ನಾಗಾರ್ಜುನ ಒಡೆತನದ ಕನ್ವೆನ್ಷನ್‌ ಸೆಂಟರ್‌ ಭಾಗಶಃ ಧ್ವಂಸ: ಕಟ್ಟಡ ಕೆಡವದಂತೆ ಹೈಕೋರ್ಟ್ ಆದೇಶ

Sampriya

ಶನಿವಾರ, 24 ಆಗಸ್ಟ್ 2024 (18:28 IST)
Photo Courtesy X
ಹೈದರಾಬಾದ್‌:  ಇಲ್ಲಿನ ಮದಾಪುರದಲ್ಲಿರುವ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಒಡೆತನದ ಎನ್. ಕನ್ವೆನ್ಷನ್ ಸೆಂಟರ್  ಕೆಲ ಭಾಗಗಳನ್ನು ಇಂದು ಹೈಡ್ರಾ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ಅದನ್ನು ಪ್ರಶ್ನಿಸಿ ನಟ ಹೈಕೋರ್ಟ್‌ ಮೆಟ್ಟಿಲೇರಿದ್ದು, ತಾತ್ಕಾಲಿಕ ತಡೆ ಸಿಕ್ಕಿದೆ.

ವಿವಾದ ನ್ಯಾಯಾಲಯದಲ್ಲಿದ್ದರೂ ನೋಟಿಸ್ ನೀಡದೇ ತೆರವು ಮಾಡಲಾಗಿದೆ ಎಂದು ನಾಗಾರ್ಜುನ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಟ್ಟಡವನ್ನು ಕೆಡವದಂತೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.  

ಸಾರ್ವಜನಿಕ ಭೂಮಿಯನ್ನು ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಕ್ಕೆ ಹೈಡ್ರಾ (ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮೇಲ್ವಿಚಾರಣೆ ಮತ್ತು ರಕ್ಷಣೆ ಸಂಸ್ಥೆ) ಸಂಸ್ಥೆ ಶನಿವಾರ ಆಸ್ತಿಯನ್ನು ನೆಲಸಮಗೊಳಿಸಿದೆ.

10 ಎಕರೆ ಜಾಗದಷ್ಟು ಎನ್. ಕನ್ವೆನ್ಷನ್ ಸೆಂಟರ್ ಹಲವಾರು ಭೂ ಬಳಕೆ ಹಾಗೂ ಪರಿಸರ ನಿಮಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಜೊತೆಗೆ 1.2 ಎಕರೆ ತುಮ್ಮಿಡ್ಕುಂಟಾ ಕೆರೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. 2 ಎಕರೆ ಬಫರ್ ವಲಯವನ್ನು ಬಳಸಿಕೊಂಡು ಎನ್ ಕನ್ವೆನ್ಷನ್ ಸೆಂಟರ್‌ನ್ನು ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಬಂದಿತ್ತು. ಇದೀಗ ಹೈಡ್ರಾ ಸಂಸ್ಥೆಯ ಅಧಿಕಾರಿಗಳು ಸುಮಾರು ಮೂರುವರೆ ಎಕರೆ ಜಾಗದಲ್ಲಿರುವ ಎನ್ ಕನ್ವೆನ್ಷನ್ ಸೆಂಟರ್‌ನ್ನು ತೆರವುಗೊಳಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಗಾರ್ಜುನ ಪೋಸ್ಟ್ ಮಾಡಿದ್ದಾರೆ. ಕಾನೂನು ಉಲ್ಲಂಘಿಸುವ ಯಾವುದೇ ತಪ್ಪನ್ನು ನಾನು ಮಾಡಿಲ್ಲ. ವಿವಾದ ಕೋರ್ಟ್‌ನಲ್ಲಿದ್ದರೂ ತೆರವು ಮಾಡಲಾಗಿದೆ. ನನ್ನ ವಿರುದ್ಧ ಆದೇಶ ಬಂದಿದ್ದರೆ ನಾನೇ ತೆರವು ಮಾಡಿಕೊಳ್ಳುತ್ತಿದ್ದೆ. ಆದರೆ ತೆರವುಗೊಳಿಸಿರುವುದು ಅತೀವ ನೋವನ್ನುಂಟು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ನಾನು ನ್ಯಾಯಾಲಯದಿಂದ ಸೂಕ್ತ ಪರಿಹಾರವನ್ನು ಕೋರುತ್ತೇವೆ ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ