ರಾಜಕೀಯಕ್ಕಾಗಿ ಚಿತ್ರರಂಗವನ್ನೇ ಬಿಡ್ತಾರಂತೆ ಪೂಜಾ ಗಾಂಧಿ!

ಸೋಮವಾರ, 8 ಏಪ್ರಿಲ್ 2013 (14:27 IST)
PR
ಜನಸೇವೆ ಹೆಸರಿನಲ್ಲಿ ಜಾತ್ಯತೀತ ಜನತಾದಳಕ್ಕೆ ಪದಾರ್ಪಣೆ ಮಾಡಿದ ಮಳೆ ಹುಡುಗಿ ಪೂಜಾ ಗಾಂಧಿ, ನಂತರ ಯಡಿಯೂರಪ್ಪ ನಾಯಕತ್ವವನ್ನು ಮೆಚ್ಚಿ ಕೆಜೆಪಿ ಸೇರುತ್ತಿರುವುದಾಗಿ ಹೇಳಿಕೊಂಡರು. ಅದಾದ ಮೇಲೆ ಅಲ್ಲಿ ಸೂಕ್ತ ಸ್ಥಾನ ಸಿಗುತ್ತಿಲ್ಲವೆಂಬ ಕಾರಣವೊಡ್ಡಿ ಬಿಎಸ್‌ಆರ್ ಸೇರಿಕೊಂಡರು. ಅಲ್ಲೀಗ ಅವರು ಉದುರಿಸಿರುವ ಅಣಿಮುತ್ತು, ರಾಜಕೀಯಕ್ಕಾಗಿ ಚಿತ್ರರಂಗವನ್ನೂ ಬಿಡಲು ಸಿದ್ಧ!

ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ನಾನು ರಾಯಚೂರು ನಗರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದೇನೆ. ನನಗೆ ಹಣ ಮುಖ್ಯವಲ್ಲ. ಚಿತ್ರರಂಗದಲ್ಲಿದ್ದುಕೊಂಡು ಸಾಕಷ್ಟು ಹಣ ಗಳಿಸಿದ್ದೇನೆ. ಜನಪ್ರಿಯತೆಯೂ ನನಗೆ ಬೇಕಿಲ್ಲ. ಜನಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಹೈದರಾಬಾದ್ ಕರ್ನಾಟಕದ ದುಸ್ಥಿತಿಯನ್ನು ಕಂಡು ಇಲ್ಲೇ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಪೂಜಾ ಗಾಂಧಿ ತಿಳಿಸಿದ್ದಾರೆ.

ಸದ್ಯ ರಾಯಚೂರಿನಲ್ಲಿ ಭರದ ಪ್ರಚಾರ ಕೈಗೊಂಡಿರುವ ಪೂಜಾ ಗಾಂಧಿಗೆ ವಾರದಲ್ಲೇ ಸುಸ್ತಾಗಿದೆ. ಅಲ್ಲಿನ ಬಿಸಿಲಿಗೆ ಹೈರಾಣಾಗಿ ಹೋಗಿದ್ದಾರೆ. ಸಾಕಷ್ಟು ಬಾರಿ ಬಿಸಿಲಿನ ಧಗೆ ಇಳಿಸುವ ಪಾನೀಯ ಸೇವಿಸಿದರೂ, ಸುಸ್ಥಿತಿಗೆ ಬರಲಿಲ್ಲ. ಆದರೂ ರಾಯಚೂರು ನನ್ನದೇ ಕ್ಷೇತ್ರ ಎಂಬಂತೆ ಪೂಜಾ ಗಾಂಧಿ ಪ್ರೀತಿ ತೋರಿಸುತ್ತಿದ್ದು, ಚುನಾವಣೆಯ ನಂತರವೂ ಇದೇ ಪ್ರೀತಿ ಉಳಿದುಕೊಳ್ಳಲಿದೆಯೇ ಎನ್ನುವುದನ್ನು ಕಾಲವೇ ಹೇಳಬೇಕು.

ವೆಬ್ದುನಿಯಾವನ್ನು ಓದಿ