ಪ್ರೇಮ್‌ಗೆ ನಾನು ಮುತ್ತು ಕೊಟ್ಟಿಲ್ಲ; ತುಟಿ ಬಿಚ್ಚಿದ ಕರೀಷ್ಮಾ

ಶುಕ್ರವಾರ, 11 ಫೆಬ್ರವರಿ 2011 (16:34 IST)
PR
ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ 'ಮುತ್ತಿನ ಹಾರ'ದ ಕುರಿತು ಚರ್ಚೆಗಳು ಮುಗಿದ ನಂತರ ನಟಿ ಕರೀಷ್ಮಾ ತನ್ನಾ ಕಾಣಿಸಿಕೊಂಡು ಸ್ಪಷ್ಟನೆ ನೀಡಿದ್ದಾರೆ. ನಾನು ಅಂತಹ ಹುಡುಗಿಯಲ್ಲ, ಪ್ರೇಮ್ ನಾಯಕರಾಗಿರುವ ಚಿತ್ರದಲ್ಲಿ ಅಂತಹ ದೃಶ್ಯಗಳೇ ಇಲ್ಲ. ಸುಳ್ಳು ಪ್ರಚಾರ ನಡೆದಿರುವುದು ನನಗೆ ಬೇಸರವನ್ನುಂಟು ಮಾಡಿದೆ ಎಂದಿದ್ದಾರೆ.

ಕನ್ನಡ ಸಿನಿಮಾಭಿಮಾನಿಗಳಿಗೆ ಗೊತ್ತಿರುವಂತೆ ಇದು ಲವ್ಲಿ ಸ್ಟಾರ್ ಪ್ರೇಮ್ ನಾಯಕರಾಗಿರುವ 'ಐ ಯಾಮ್ ಸಾರಿ, ಬನ್ನಿ ಮತ್ತೆ ಪ್ರೀತ್ಸೋಣ' ಚಿತ್ರದ ಕುರಿತಾದ ವಿವಾದ. ಈ ಚಿತ್ರದಲ್ಲಿ ಪ್ರೇಮ್ ಬಹುತೇಕ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ, ನಾಯಕಿಯ ತುಟಿಗಳನ್ನೂ ಕಚ್ಚಿದ್ದಾರಂತೆ. ಹೆಂಡತಿ ಜಗಳ ಮಾಡಿದ ಮೇಲೆ ಅದನ್ನು ಚಿತ್ರದಿಂದ ತೆಗೆಯಬೇಕೆಂದು ತರಲೆ ಮಾಡಿದ್ದಾರಂತೆ ಎಂದೆಲ್ಲ ಸುದ್ದಿಯಾಗಿತ್ತು.

ಇದರಿಂದ ಭಾರೀ ಅಪಮಾನಕ್ಕೊಳಗಾಗಿರುವ ಮುಂಬೈ ಮೂಲದ ಮಾಡೆಲ್, ಟಿವಿ ನಟಿ ಬೆಂಗಳೂರಿಗೆ ಬಂದು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತ ಸುದ್ದಿಗಳನ್ನು ಕೆಲವು ವೆಬ್‌ಸೈಟ್‌ಗಳಲ್ಲಿ ಓದಿದಾಗ ನನಗೆ ಆಘಾತವಾಯಿತು. ತಕ್ಷಣವೇ ನಾನು ನಿರ್ದೇಶಕ ರವೀಂದ್ರ ಅವರನ್ನು ಸಂಪರ್ಕಿಸಿ, ಇದೆಲ್ಲ ಹೇಗಾಯಿತು ಎಂದು ಪ್ರಶ್ನಿಸಿದೆ. ಅವರ ಉತ್ತರವೂ ನನಗೆ ಸಮಾಧಾನ ತರಲಿಲ್ಲ. ಹಾಗಾಗಿ ನಾನೇ ನೇರವಾಗಿ ಬಂದು ಪತ್ರಕರ್ತರ ಜತೆ ಮಾತನಾಡುವುದು ಒಲಿತು ಎಂದು ಬಂದಿದ್ದೇನೆ. ಪ್ರಕಟವಾಗಿರುವ ವರದಿಗಳಲ್ಲಿ ಯಾವುದೇ ಹುರುಳಿಲ್ಲ ಎಂದರು ಕರೀಷ್ಮಾ.

ಕಿಸ್ಸಿಂಗ್ ಮತ್ತು ಅಶ್ಲೀಲ ದೃಶ್ಯಗಳಲ್ಲಿ ನಾನು ಪ್ರೇಮ್ ಜತೆ ಕಾಣಿಸಿಕೊಂಡಿದ್ದೇನೆ ಎಂದು ವರದಿಗಳು ಹೇಳಿದ್ದವು. ವಾಸ್ತವ ವಿಚಾರವೆಂದರೆ, ಅಂತಹ ದೃಶ್ಯಗಳುಳ್ಳ ಚಿತ್ರಕ್ಕೆ ಹೇಳಿದ ಹುಡುಗಿ ನಾನಲ್ಲ. 'ಐ ಯಾಮ್ ಸಾರಿ, ಬನ್ನಿ ಮತ್ತೆ ಪ್ರೀತ್ಸೋಣ' ಚಿತ್ರ ಕುಟುಂಬ ಸಮೇತ ನೋಡಬಹುದಾದ, ಅಶ್ಲೀಲತೆಯಿಲ್ಲದ ಸಿನಿಮಾ ಎಂದು ಉದ್ದುದ್ದ ವಿವರಗಳನ್ನು ನೀಡಿದರು.

ಚಿತ್ರದಲ್ಲಿ ಮೊದಲ ರಾತ್ರಿ ದೃಶ್ಯವಿರುವುದು ಹೌದೆಂದು ಒಪ್ಪಿಕೊಂಡರು. ಆದರೆ ಅದರಲ್ಲಿ ಯಾವುದೇ ಅಶ್ಲೀಲತೆಯಿಲ್ಲವಂತೆ. ಆಧುನಿಕ ಧಿರಿಸುಗಳೊಂದಿಗೆ ನಾನು ಕಾಣಿಸಿಕೊಂಡಿದ್ದೇನೆ. ನನ್ನದು ಪ್ರಮುಖ ನಾಯಕಿ ಪಾತ್ರ. ಇಲ್ಲಿ ಯಾವುದೇ ವಿವಾದಗಳಿಲ್ಲ ಎಂದು ಹೇಳಿದ ನಂತರ ಸರಿಯಾಗಿ ಉಸಿರು ಮೇಲೆಳೆದುಕೊಂಡರು.

ಚಿತ್ರದಲ್ಲಿನ ಕರೀಷ್ಮಾ ಜತೆಗಿನ ಕಿಸ್ಸಿಂಗ್ ವಿವಾದ ಬಹಿರಂಗವಾದ ನಂತರ ಪ್ರೇಮ್ ಪತ್ನಿ ಚಿತ್ರೀಕರಣ ಸ್ಥಳಕ್ಕೆ ಪ್ರತಿದಿನ ಬರುತ್ತಿದ್ದರು. ಅಲ್ಲದೆ, ಮುತ್ತಿನ ದೃಶ್ಯಕ್ಕೆ ಕತ್ತರಿ ಹಾಕುವಂತೆ ನಿರ್ಮಾಪಕರ ಮೇಲೆ ಒತ್ತಡ ಹೇರಿದ್ದರು ಎಂದು ಈ ಹಿಂದೆ ಆರೋಪಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ