'ಬಿಗ್ ಬಾಸ್'ನಿಂದ ವಿನಾಯಕ ಜೋಷಿ ಔಟ್, ರಾಜೇಶ ಮನೆಗೆ!

ಶನಿವಾರ, 27 ಏಪ್ರಿಲ್ 2013 (14:17 IST)
PR
ಕಿಚ್ಚ ಸುದೀಪ್ ಶುಕ್ರವಾರ 'ಬಿಗ್ ಬಾಸ್'ನಲ್ಲಿ ಕೆಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾದರು. ಈ ನಡುವೆ ಹಳ್ಳಿ ಹೈದ ರಾಜೇಶ ಮನೆಯಿಂದ ಬೀಳ್ಕೊಂಡರೆ, ವಿನಾಯಕ ಜೋಷಿಯನ್ನು ಹೊರ ದಬ್ಬಲಾಯಿತು!

ಈ ಹಿಂದೆ ಹೇಳಿದಂತೆ ಹಳ್ಳಿ ಹೈದ ರಾಜೇಶ 'ಬಿಗ್ ಬಾಸ್'ಗೆ ಸ್ಪರ್ಧಿಯಾಗಿ ಬಂದಿರಲಿಲ್ಲ. ವಿಶೇಷ ಅತಿಥಿಯಾಗಷ್ಟೇ ಆಗಮಿಸಿದ್ದ. ಅದರಂತೆ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಕಡಿಮೆ ಎರಡು ದಿನ ಕಳೆದಿದ್ದಾನೆ. ಮನೆಯಲ್ಲಿನ ಹಲವು ಸದಸ್ಯರ ನಡುವೆ ಸಿಕ್ಕಿದ ಸಮಯದಲ್ಲಿ ಒಂದಷ್ಟು ಹರಟಿದ್ದಾನೆ. ತನ್ನ ಮುಗ್ಧತನದ ಪ್ರದರ್ಶನವನ್ನೂ ಮಾಡಿದ್ದಾನೆ. ಆತ ಸ್ಪರ್ಧಿ ಅಲ್ಲದೇ ಇರುವುದರಿಂದ ಬಿಗ್ ಬಾಸ್ ಯಾವುದೇ ಟಾಸ್ಕ್ ನೀಡಿರಲಿಲ್ಲ. ಮನೆಯ ಸದಸ್ಯರ ವಿಶೇಷ ಉಪಚಾರ ಸ್ವೀಕರಿಸಿ ಮನೆಯಿಂದ ಮೈಸೂರಿನ ತನ್ನ ಹಾಡಿಯತ್ತ ಹೊರಟಿದ್ದಾನೆ.

ಜೋ ಅತಿರೇಕದ ವರ್ತನೆಗೆ ಸುದೀಪ್ ಒಂದು ಹಂತದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಿಂದಿನ ವಾರದಲ್ಲೂ ಸುದೀಪ್ ಇದೇ ರೀತಿ ಜೋನನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿನಾಯಕ ಜೋಷಿಯ ಹುಚ್ಚಾಟಕ್ಕೆ ತೀರಾ ಮಕ್ಕಳಾಟದ ವರ್ತನೆ ತೋರಿದವರು ಅಪರ್ಣಾ. ಅವರು ತೀರಾ ಬಾಲಿಶ ವರ್ತನೆ ತೋರಿಸುತ್ತಾ, ಅತ್ತು ಕರೆದು ರಂಪ ಮಾಡಿದರು. ತಾನು ಮುಗ್ಧೆ ಎಂದು ಮತ್ತೆ ಮತ್ತೆ ಅಪರ್ಣಾ ಹೇಳಿಕೊಳ್ಳುತ್ತಿದ್ದುದು ತಮಾಷೆ ಎನಿಸಿತು.

ಈ ವಾರದ ನಾಮಿನೇಷನ್ ವಿನಾಯಕ ಜೋಷಿಯನ್ನು ಬಿಗ್ ಬಾಸ್ ಮನೆಯಿಂದ ಹೊರ ದಬ್ಬಿದೆ. ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕಿಕೊಂಡು, ವೃಥಾ ಇನ್ನೊಬ್ಬರ ಮೇಲೆ ಆರೋಪ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದ ಜೋ ಎಂದಿನಂತೆ ಕಣ್ಣೀರ ಧಾರೆಯಾಗಿ ಮನೆಯಿಂದ ಹೊರ ನಡೆದರು.

ಈ ಸಂದರ್ಭ ತನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಬೇಡಿಕೊಂಡರು ಜೋ. ಹೊರಡುವ ಮೊದಲು ಎಲ್ಲರನ್ನೂ ಅಪಾದ ಮಸ್ತಕ ಹೊಗಳಿದರು. ಎಲ್ಲರಿಂದಲೂ ನಾನು ಒಂದೊಂದು ಗುಣ ಕಲಿತಿದ್ದೇನೆ ಎಂದರು. ಮುಕ್ಕಾಲು ಲೀಟರ್ ಕಣ್ಣೀರು ಸುರಿಸಿ, ಎಲ್ಲರನ್ನೂ ಅಪ್ಪಿ ಹಿಡಿದು ಮನಸ್ಸಿಲ್ಲದ ಮನಸ್ಸಿನಿಂದ ಬಿಗ್ ಬಾಸ್ ಮನೆಯಿಂದ ಬೀಳ್ಕೊಂಡರು.

ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನನಗಿಂತ ಅನರ್ಹರು ತುಂಬಾ ಮಂದಿ ಇದ್ದಾರೆ ಎಂದು ಜೋ ಹೇಳಿಕೊಂಡಿದ್ದರು. ಆದರೆ ಬಿಗ್ ಬಾಸ್ ಮಾತ್ರ ಜೋ ಅನರ್ಹ ಎಂದು ನಿರ್ಧರಿಸಿತ್ತು.

ವೆಬ್ದುನಿಯಾವನ್ನು ಓದಿ