ರಂಗನ್ ಸ್ಟೈಲ್ ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಒಪ್ಪಿದ್ದಾರಂತೆ. ಕರಾವಳಿ ಹುಡುಗರ ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಜಾಲಿಡೇಸ್ ಖ್ಯಾತಿಯ ಪ್ರದೀಪ್ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಂಡರೆ ಮಂಗಳೂರಿನ ಪ್ರಶಾಂತ್ ಎಸ್ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಗುರುಕಿರಣ್ ಅವರ ಸಂಗೀತವೂ ಚಿತ್ರಕ್ಕಿರುವ ಕಾರಣ ಇದನ್ನು ಕರಾವಳಿಗರ ಚಿತ್ರ ಎಂದು ಕರೆಯಲಾಗುತ್ತಿದೆ. ಅತಿಥಿ ಪಾತ್ರದಲ್ಲಿ ಸುದೀಪ್ ನಟಿಸಲು ಒಪ್ಪಿಕೊಂಡಿರುವುದು ಚಿತ್ರತಂಡದ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಚಂದ್ರಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ಬಳಿಕ ಸುದೀಪ್ ರಂಗನ್ ಸ್ಟೈಲ್ ಚಿತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರೀಕರಣ ಈಗಾಗಲೇ ಆರಂಭಗೊಂಡಿದ್ದು ಬಿಗ್ಬಾಸ್ ಶೋ ನಂತರ ಅಂದರೆ 9 ತಿಂಗಳ ಬಳಿಕ ಕನ್ನಡ ಚಿತ್ರವೊಂದಕ್ಕೆ ಸುದೀಪ್ ಬಣ್ಣ ಹಚ್ಚುತ್ತಿದ್ದಾರೆ. ಬಚ್ಚನ್ ಅವರ ಅಭಿನಯದ ಕೊನೆಯ ಕನ್ನಡ ಚಿತ್ರವಾಗಿತ್ತು. ಈ ಬಳಿಕ ರವಿಚಂದ್ರನ್ ಜೊತೆಗಿನ ಚಿತ್ರ ಆ.19ಕ್ಕೆ ಸೆಟ್ಟೇರಲಿದೆ.
ರಂಗನ್ ಸ್ಟೈಲ್ ಚಿತ್ರದಲ್ಲಿ ಸಾಧುಕೋಕಿಲ, ಲೋಹಿತಾಶ್ವ ಮೊದಲಾದವರು ನಟಿಸಿದ್ದು ಕಾರ್ಕಳದ ಖ್ಯಾತ ಯುವ ಉದ್ಯಮಿಗಳಾದ ಅಜಿತ್ ಕಾಮತ್, ಬೋಳ ಶ್ರೀನಿವಾಸ ಕಾಮತ್ ಮತ್ತು ಶ್ರೀಪತಿ ಕಾಮತ್ ತಮ್ಮ ಆರೆಂಜ್ ಸಿನಿಮಾಸ್ ಬ್ಯಾನರ್ನಡಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಲೇಡಿ ವಿಲನ್ ಪಾತ್ರದಲ್ಲಿ ದೀಪಿಕಾ ದಾಸ್ ಕಾಣಿಸಿಕೊಳ್ಳಲಿದ್ದಾರಂತೆ.