ಭಟ್ಟರ 'ಡ್ರಾಮಾ' ಟೀಮ್‌ಗೆ ಪ್ರಕಾಶ್ ರೈ ಎಂಟ್ರಿ

SUJENDRA
ಯೋಗರಾಜ್ ಭಟ್‌ರ 'ಡ್ರಾಮಾ' ಯಾಕೋ ಶುರುವಾಗುತ್ತಲೇ ಇಲ್ಲ. ಒಂದಿಲ್ಲ ಒಂದು ಅಡೆ-ತಡೆಗಳು ಎದುರಾಗುತ್ತಿವೆ. ಆದರೂ ಇನ್ನು ಕೆಲವೇ ದಿನಗಳಲ್ಲಿ ಪರದೆ ಎತ್ತಲು ರೆಡಿಯಾಗಿರುವ ಟೀಮ್‌ಗೆ ಈಗ ಪ್ರಕಾಶ್ ರೈ ಕೂಡ ಎಂಟ್ರಿ ಪಡೆದಿದ್ದಾರೆ.

ತನ್ನ ನಿರ್ದೇಶನದ 'ಧೋನಿ' ಚಿತ್ರ ಬಿಡುಗಡೆಯಾದ ನಂತರ ಅದರಲ್ಲೇ ಮುಳುಗಿರುವ ಪ್ರಕಾಶ್ ರೈ ಕನ್ನಡಕ್ಕೆ ಬರುತ್ತಿರುವುದು ಹೌದು ಎಂದು ಡ್ರಾಮಾ ನಿರ್ಮಾಪಕ ಜಯಣ್ಣ ಖಚಿತಪಡಿಸಿದ್ದಾರೆ. ಅವರ ಡೇಟ್ಸ್ ಬಗ್ಗೆ ನಮಗಿನ್ನೂ ಖಾತ್ರಿಯಾಗಿಲ್ಲ. ಆದರೆ ರೈ ನಮ್ಮ ಟೀಮ್ ಸೇರಿಕೊಂಡಿರುವುದು ನಿಜ ಎಂದು ಹೇಳಿದ್ದಾರೆ.

ಅದೆಲ್ಲ ಸರಿ, ಯಾವತ್ತೋ ಪರದೆ ಎಳೆಯಬೇಕಿದ್ದ ಡ್ರಾಮಾ ಯಾಕೆ ಇನ್ನೂ ಎದ್ದು ನಿಲ್ಲುತ್ತಿಲ್ಲ? ಕಾರಣ ಹಲವು. ಒಂದು ಕಡೆಯಿಂದ ನಿರ್ದೇಶಕರು, ಇನ್ನೊಂದು ಕಡೆಯಿಂದ ನಾಯಕ-ನಾಯಕಿ.

ಹತ್ತಿರದ ಸಂಬಂಧಿಯೊಬ್ಬರ ಅನಾರೋಗ್ಯದಿಂದಾಗಿ ನಿರ್ದೇಶಕ ಯೋಗರಾಜ್ ಭಟ್ ನಿಸ್ಸಹಾಯಕರಾಗಿದ್ದರು. ಅತ್ತ ಕಥೆಗೂ ಒಂದು ಅಂತಿಮ ರೂಪ ಕೊಡಲಾಗದೆ, ಚಿತ್ರೀಕರಣಕ್ಕೂ ತಯಾರಿ ನಡೆಸಲಾಗದೆ ಸುಮ್ಮನಿರಬೇಕಾದ ಪರಿಸ್ಥಿತಿ ಅವರಿಗೆ ಒದಗಿತ್ತು. ಈಗಷ್ಟೇ ಅವರು ಚೆನ್ನೈಗೆ ಹೋಗಿದ್ದಾರೆ. ಚಿತ್ರದ ತಯಾರಿಗಾಗಿ ಅಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಗುತ್ತದೆ ಎನ್ನುತ್ತವೆ ಮೂಲಗಳು.

ನಿರ್ಮಾಪಕ ಜಯಣ್ಣ ಪ್ರಕಾರ, ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಆರಂಭ. ಅದಕ್ಕೂ ಮೊದಲು ಮುಹೂರ್ತಕ್ಕೊಂದು ಮುಹೂರ್ತ ನಿಗದಿ.

ಸಮಸ್ಯೆ ಭಟ್ರದ್ದು ಮಾತ್ರವಲ್ಲ, ನಾಯಕ-ನಾಯಕಿಯರದ್ದೂ ಇದೆ. ನಾಯಕ ಯಶ್ ಈಗ ಸಿಕ್ಕಾಪಟ್ಟೆ ಬ್ಯುಸಿ. ರಾಧಿಕಾ ಕುಮಾರಸ್ವಾಮಿ ನಿರ್ಮಾಣದ 'ಲಕ್ಕಿ' ಪ್ರಚಾರದಲ್ಲಿ ವ್ಯಸ್ತರಾಗಿರುವುದರಿಂದ ಅವರಿಗೂ ಡ್ರಾಮಾದತ್ತ ತಲೆ ಹಾಕುವುದು ಸಾಧ್ಯವಾಗುತ್ತಿಲ್ಲ. ಅತ್ತ ನಾಯಕಿ ರಾಧಿಕಾ ಪಂಡಿತ್, ಪ್ರಜ್ವಲ್ ದೇವರಾಜ್ ನಾಯಕರಾಗಿರುವ 'ಸಾಗರ್' ಚಿತ್ರದಲ್ಲಿ ಮುಳುಗಿದ್ದಾರೆ. ಇಬ್ಬರೂ ಇನ್ನೊಂದೆರಡು ವಾರದಲ್ಲಿ ಕೈಗೆ ಸಿಗಲಿದ್ದಾರೆ ಎಂಬ ನಿರೀಕ್ಷೆ ಡ್ರಾಮಾ ಟೀಮ್‌ನಲ್ಲಿದೆ.

ವೆಬ್ದುನಿಯಾವನ್ನು ಓದಿ