ರಮ್ಯಾ ಬಾರ್ನಾಗೆ ಮದುವೆ ಯೋಚನೆಯೇ ಇಲ್ವಂತೆ!

SUJENDRA
ನಟನೆಗಿಂತಲೂ ಹೆಚ್ಚು ಗಾಸಿಪ್‌ಗಳಿಂದಲೇ ಸುದ್ದಿ ಮಾಡಿದ ನಟಿ ರಮ್ಯಾ ಬಾರ್ನೆ ಮೂರ್ನಾಲ್ಕು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಆರಕ್ಕೇರದ, ಮೂರಕ್ಕಿಳಿಯದ ನಟೀಮಣಿ. ಇಂತಿಪ್ಪ ಹುಡುಗಿಯೀಗ ಶ್ರೀನಗರ ಕಿಟ್ಟಿಯ 'ಅನಾರ್ಕಲಿ' ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಸದ್ಯಕ್ಕೆ ಮದುವೆಯಾಗುವ ಯೋಚನೆಯೇ ಇಲ್ಲ ಎಂದೀಗ ವಿವಾದಗಳಲ್ಲಿ ಮುಳುಗೆದ್ದ ನಂತರ ಹೇಳಿ ಬಿಟ್ಟಿದ್ದಾರೆ.

ವಿವಾದ ಗೊತ್ತೇ ಇದೆಯಲ್ಲ, 'ನನ್ನೆದೆಯ ಹಾಡು' ಚಿತ್ರದಲ್ಲಿ ಜತೆಯಾಗಿದ್ದ ಆನಂದ್ ಜತೆಗಿನ ಲವ್ವಿ-ಡವ್ವಿ. ಅವರ ಪತ್ನಿ ಭರಣಿ ದೂರು ನೀಡುತ್ತಿದ್ದಂತೆ ಆನಂದ್ ಜೈಲಿಗೆ ಹೋಗಿದ್ದರು. ಈಗ ಎಲ್ಲವೂ ಮುಗಿದಿದೆ. ಆನಂದ್ ಜೈಲಿನಿಂದ ಬಂದಿದ್ದಾರೆ. ರಮ್ಯಾ ಬಾರ್ನಾ ಈ ಸಂಬಂಧದ ಆರೋಪವನ್ನೂ ಕಳಚಿಕೊಂಡಿದ್ದಾರೆ.

ಅವರ ಮುಂದಿರುವುದೀಗ ಕೇವಲ ನಟನೆ ಮಾತ್ರ. ಮದುವೆಯ ಯೋಚನೆಯೂ ಇಲ್ಲ. ಸದ್ಯಕ್ಕೆ ಸಾಧು ಕೋಕಿಲಾ ನಿರ್ದೇಶನದ 'ಅನಾರ್ಕಲಿ' ಚಿತ್ರದಲ್ಲೀಕೆ ಎರಡನೇ ನಾಯಕಿ. ಶ್ರೀನಗರ ಕಿಟ್ಟಿಗೆ ಮೊದಲನೇ ನಾಯಕಿಯಾಗಿ ಪ್ರಜ್ಞಾ ನಟಿಸುತ್ತಿದ್ದಾರೆ. ರಮ್ಯಾ ಬಾರ್ನಾ ನಿಜವಾದ ಅನಾರ್ಕಲಿಯಲ್ಲ, ಆದರೆ ಅನಾರ್ಕಲಿಯೂ ಹೌದು ಎನ್ನುತ್ತಿದೆ ಚಿತ್ರತಂಡ.

ಸದ್ಯಕ್ಕಂತೂ ಮದುವೆ ಬೇಡ. ಅದಕ್ಕೂ ಮೊದಲು ಸಾಧಿಸುವಂತದ್ದು ತುಂಬಾ ಇದೆ. ಈಗ ಪಾರ್ಟಿ, ಫ್ರೆಂಡ್ಸ್ ಎಂದೆಲ್ಲ ಆರಾಮವಾಗಿದ್ದೇನೆ. ಈಗಲೇ ಮದುವೆ ಮಾತೇಕೇ? ನಾಟ್ ರೆಡಿ ಟು ಮ್ಯಾರೇಜ್ ಎನ್ನುತ್ತಲೇ ಈಗೀಗ ಮಾಡೆಲಿಂಗ್‌ನಲ್ಲಿ ಮತ್ತೆ ಹೆಸರು ಮಾಡುತ್ತಿರುವುದಕ್ಕೆ ಖುಷಿಯಾದರು.

ಇನ್ನೊಂದು ವಿಚಾರ ಗೊತ್ತೇ? ಈ ರಮ್ಯಾ ಬಾರ್ನಾ ಕನ್ನಡದ ನಾಲ್ಕು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೂ ಇನ್ನೂ ದೊಡ್ಡ ನಾಯಕಿಯೆಂದು ಗುರುತಿಸಿಕೊಳ್ಳುತ್ತಿಲ್ಲ. ಯೋಗರಾಜ್ ಭಟ್ಟರ ಪುನೀತ್ ನಾಯಕರಾಗಿದ್ದ ಪರಮಾತ್ಮ, ಪಂಚರಂಗಿ, ಪುನೀತ್ ನಾಯಕರಾಗಿದ್ದ ಇನ್ನೊಂದು ಚಿತ್ರ 'ಹುಡುಗರು' ಹಾಗೂ 'ಪರಮಾತ್ಮ'ಗಳಲ್ಲಿ ರಮ್ಯಾ ಗಮನ ಸೆಳೆಯುವ ಪಾತ್ರವನ್ನೇ ಮಾಡಿದ್ದರು. ಆದರೂ ಫಲಿತಾಂಶ ಶೂನ್ಯ. ಅದೇ ಎರಡನೇ ನಾಯಕಿ ಅಥವಾ ಪೋಷಕ ನಟಿ ಪಾತ್ರದಲ್ಲಷ್ಟೇ ಮುಂದುವರಿಯುತ್ತಿದ್ದಾರೆ.

ಈಗವರ ಕೈಯಲ್ಲಿ ಅನಾರ್ಕಲಿ ಬಿಟ್ಟರೆ, ಒಂದು ರೂಪಾಯಿ ಎರಡು ಪ್ರೀತಿ ಎಂಬ ಚಿತ್ರವಿದೆ. ಇಲ್ಲಿ ವಿಜಯ್ ರಾಘವೇಂದ್ರ ಮತ್ತು ಸಂದೀಪ್ ಎಂಬ ಇಬ್ಬರು ನಾಯಕರಿದ್ದಾರೆ.

ವೆಬ್ದುನಿಯಾವನ್ನು ಓದಿ