ಶ್ರುತಿ 2ನೇ ಮದುವೆಗೆ ವಿಘ್ನ; ಚಂದ್ರಚೂಡ್ ಪತ್ನಿ ತಕರಾರು

ಶನಿವಾರ, 8 ಜೂನ್ 2013 (15:00 IST)
PR
ನಾವು ನಾಲ್ಕು ವರ್ಷಗಳ ಹಿಂದೆಯೇ ತಿರುಪತಿಯಲ್ಲಿ ಮದುವೆಯಾಗಿದ್ದೇವೆ. ಆದರೆ ಈಗ ಅಧಿಕೃತವಾಗಿ ಮದುವೆಯಾಗುತ್ತಿದ್ದೇವೆ ಎಂದು ಪತ್ರಕರ್ತ ಚಂದ್ರಚೂಡ್ ಮತ್ತು ನಟಿ ಶ್ರುತಿ ಕೊಲ್ಲೂರಿನಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು, ತಾವೀಗ ಪತಿ-ಪತ್ನಿಯರು ಎಂದು ಘೋಷಿಸಿಕೊಂಡಿದ್ದರು. ಅದಾಗಿ ಒಂದೇ ದಿನದೊಳಗೆ ವಿಘ್ನ ಎದುರಾಗಿದೆ. ಶ್ರುತಿ ಬಾಳಲ್ಲಿ ಅಪಶ್ರುತಿ ಕೇಳಿ ಬರುತ್ತಿದೆ!

ಹಾಗೆ ನೋಡಿದರೆ, ಮದುವೆ ನಂತರವಷ್ಟೇ ಅಲ್ಲ, ಮೊದಲೇ ಅಪಶ್ರುತಿಯಿತ್ತು ಎಂಬ ಮಾತುಗಳಿವೆ. ಒಂದೇ ಮನೆಯಲ್ಲಿದ್ದ ಚಂದ್ರಚೂಡ್ ಮತ್ತು ಶ್ರುತಿ ನಡುವೆ ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಉಂಟಾಗಿತ್ತು. ನಂತರ ಚಂದ್ರಚೂಡ್‌ರನ್ನು ಶ್ರುತಿ ಮನೆಯಿಂದ ಹೊರದಬ್ಬಿದ್ದರು ಎಂದು ಸುದ್ದಿಯಾಗಿತ್ತು. ಅದನ್ನೆಲ್ಲ ಮರೆತವರು ಮೊದಲು ಮದುವೆಯಾಗಲು ಸಿದ್ಧತೆ ನಡೆಸಿದ್ದು, ಹೊಸನಗರದಲ್ಲಿ. ಆದರೆ ಶ್ರುತಿ ಮತ್ತು ಚಂದ್ರಚೂಡ್ ಮದುವೆ ಎನ್ನುವುದು ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ತಿರುಗಿ ಬಿದ್ದಿದ್ದಾರೆ. ದಾರಿ ಕಾಣದೆ ಅಲ್ಲಿಂದ ಕಾಲ್ಕಿತ್ತ ಶ್ರುತಿ-ಚಂದ್ರಚೂಡ್ ಕೊಲ್ಲೂರಿನಲ್ಲಿ ವಿವಾಹವಾಗಿದ್ದರು.

PR
ಮದುವೆಯಾದ ಬೆನ್ನಿಗೆ ಚಂದ್ರಚೂಡ್ ಮೊದಲ ಪತ್ನಿ ಮಂಜುಳಾ ತಕರಾರು ತೆಗೆದಿದ್ದಾರೆ. ಈ ಮದುವೆ ಅನಧಿಕೃತ. ನನಗೆ ವಿವಾಹ ವಿಚ್ಛೇದನ ನೀಡದೆ ಅವರು ಎರಡನೇ ಮದುವೆಯಾಗಿರುವುದು ಕಾನೂನು ಪ್ರಕಾರ ಅಪರಾಧ. ನಾನು ವಿಚ್ಛೇದನಕ್ಕೆ ಸಿದ್ಧಳಿಲ್ಲ. ನನಗೆ ನನ್ನ ಗಂಡ ಬೇಕು. ಶ್ರುತಿ ಹೀಗೆ ಮಾಡಬಾರದಿತ್ತು ಎಂದು ಅಲವತ್ತುಕೊಂಡಿದ್ದಾರೆ. ಅಲ್ಲದೆ, ಕಾನೂನು ಮೊರೆ ಹೋಗುವುದಾಗಿಯೂ ಹೇಳಿದ್ದಾರೆ.

ಆದರೆ ಚಂದ್ರಚೂಡ್ ಮಾತ್ರ ಆರೋಪ ನಿರಾಕರಿಸಿದ್ದಾರೆ. ನಾವು ನ್ಯಾಯಾಲಯದ ಮೆಟ್ಟಿಲೇರಿದ್ದೇವೆ. ಆದರೆ ಪರಸ್ಪರ ಒಪ್ಪಿಗೆ ಪಡೆದು ನ್ಯಾಯಾಲಯದ ಹೊರಗಡೆ ಬೇರೆಯಾಗಲು ನಿರ್ಧರಿಸಿದ್ದೆವು. ಅದಕ್ಕೆ ಸಂಬಂಧಪಟ್ಟ ದಾಖಲೆಗಳು ನನ್ನಲ್ಲಿವೆ. ಹಾಗಾಗಿ ಮಂಜುಳಾ ಆರೋಪದಲ್ಲಿ ಹುರುಳಿಲ್ಲ. ಆಕೆಯ ಕಾನೂನು ಹೋರಾಟವನ್ನು ಎದುರಿಸಲು ನಾನು ಸಿದ್ಧ ಎಂದು ತಿಳಿಸಿದ್ದಾರೆ.

ಈ ನಡುವೆ ತನ್ನ ಮೊದಲನೇ ಪತ್ನಿ ಮಂಜುಳಾ ತನ್ನ ಎರಡನೇ ಪತ್ನಿ ಶ್ರುತಿ ವಿರುದ್ಧ ಮಾತನಾಡುತ್ತಿರುವುದಕ್ಕೆ ಚಂದ್ರಚೂಡ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದು ನನ್ನ ಮತ್ತು ಮಂಜುಳಾ ನಡುವಿನ ವೈಯಕ್ತಿಕ ವಿಚಾರ. ಇದಕ್ಕೂ ಶ್ರುತಿಯವರಿಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಯಾರೇ ಆಗಲಿ, ಶ್ರುತಿಯವರನ್ನು ಪ್ರಕರಣದಲ್ಲಿ ಯಾರೂ ಎಳೆದು ತರಬಾರದು. ಮಂಜುಳಾ ಕೂಡ ಶ್ರುತಿ ವಿಚಾರ ಪ್ರಸ್ತಾಪಿಸಬಾರದು. ಆಕೆಯ ಯಾವುದೇ ರೀತಿಯಲ್ಲಿ ಅವಮಾನ ಮಾಡಬಾರದು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ