ಬಾಲಿವುಡ್ ಆಸೆಗೆ ಕನ್ನಡಕ್ಕೆ ಕೈ ಕೊಟ್ಟರೇ ನಿಧಿ?

PR


ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಕನ್ನಡ ಚಿತ್ರರಂಗದ ಪಾಲಿಗೆ ಗಗನ ಕುಸುಮವಾಗುತ್ತಿದ್ದಾರೆಯೇ? ಯಾವುದೇ ಕನ್ನಡ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲವೇ? ಹೌದು, ತಾನು ಅಣ್ಣಾ ಬಾಂಡ್ ಹೊರತುಪಡಿಸಿದರೆ ಬೇರೆ ಯಾವುದೇ ಸ್ಯಾಂಡಲ್‌ವುಡ್ ಚಿತ್ರದಲ್ಲಿ ನಟಿಸುತ್ತಿಲ್ಲ ಅಂತ ಸ್ವತಃ ನಿಧಿಯೇ ಒಪ್ಪಿಕೊಂಡಿದ್ದಾರೆ.

ಇದಕ್ಕೆ ಕಾರಣ ಬಾಲಿವುಡ್, ಬಾಲಿವುಡ್, ಬಾಲಿವುಡ್! ಹಿಂದಿ ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಎಲ್ಲರ ಆಸೆಯಂತೆ ಅವರೂ ಅದಕ್ಕಾಗಿ ಮುಂಬೈಯಲ್ಲೇ ಬೀಡು ಬಿಟ್ಟಿದ್ದಾರೆ. ತವರು ಮನೆಯಂತಿದ್ದ ಬೆಂಗಳೂರು ಅವರ ಪಾಲಿಗೀಗ ದೂರದ ಮನೆಯಾಗಿದೆ. ಇಲ್ಲಿಗ ಬರುತ್ತಿರುವುದೇ ಅಪರೂಪ.

ಹಾಗೆಂದು ಅಭಿನಯಕ್ಕೆ ಅವಕಾಶ ಕೊಟ್ಟು ಬೆನ್ನು ತಟ್ಟಿದ ಕನ್ನಡ ಚಿತ್ರರಂಗವನ್ನು ನಿಧಿ ಮರೆಯುತ್ತಿದ್ದಾರೆ ಎಂದು ಯಾರೂ ಭಾವಿಸಬೇಕಾಗಿಲ್ಲ. ಸದ್ಯಕ್ಕೆ ಪುರುಸೊತ್ತಿಲ್ಲ. 'ಓ ಮೈ ಗಾಡ್' ಎಂಬ ಹಿಂದಿ ಚಿತ್ರದಲ್ಲಿ ಬ್ಯುಸಿ. ಜತೆಗೆ ಇನ್ನೊಂದಷ್ಟು ಆಫರುಗಳು ಕೂಡ ಕೈಗೆಟಕುವಂತಿವೆ. ಅವುಗಳನ್ನು ಬಗಲಿಗೆ ಹಾಕಿಕೊಳ್ಳುವತ್ತಲೇ ಗಮನ ಜಾಸ್ತಿಯಾಗಿದೆ.

PR


ಹಾಗಾಗಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕರಾಗಿರುವ 'ಅಣ್ಣಾ ಬಾಂಡ್' ಬಿಟ್ಟರೆ ಬೇರೆ ಕನ್ನಡ ಚಿತ್ರ ಕೈಯಲ್ಲಿಲ್ಲ. ಅದರ ಅರ್ಥ ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಿದ್ದಾರೆಂದು ಅಲ್ಲವಂತೆ. ಅಲ್ಲಿ ಗಟ್ಟಿಯಾಗಿ ನೆಲೆಯೂರಲು ಯತ್ನಿಸುತ್ತಿದ್ದಾರೆ, ಅಷ್ಟೇ!

'ಓ ಮೈ ಗಾಡ್' ಉಮೇಶ್ ಶುಕ್ಲಾ ನಿರ್ದೇಶನದ ಚಿತ್ರ. ಕಲರ್ಸ್ ಚಾನೆಲ್‌ನ ಮಾಜಿ ಪ್ರೊಗ್ರಾಮಿಂಗ್ ಮುಖ್ಯಸ್ಥ ಅಶ್ವಿನಿ ಯಾರ್ಡಿ ಇದರ ನಿರ್ಮಾಪಕರು. ಪರೇಶ್ ರಾವಲ್‌ರ 'ಕಂಜಿ ವಿರುದ್ಧ್ ಕಂಜಿ' ಎಂಬ ಸೂಪರ್ ಹಿಟ್ ಗುಜರಾತಿ ನಾಟಕವನ್ನು (ಹಿಂದಿಯಲ್ಲಿ 'ಕೃಷ್ಣ ವರ್ಸಸ್ ಕನ್ಹಾರಿಯಾ') ಆಧರಿಸಿದ ಈ ಚಿತ್ರದಲ್ಲಿ ಕಿಲಾಡಿ ಅಕ್ಷಯ್ ಕುಮಾರ್, ಪರೇಶ್ ರಾವಲ್ ಮತ್ತು ಮಿಥುನ್ ಚಕ್ರವರ್ತಿ ಕೂಡ ನಟಿಸುತ್ತಿದ್ದಾರೆ.

ಅಂದ ಹಾಗೆ ನಿಧಿ ಈಗ ಬರ್ತ್ ಡೇ ಮೂಡ್‌ನಲ್ಲಿರುವುದು ಹೆಚ್ಚು ಸುದ್ದಿಯಾದಂತಿಲ್ಲ. ಹೌದು, ಫೆಬ್ರವರಿ 16ರಂದು ಸಿಂಪಲ್ಲಾಗಿ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಮತ್ತೆ ಕನ್ನಡಕ್ಕೆ ಬರುತ್ತೇನೆ ಎಂಬ ಭರವಸೆ ನೀಡಿರುವ ಅವರಿಗೆ ಹ್ಯಾಪಿ ಬರ್ತ್ ಡೇ ಎಂಬ ನಿಮ್ಮ ಹಾರೈಕೆ ಇರಲಿ.

ವೆಬ್ದುನಿಯಾವನ್ನು ಓದಿ