ಬರಗೂರರ ಉಗ್ರಗಾಮಿಯ ಶತದಿನ ಚಿತ್ರ ಯಾತ್ರೆ

MOKSHA
ಬರಗೂರು ರಾಮಚಂದ್ರಪ್ಪ ಮತ್ತೊಮ್ಮೆ ಚಿತ್ರರಂಗಲ್ಲಿ ಠೇಂಕಾರ ಮೊಳಗಿಸಿದ್ದಾರೆ. ಅವರೇ ನಿರ್ದೇಶಿಸಿರುವ ಉಗ್ರಗಾಮಿ ಚಿತ್ರವನ್ನು ರಾಜ್ಯಾದ್ಯಂತ ಪ್ರದರ್ಶಿಸಲು ವೇದಿಕೆ ಸಜ್ಜು ಮಾಡಿದ್ದಾರೆ. ಇದೇ 26ರಂದು ಇಲ್ಲಿನ ಬಾದಾಮಿ ಹೌಸ್‌ನ ಪ್ರಿಯದರ್ಶಿನಿ ಚಿತ್ರಮಂದಿರದಲ್ಲಿ ಉದ್ಘಾಟನೆ. ಲೋಕಾರ್ಪಣೆ ಮಾಡುವವರು ಡಾ. ಚಂದ್ರಶೇಖರ ಕಂಬಾರ. ಅತಿಥಿಗಳಾಗಿ ಟಿ.ಎಸ್. ನಾಗಾಭರಣ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಆಗಮಿಸುವರು.

ಉಗ್ರಗಾಮಿ ಶತದಿನ ಯಾತ್ರೆ ಎನ್ನುವುದು ಬರಗೂರು ರಾಮಚಂದ್ರಪ್ಪ ಹುಟ್ಟುಹಾಕಿರುವ ಪರ್ಯಾಯ ಚಿತ್ರ ಬಿಡುಗಡೆ ಪ್ರಯೋಗ. ಈಗಾಗಲೇ ಕನ್ನಡ ಚಿತ್ರರಂಗ ಹಲವು ಸಮಸ್ಯೆಗಳಿಗೆ ರತ್ನಗಂಬಳಿ ಹಾಸಿದೆ. ಚಿತ್ರಮಂದಿರ ಸಮಸ್ಯೆ ಎಡೆಬಿಡದೇ ಕಾಡುತ್ತಿದೆ. ತಮ್ಮ ಚಿತ್ರವನ್ನು ತೆರೆಕಾಣಿಸುವ ತವಕದಲ್ಲಿ ನಿರ್ಮಾಪಕರು ಸೋಲಿನ ದಡ ಸೇರುತ್ತಿದ್ದಾರೆ. ಕೆಲ ಕಲಾತ್ಮಕ ಚಿತ್ರಗಳಿಗೆ ಬಿಡುಗಡೆ ಭಾಗ್ಯವೇ ಸಿಗುತ್ತಿಲ್ಲ.

ಈ ಎಲ್ಲ ಅಂಶಗಳನ್ನೂ ಅರಿತ ಬರಗೂರು, ಕಳೆದ ಬಾರಿಯಿಂದ, ಅಂದರೆ ಏಕಲವ್ಯ ಚಿತ್ರದ ನಂತರ ಶತದಿನ ಚಿತ್ರ ಯಾತ್ರೆ ಎಂಬ ಹೊಸ ಕಾನ್ಸೆಪ್ಟ್ ಹುಟ್ಟುಹಾಕಿದ್ದಾರೆ. ಸ್ನೇಹಿತರ ಸಹಕಾರದೊಂದಿಗೆ ನಡೆಯುವ ಸೃಜನಶೀಲ ಸಾಹಸವಿದು. ರಾಜ್ಯದ ನಾನಾ ಭಾಗಗಳಲ್ಲಿ ಅವರ `ಉಗ್ರಗಾಮಿ' ಚಿತ್ರವನ್ನು ಪ್ರದರ್ಶಿಸಲಿದ್ದಾರೆ. ಅದಕ್ಕೆ 'ಉಗ್ರಗಾಮಿ- ಶತದಿನ ಚಿತ್ರ ಯಾತ್ರೆ' ಎಂದು ಹೆಸರು. ಚಿತ್ರ ಪ್ರದರ್ಶನ ಒಂದೂರಿಂದ ಮತ್ತೊಂದೂರಿಗೆ ಪಯಣಿಸುವುದೇ ಈ ಶತದಿನ ಚಿತ್ರ ಯಾತ್ರೆ.

ಚಿತ್ರವೊಂದರ ಬಿಡುಗಡೆ ಎಂದರೆ, ಅದು ಬಿಡುಗಡೆಯಾಗಬೇಕು, ಜನ ನೋಡಬೇಕು, ಹಣ ಗಳಿಸಬೇಕು ಎಂಬ ಮೂರು ಅಂಶಗಳಿರುತ್ತದೆ. ಈ ಮೂರೂ ಅಂಶಗಳನ್ನು ಉಗ್ರಗಾಮಿ ಪೂರೈಸಲಿದೆ ಎನ್ನುತ್ತಾರೆ ಬರಗೂರು. ಚಿತ್ರ ಪ್ರದರ್ಶನದ ಜತೆಗೆ ಚರ್ಚೆಯೂ ಇರುತ್ತದೆ.

ಪೊಲೀಸರು ಒಬ್ಬ ಉಗ್ರಗಾಮಿಯನ್ನು ಅರಸಿ ಬರುತ್ತಾರೆ. ಆಗ ಆತ ಸ್ವತಂತ್ರಪುರ ಎಂಬ ಊರು ಸೇರುತ್ತಾನೆ. ರಾತ್ರಿ ವೇಳೆ ಒಂದು ಮನೆ ಸೇರಿಕೊಳ್ಳುತ್ತಾನೆ. ಆ ಮನೆಯಲ್ಲಿ ನವ ದಂಪತಿ ಮೊದಲ ರಾತ್ರಿಗೆ ಸಜ್ಜಾಗುತ್ತಿರುತ್ತಾರೆ. ಆ ಹುಡುಗಿ ಈ ಉಗ್ರಗಾಮಿಯನ್ನು ಕಂಡು ಶಾಕ್ ಆಗುತ್ತಾಳೆ. ಅಲ್ಲಿಂದ ಗಂಡನಿಗೆ ಅನುಮಾನ. ಮುಂದೇನು? 'ಉಗ್ರಗಾಮಿ' ನಿಮ್ಮೂರಿಗೆ ಬಂದಾಗ ನೋಡಿ! ಈ ಹೊಸ ಪ್ರಯೋಗಕ್ಕೆ ಪ್ರವೀಣ್ ಗೋಡ್ಖಿಂಡಿ ಸಂಗೀತ ನಿರ್ದೇಶನ ನೀಡಿದ್ದಾರೆ. ಎಲ್ಲ ವಾದ್ಯಗಳನ್ನು ಸ್ವತಃ ತಾವೇ ನುಡಿಸುವ ಮೂಲಕ ಸಂಗೀತ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ.

ವೆಬ್ದುನಿಯಾವನ್ನು ಓದಿ