ದಿಗಂತ್ ಸರಳ, ಸುಕೋಮಲ; ಅಟ್ಟಕ್ಕೇರಿಸಿದ ಐಂದ್ರಿತಾ

SUJENDRA
ಗುಳಿಕೆನ್ನೆ ಹುಡುಗ ದಿಗಂತ್ ಜತೆ ಕೆಲಸ ಮಾಡೋದೇ ಹಬ್ಬ. ಆತ ತುಂಬಾ ಸರಳ ವ್ಯಕ್ತಿ. ಅವನ ಜತೆ ಕೆಲಸ ಮಾಡುವ ಪ್ರತಿ ಹೀರೋಯಿನ್ ಕೂಡ ಇದೇ ಮಾತನ್ನು ಹೇಳುತ್ತಾರೆ. ಯಾರ ಕೆಲಸದಲ್ಲೂ ಆತ ಮಧ್ಯ ಪ್ರವೇಶ ಮಾಡೋದಿಲ್ಲ. ಜತೆಗೆ ತುಂಬಾ ವಿನಮ್ರ ಎಂದೆಲ್ಲ ಐಂದ್ರಿತಾ ರೇ ಹೊಗಳಿದ್ದಾರೆ.

ದಿಗಂತ್ ಮತ್ತು ಐಂದ್ರಿತಾ ನಡುವೆ ಏನೋ ಇದೆ ಎಂಬ ಸುದ್ದಿ ಎಷ್ಟು ನಿಜಾನೋ ಅಥವಾ ಸುಳ್ಳೋ, ಆದ್ರೆ ಅವರಿಬ್ಬರು ಚೆನ್ನಾಗಿದ್ದಾರೆ ಅನ್ನೋದು ಸತ್ಯ. ಜತೆಗೆ ಯೋಗರಾಜ್ ಭಟ್ 'ಮನಸಾರೆ'ಯ ಜೋಡಿಯನ್ನು 'ಪಾರಿಜಾತ'ದಲ್ಲೂ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ಮನಸಾರೆ ಗೆಲ್ಲುತ್ತಿದ್ದಂತೆ ದಿಗಂತ್ ಜತೆ ನಟಿಸಲು ಸಾಕಷ್ಟು ಆಫರುಗಳು ಐಂದ್ರಿತಾಗೆ ಸಿಕ್ಕಿತ್ತು. ಆದರೆ ಕಥೆಯ ಆಯ್ಕೆಯಲ್ಲಿ ಜಾಗರೂಕಳಾದ ಐಂದ್ರಿತಾ, ಪಾರಿಜಾತ ಬಿಟ್ಟರೆ ಬೇರೆ ಯಾವುದನ್ನೂ ಒಪ್ಪಿಕೊಳ್ಳಲಿಲ್ಲ. ಅದರಿಂದ ಈಗ ಲಾಭವೂ ಆಗಿದೆ. ಈ ಬಗ್ಗೆ ಆಕೆಯಲ್ಲಿ ಖುಷಿಯಿದೆ. ಮುಂದೆಯೂ ಅಷ್ಟೇ, ಕಥೆ ಚೆನ್ನಾಗಿದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ ಅಂತಾರೆ.

ಅದೇ ಹೊತ್ತಿಗೆ ನಿಮ್ಮ ಸಿನಿಮಾಗಳ ಪಟ್ಟಿಯಲ್ಲಿ ಸಾಲು ಸಾಲು ರೊಮ್ಯಾಂಟಿಕ್-ಕಾಮಿಡಿ ಚಿತ್ರಗಳೇ ಹೆಚ್ಚುತ್ತಿದೆಯಲ್ಲ ಎಂದಾಗ, ಅದನ್ನು ಒಪ್ಪಿಕೊಳ್ಳಲು ಐಂದ್ರಿತಾ ನಿರಾಕರಿಸುತ್ತಾರೆ. ನನ್ನ ಪ್ರತಿ ಚಿತ್ರಗಳಿಗೂ ವ್ಯತ್ಯಾಸಗಳಿವೆ. ಮನಸಾರೆಯಲ್ಲಿದ್ದ ಕಥೆ ತುಂಬಾ ಸಹಜವಾಗಿತ್ತು. ಅದನ್ನು ಪ್ರೇಕ್ಷಕರು ತಾವಾಗಿ ಅನುಭವಿಸಿದ್ದರು. ಆದರೆ ಪಾರಿಜಾತದಲ್ಲಿ ಹಾಗಲ್ಲ. ಇಲ್ಲಿ ನಾನು ಪೋಕರಿ ಯುವಕನನ್ನು ಬದಲಾಯಿಸುವ ಶಿಕ್ಷಕಿಯಾಗಿ ನಟಿಸಿದ್ದೇನೆ ಎನ್ನುತ್ತಾರೆ.

ಪಾರಿಜಾತ ರಿಮೇಕ್ ಚಿತ್ರವಾದರೂ ಶ್ರದ್ಧೆಯಿಂದ ಮಾಡಿದ ಪ್ರಭು ಶ್ರೀನಿವಾಸ್ ಖುಷಿಯಾಗಿದ್ದಾರೆ. ಬಿ ಮತ್ತು ಸಿ ಸೆಂಟರುಗಳಿಗಿಂತ ಕ್ಲಾಸ್ ಪ್ರೇಕ್ಷಕರೇ ಚಿತ್ರವನ್ನು ಹೆಚ್ಚು ಮೆಚ್ಚಿಕೊಂಡಿದ್ದಾರೆ. ಬಾಲ್ಕನಿ ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಕ್ರಿಕೆಟ್ ಮತ್ತು ಇತರ ದೊಡ್ಡ ದೊಡ್ಡ ಚಿತ್ರಗಳ ಹೊರತಾಗಿಯೂ ಪಾರಿಜಾತ ಗೆಲುವಿನ ಹಾದಿಯಲ್ಲಿದೆ ಅನ್ನುತ್ತಿರುವವರು ನಿರ್ಮಾಪಕ ಪರಮೇಶ್. ಭಾರೀ ಗಳಿಕೆಯನ್ನೇನೂ ಚಿತ್ರ ಮಾಡುತ್ತಿಲ್ಲ. ಆದರೂ ದಿನಕ್ಕೆ ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ಲಾಭ ನಮ್ಮ ಕಿಸೆಯನ್ನು ಸೇರುತ್ತಿದೆ. ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ