'ಬಿಗ್ ಬಾಸ್'ನಿಂದ ಬ್ರಹ್ಮಾಂಡ ಔಟ್, ಅಲ್ಲಲ್ಲ.. ರಿಷಿಕಾ ಸಿಂಗ್..!

ಶನಿವಾರ, 25 ಮೇ 2013 (13:49 IST)
PR
PR
ಇದು ಕಿಚ್ಚ ಸುದೀಪ್ 'ಬಿಗ್ ಬಾಸ್' ವೀಕ್ಷಕರನ್ನು ಗೊಂದಲಕ್ಕೆ ತಳ್ಳಿದ ಪರಿ. ಬ್ರಹ್ಮಾಂಡ ಗುರುಗಳೇ, ನೀವು ಮನೆಯ ಸದಸ್ಯರಿಗೆ ಏನಾದರೂ ಹೇಳುವುದಿದ್ದರೆ ಹೇಳಿ, ಐದು ನಿಮಿಷ ಕಾಲಾವಕಾಶವಿದೆ. ಇಲ್ಲಿ ನಾನು ಕಾಯುತ್ತಿರುತ್ತೇನೆ ಎಂದಿದ್ದರು ಸುದೀಪ್. ನಿಜ ಎಂದು ನಂಬಿದ ಬ್ರಹ್ಮಾಂಡ ಹೊರಡಲು ರೆಡಿಯಾಗಿದ್ದರು.

ಮನೆಯ ಬಹುತೇಕ ಮಹಿಳಾ ಸದಸ್ಯರು ಬ್ರಹ್ಮಾಂಡ ಕಾಲಿಗೆ ಬಿದ್ದು ನಮಸ್ಕರಿಸಿ, ಆಶೀರ್ವಾದ ಪಡೆದರು. ಯಾರೂ ಜಗಳ ಮಾಡಬೇಡಿ, ಒಳ್ಳೆ ರೀತಿಯಲ್ಲಿ ಇರಿ ಎಂದು ಗುರುಗಳು ಹರಸಿದರು. ಅಷ್ಟಾಗುತ್ತಿದ್ದಂತೆ ಕಿಚ್ಚ ಸುದೀಪ್ ಮಧ್ಯಪ್ರವೇಶಿಸಿದರು. ನಿಮಗೆ ಐದು ನಿಮಿಷ ಕಾಲಾವಕಾಶ ನೀಡಿದ್ದೆ, ಆದರೆ ನೀವಿನ್ನೂ ಮಾತನಾಡುತ್ತಲೇ ಇದ್ದೀರಿ... ನೀವು ಸೇಫ್... ರಿಷಿಕಾ.. ನಿಮಗಾಗಿ ಕಾಯುತ್ತಿರುತ್ತೇನೆ ಎಂದು ತೆರೆ ಎಳೆದರು.

ಖುಷಿಯಿಂದ ಸೋಫಾದ ಮೇಲೆ ಕುಸಿದು ಕುಳಿತರು ಬ್ರಹ್ಮಾಂಡ ಗುರುಗಳು. ರಿಷಿಕಾ ಮುಖದಲ್ಲಿ ನಗುವಿದ್ದರೂ, ಕಳೆ ಮಾಯವಾಗಿತ್ತು. ಎಲ್ಲರಿಗೂ ಒಂದಷ್ಟು ಲೊಚ ಲೊಚ ಎಂದು ಮುತ್ತು ಕೊಟ್ಟವರೇ ಮನೆಯಿಂದ ಹೊರ ಬಿದ್ದರು.

ಚಂದ್ರಿಕಾ-ನಿಖಿತಾ ಪ್ರವರ:
ಸದಾ ಜಗಳಗಂಟಿಯಾಗಿಯೇ ಗುರುತಿಸಿಕೊಂಡಿರುವ ಪುರಾತನ ಹೀರೋಯಿನ್ ಚಂದ್ರಿಕಾರವರು ಸುದೀಪ್ ಮುಂದೆಯೂ ಮುಂದುವರಿಸಿದರು. ನಿಖಿತಾ ಕೂಡ ಅರ್ಧ ಇಂಗ್ಲಿಷ್, ಕಾಲು ಕನ್ನಡ, ಕಾಲು ತೆಲುಗಿನಲ್ಲಿ ತಿರುಗೇಟು ನೀಡುತ್ತಿದ್ದರು. ಟಿಶ್ಯೂ ಪೇಪರನ್ನು ಡಸ್ಟ್ ಬಿನ್‌ಗೆ ಹಾಕುವುದಿಲ್ಲ, ನನ್ನ ಮಗುವಿನ ಬಗ್ಗೆ ಏನೇನೋ ಮಾತನಾಡುತ್ತಾಳೆ ಎಂದೆಲ್ಲ ಚಂದ್ರಿಕಾ ಮಾಡಿದ ಆರೋಪವನ್ನು ನಿಖಿತಾ ಅಲ್ಲಗಳೆದರು.

ಚಂದ್ರಿಕಾ ತನ್ನ ವರ್ತನೆಯನ್ನು ತಿದ್ದಿಕೊಳ್ಳಬೇಕು ಎಂದು ಪರೋಕ್ಷವಾಗಿ ಅರ್ಥವಾಗುವಂತೆ ಸುದೀಪ್ ಹೇಳಿದರು. ನಾವು ಮಾಡಿದ ತಪ್ಪನ್ನು ಸಮರ್ಥಿಸಿಕೊಳ್ಳುವುದು ಸುಲಭ, ತಕ್ಷಣ ಕ್ಷಮೆ ಸಿಗಬೇಕು ಎಂದು ಬಯಸುತ್ತೇವೆ. ಅದೇ ರೀತಿ ಇನ್ನೊಬ್ಬರನ್ನೂ ಯಾಕೆ ನೋಡಬಾರದು ಎಂದು ಪ್ರಶ್ನಿಸಿದರು. ಕಿಚ್ಚನ ಮಾತಿಗೆ ಕಟ್ಟುಬಿದ್ದು ಇಬ್ಬರೂ ದೋಸ್ತ್‌ಗಳಾಗಿ ಇರಲು ನಿರ್ಧರಿಸಿದರು. ಸುದೀಪ್ ಎದುರಲ್ಲಿಯೇ ಚಂದ್ರಿಕಾ ಮತ್ತು ನಿಖಿತಾ ಮಾತು ಕೊಟ್ಟರು.

ಬ್ರಹ್ಮಾಂಡ ಗುರುಗಳ ತ್ರಿಶೂಲ ವಿವಾದವನ್ನೂ ಸುದೀಪ್ ಪ್ರಶ್ನಿಸಿದರು. ಅಷ್ಟೆಲ್ಲ ಯಾಕೆ ಬೇಕಿತ್ತು ಎಂದಾಗ ಮತ್ತೆ ಗದ್ಗದಿತರಾದರು ಬ್ರಹ್ಮಾಂಡ. ಸ್ವತಃ ನನಗೆ ದೇವಿ ಕನಸಿನಲ್ಲಿ ಬಂದು ಕೊಟ್ಟಿರುವ ವೇಲಾಯುಧವನ್ನು ಬೇರೆ ಯಾರೂ ಮುಟ್ಟುವುದು ನನಗಿಷ್ಟವಿಲ್ಲ, ಅದನ್ನು ಪ್ರಾಣಕ್ಕಿಂತ ಹೆಚ್ಚಾಗಿ ಇಷ್ಟಪಡುತ್ತೇನೆ ಎಂದರು.

ರಿಷಿಕಾ ಸಿಂಗ್‌ಗೆ ಬಿಗ್ ಬಾಸ್ ಕೊಟ್ಟ ವಿಶೇಷ ಅಧಿಕಾರ ಚಂದ್ರಿಕಾ-ನಿಖಿತಾರನ್ನು ತಗಲಾಕಿಕೊಳ್ಳುವಂತೆ ಮಾಡಿತು. ಅವರಿಬ್ಬರೂ ಮುಂದಿನ ಆದೇಶದವರೆಗೆ ಕೈಕೋಲದಲ್ಲಿ ಜತೆಯಾಗಿಯೇ ಇರಬೇಕು.

ವೆಬ್ದುನಿಯಾವನ್ನು ಓದಿ