ದೀಪಾ ಸನ್ನಿಧಿ, ಪ್ರಿಯಾಮಣಿಯರಲ್ಲಿ ಪ್ರೇಮ್‌ಗೆ ಯಾರು?

SUJENDRA
ವರ್ಷದ ಹಿಂದೆ ಇನ್ನೇನು ಮಾಡುವುದು ಎಂದು ತಲೆ ಮೇಲೆ ಕೈಯಿಟ್ಟು ಕೂತಿದ್ದ ಲವ್ಲಿ ಸ್ಟಾರ್ ಪ್ರೇಮ್ ಹಣೆಬರಹ ಪೂರ್ತಿಯೆಂದರೆ ಪೂರ್ತಿ ಬದಲಾಗಿದೆ. ಅವರೀಗ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟರ ಪಟ್ಟಿಯಲ್ಲಿದ್ದಾರೆ. ಅದರಲ್ಲೂ ಪ್ರಮುಖ ನಿರ್ದೇಶಕರ ಚಿತ್ರಗಳು.

ಈಗ ಪ್ರೇಮ್ ಒಪ್ಪಿಕೊಂಡಿರುವ ಇನ್ನೊಂದು ಚಿತ್ರ 'ಲೋಕಲ್ ವೆಂಕಟೇಶ'. ಹೆಸರೇ ಹೇಳುವಂತೆ ಇದು ಪಕ್ಕಾ ಮಾಸ್ ಸಿನಿಮಾ. ಕರಾಳ ಭೂಗತ ಜಗತ್ತಿಗೆ ಅಮಾಯಕ ಯುವಕ ಹೇಗೆ ದಬ್ಬಲ್ಪಡುತ್ತಾನೆ ಎಂಬ ಕಥೆ. ದೀಪಾ ಸನ್ನಿಧಿ ಅಥವಾ ಪ್ರಿಯಾಮಣಿಯಲ್ಲಿ ಒಬ್ಬರನ್ನು ಪ್ರೇಮ್‌ಗೆ ನಾಯಕಿಯನ್ನಾಗಿ ಆರಿಸಲಾಗುತ್ತದೆ ಎಂದಿದೆ ಚಿತ್ರದ ಮೂಲಗಳು.

ಭೂಗತ ಲೋಕದ ಪಾತ್ರ ಪ್ರೇಮ್‌ಗೆ ಮ್ಯಾಚ್ ಆಗುತ್ತದೆಯೇ? ಇಂತಹ ಪ್ರಶ್ನೆ ಈ ಹಿಂದೆಯೂ ಕೇಳಿ ಬಂದಿತ್ತು. ಅದೇ ಕಾರಣದಿಂದ ಏಕತಾನತೆಯ ಚಿತ್ರಗಳಲ್ಲಿ ನಟಿಸುತ್ತಾ ಬಂದರು ಪ್ರೇಮ್. ಕೊನೆಗೆ ಯಾರಿಗೂ ಬೇಡ ಕಬ್ಬಿನ ಜಲ್ಲೆಯಾಗಿಬಿಟ್ಟರು.

ಹಾಗಾಗಿ ಇಮೇಜ್ ಬದಲಾಯಿಸಬೇಕೆಂದೇ ಪ್ರೇಮ್ 'ಕೆಟ್ಟವನು' ಮತ್ತು 'ಶತ್ರು' ಎಂಬ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಆದರೆ ಅವುಗಳು ಬಿಡುಗಡೆಯಾಗುವ ಯಾವುದೇ ಲಕ್ಷಣಗಳಿಲ್ಲ. ಈ ನಡುವೆ ಇಬ್ಬರು ಜನಪ್ರಿಯ ನಿರ್ದೇಶಕರ ಚಂದ್ರ ಮತ್ತು ಚಾರ್‌ಮಿನಾರ್ ಕೈ ಸೇರಿವೆ.

ಇಂತಹ ಹೊತ್ತಲ್ಲಿ ಭೂಗತ ಲೋಕದ ಕಥೆಯಿದೆ ಎಂದು ಹುಡುಕಿಕೊಂಡು ಬಂದವರು ಸಂಗೀತ ನಿರ್ದೇಶನದ ಅನುಭವ ಹೊಂದಿರುವ ಹೊಸ ನಿರ್ದೇಶಕ ಇಂದ್ರ. ಹಲವು ನಾಯಕರನ್ನು ಎಡ ತಾಕಿದರೂ ಯಾರೂ ಒಪ್ಪಿಕೊಂಡಿರಲಿಲ್ಲ. ಆದರೆ ಪ್ರೇಮ್ ಸೈ ಎಂದಿದ್ದಾರೆ.

ಪಕ್ಕಾ ಕ್ರೈಮ್ ಥ್ರಿಲ್ಲರ್ ಸಿನಿಮಾ ಇದು. ಪ್ರೇಕ್ಷಕರಿಗೆ ಬೋರ್ ಆಗದಂತಹ ಕಥೆಯನ್ನು ಹೆಣೆಯಲಾಗಿದೆ ಎನ್ನುತ್ತಾರೆ ನಿರ್ದೇಶಕ ಇಂದ್ರ. ಅವರದ್ದು ನಿರ್ದೇಶನ ಮಾತ್ರವಲ್ಲ, ಕಥೆ, ಚಿತ್ರಕಥೆ, ಸಂಗೀತ ಕೂಡ ನೀಡುತ್ತಿದ್ದಾರೆ.

ಸದ್ಯ ಪ್ರಮುಖ ಪಾತ್ರವೊಂದಕ್ಕೆ ಭಾವನಾ ಆಯ್ಕೆಯಾಗಿದ್ದಾರೆ. ಉಳಿದಂತೆ ರಂಗಾಯಣ ರಘು, ರವಿಕಾಳೆ ಗ್ಯಾರಂಟಿ. ಸದ್ಯ ಪ್ರೇಮ್ ಬ್ಯುಸಿ ಇರುವುದರಿಂದ ಸೆಪ್ಟೆಂಬರ್ ನಂತರವೇ ಚಿತ್ರೀಕರಣ ಶುರು.

ವೆಬ್ದುನಿಯಾವನ್ನು ಓದಿ