ಮುಂಗಾರು ಮಳೆಯ ಯಶಸ್ಸಿಗೆ ಗಣೇಶ್ ಕಾರಣರಲ್ಲ: ಸುದೀಪ್!

MOKSHA
ನಟ, ನಿರ್ದೇಶಕ, ನಿರ್ಮಾಪಕ ಸುದೀಪ್ ಇದೀಗ ಗೋಲ್ಡನ್ ಸ್ಟಾರ್ ಸ್ಟಾರ್ ಖ್ಯಾತಿಯ ಗಣೇಶ್‌ ಬಗ್ಗೆ ಸಂದರ್ಶನವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರ ನೀಡುವ ಸಂದರ್ಭ ಸುದೀಪ್ ತಮ್ಮ ಮಾತಿನಲ್ಲಿ ದರ್ಶನ್ ಹಾಗೂ ಗಣೇಶ್ ಅವರನ್ನು ಹೋಲಿಕೆ ಮಾಡುವ ಮೂಲಕ ಗಣೇಶ್‌ಗೊಂದು ಟಾಂಗ್ ನೀಡಿದ್ದಾರೆ. ಈಗ ಬರುತ್ತಿರುವ ಹೊಸಬರು ಭಾರೀ ಸುದ್ದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾಂಪಿಟೀಶನ್ ಜಾಸ್ತಿ ಇದೆ ಅನಿಸಲ್ವಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಮುಂಗಾರು ಮಳೆಯನ್ನು ಅಷ್ಟು ಎತ್ತರಕ್ಕೇರಿಸುವ ಅಗತ್ಯ ಇಲ್ಲ. ಜೊತೆಗೆ, ಮುಂಗಾರು ಮಳೆ ಗೆದ್ದಿದ್ದು ಗಣೇಶ್‌ರಿಂದ ಅಲ್ಲ. ಆ ಚಿತ್ರದ ಗೆಲುವಿನ ಯಶಸ್ಸು ಸೇರಬೇಕಾಗಿದ್ದು ಚಿತ್ರದ ನಿರ್ದೇಶಕ ಹಾಗೂ ತಂತ್ರಜ್ಞರಿಗೆ. ದೊಡ್ಡ ದೊಡ್ಡ ಫೋಟೋಗಳು ಬಂದ ಮಾತ್ರಕ್ಕೆ ಚಿತ್ರದ ಯಶಸ್ಸು ನಟನ ಪಾಲಾಗುತ್ತದೆ ಅಂದುಕೋಬೇಡಿ ಎಂದರು ಸುದೀಪ್.

ದರ್ಶನ್ ಹಾಗೂ ಗಣೇಶ್ ಹೋಲಿಕೆ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸುದೀಪ್, ದರ್ಶನ್ ಒಬ್ಬ ಎಸ್ಟಾಬ್ಲಿಶ್ಡ್ ಆಕ್ಟರ್. ದರ್ಶನ್‌ಗೂ ಗಣೇಶ್‌ಗೂ ಹೋಲಿಕೆ ಮಾಡೋದು ಸರಿಯಲ್ಲ. ದರ್ಶನ್ ಹಲವು ವರ್ಷಗಳಿಂದ ಯಶಸ್ಸು ಕಾಣುತ್ತಾ ಬಂದಿದ್ದಾರೆ. ಈ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ತಮ್ಮ ಸ್ಥಾನ ಉಳಿಸಿಕೊಳ್ಳುತ್ತಾ ಬಂದಿದ್ದಾರೆ. 40ಕ್ಕೂ ಹೆಚ್ಚು ಚಿತ್ರಗಳಲ್ಲಿ ದರ್ಶನ್ ನಟಿಸಿದ್ದಾರೆ ಎಂದರು ಸುದೀಪ್.

ದುನಿಯಾ ಖ್ಯಾತಿಯ ವಿಜಯ್ ಬಗ್ಗೆಯೂ ಮಾತನಾಡಿದ ಸುದೀಪ್, ವಿಜಯ್ ಅವರು ಖಂಡಿತಾ ಹೀರೋ ಆಗಬಲ್ಲ ಮೆಟೀರಿಯಲ್ ಅಲ್ಲ ನಿಜ. ಆದರೆ ಅವರ ಅಪಾರ ಶ್ರಮ, ಪ್ರಯತ್ನದಿಂದ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದರು ಸುದೀಪ್.

ಒಬ್ಬ ಕಲಾವಿದನನ್ನು ಮತ್ತೊಬ್ಬನ ಜೊತೆ ತುಲನೆ ಮಾಡಿ ನೋಡುವುದು ಒಳ್ಳೆಯದಲ್ಲ ಎನ್ನುವ ಸುದೀಪ್, ಅದ್ಯಾಕೆ ಇಲ್ಲಿ ಹೋಲಿಕೆ ಮಾಡುವ ಗೋಜಿಗೆ ಹೋಗಿದ್ದಾರೆ ಎಂಬ ಪ್ರಶ್ನೆಯೀಗ ಗಾಂಧಿನಗರದ ಗಲ್ಲಿಯಿಂದ ಕೇಳಿ ಬರುತ್ತಿದೆ.

ವೆಬ್ದುನಿಯಾವನ್ನು ಓದಿ