕನ್ನಡದಲ್ಲಿ ಸದ್ದು ಮಾಡಿದ್ದು ಕಡಿಮೆ. ಈಗಿರುವುದು ಜರಾಸಂಧ. ಒಪ್ಪಿಕೊಂಡಿರುವುದು ಇನ್ನೊಂದು ಚಿತ್ರ. ಉಳಿದಂತೆ ಖಾಲಿ ಖಾಲಿ. ಇದಕ್ಕೂ ಕನ್ನಡತಿ ಉತ್ತರಿಸಿದ್ದಾರೆ.

ನಾನು ಕನ್ನಡತಿ. ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚೆಚ್ಚು ಸಿನಿಮಾಗಳನ್ನು ಮಾಡುವುದು ಆಸೆ. ತಮಿಳು, ತೆಲುಗುಗಳಲ್ಲೂ ನಟಿಸುತ್ತಿದ್ದೇನೆ. ಆದರೆ ನಾನು ಸ್ಯಾಂಡಲ್‌ವುಡ್‌ಗೆ ಸೇರಿದವಳಾಗಿರುವುದರಿಂದ, ಇಲ್ಲೇ ಹೆಸರು ಮಾಡಬೇಕೆನ್ನುವುದು ಬಯಕೆ ಎಂದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ