ಸಂಗೊಳ್ಳಿ ರಾಯಣ್ಣ; ದರ್ಶನ್‌ಗೆ ಇನ್ನೊಂದು ಕಿಡಿ ರೆಡಿ

SUJENDRA


ಕನ್ನಡ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ವಿವಾದಗಳಿಂದಲೇ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ದರ್ಶನ್ ಕೇಸ್ ಆಯ್ತು, ನಿಖಿತಾ ಬ್ಯಾನ್ ಆಯ್ತು, ಕಠಾರಿ ವಿವಾದ ಮುಗೀತು, ಅಷ್ಟರಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'ನಿಗೆ ವಿವಾದದ ಕಿಡಿ ಹೊತ್ತಿಸಲು ರೆಡಿಯಾಗಿದ್ದಾರೆ ವಿವಾದ ಪ್ರಿಯರು!

'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿನ ಅಂಶಗಳಿಗೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಆರೇಳು ತಿಂಗಳುಗಳ ಹಿಂದೆಯೂ ಗ್ರಾಮದ ಮುಖಂಡರಾದ ಮಲ್ಲನಗೌಡ ಪಾಟೀಲ್ ಮತ್ತು ಮಲ್ಲಿಕಾರ್ಜುನ್ ಕುಡೊಳ್ಳಿ ಕಿಡಿ ಕಾರಿದ್ದರು. ಚಿತ್ರದಲ್ಲಿ ಹಲವು ಅಪಭ್ರಂಶಗಳನ್ನು ತೋರಿಸಲಾಗಿದೆ, ಇದು ಸಲ್ಲದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

SUJENDRA


ಈಗ ಇನ್ನೊಬ್ಬರು ಮಾಧ್ಯಮಗಳ ಮುಂದೆ ಬಂದಿದ್ದಾರೆ. ಸಂಗೊಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಾಜಶೇಖರ್ ಒಕ್ಕುಂದಮಠ್ ಎಂಬುವವರು ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಅವರು ಸೆನ್ಸಾರ್ ಮಂಡಳಿಗೂ ದೂರು ನೀಡುತ್ತಾರಂತೆ, ಫಲ ಕೊಡದೇ ಇದ್ದರೆ ಹೈಕೋರ್ಟ್‌ಗೂ ಹೋಗುತ್ತಾರಂತೆ.

ಏನಂತಾರೆ ನಾಗಣ್ಣ-ದರ್ಶನ್?
ನಮ್ಮ ಸಿನಿಮಾ ಬಿಡುಗಡೆಯೇ ಆಗಿಲ್ಲ. ಅಷ್ಟರಲ್ಲೇ ಚಿತ್ರದಲ್ಲಿ ಆಕ್ಷೇಪಕಾರಿ ಅಂಶಗಳಿವೆ ಅನ್ನೋದು ಅವರಿಗೆ ಹೇಗೆ ಗೊತ್ತಾಯ್ತು? ಸುಖಾ ಸುಮ್ಮನೆ ಆರೋಪ ಮಾಡುವುದು ಬೇಡ. ನಾವು ಭಯ-ಭಕ್ತಿಯಿಂದ ಸಿನಿಮಾ ಮಾಡಿದ್ದೇವೆ. ಹಣ ಮಾಡುವ ಉದ್ದೇಶ ನಮ್ಮದಲ್ಲ. ಹಾಗಿದ್ದಿದ್ದರೆ ಯಾವುದೋ ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದೆವು. ಮೊದಲು ಸಿನಿಮಾ ನೋಡಿ, ನಂತರ ಮಾತನಾಡಿ ಎಂದು ನಿರ್ದೇಶಕ ನಾಗಣ್ಣ, ನಾಯಕ ದರ್ಶನ್ ಸಂಗೊಳ್ಳಿ ರಾಯಣ್ಣ 'ವಿರೋಧಿ'ಗಳಿಗೆ ಕಿವಿ ಮಾತು ಹೇಳಿದ್ದಾರೆ.

PR


ವಿರೋಧವೇನೋ ಸರಿ, ಯಾವ ಕಾರಣಕ್ಕಾಗಿ? ಸಿನಿಮಾದಲ್ಲಿ ಯಾವ ಆಕ್ಷೇಪಕಾರಿ ಅಂಶಗಳಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ರಾಯಣ್ಣನಿಗೆ ಮದುವೆಯಾಗಿರಲಿಲ್ಲ...
ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನಿಗೆ ಮದುವೆ ಆಗಿರಲಿಲ್ಲ. ಆತ ವೀರ ಮರಣವನ್ನಪ್ಪುವವರೆಗೆ ಬ್ರಹ್ಮಚಾರಿಯಾಗಿಯೇ ಇದ್ದ. ಆದರೆ ಸಿನಿಮಾದಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರ ಮಾಡಿರುವ ದರ್ಶನ್‌ಗೆ ನಿಖಿತಾರನ್ನು ಪತ್ನಿಯಂತೆ ಬಿಂಬಿಸಲಾಗಿದೆ. ಜತೆಗೆ ರಾಯಣ್ಣ ನರ್ತಿಸುತ್ತಿರುವುದು ಕೂಡ ಪೋಸ್ಟರುಗಳಲ್ಲಿ ಕಂಡು ಬಂದಿದೆ. ಇದು ಇತಿಹಾಸವನ್ನು ತಿರುಚಿರುವುದೇ ಹೊರತು ಮತ್ತಿನ್ನೇನಲ್ಲ.

ರಾಯಣ್ಣ ಕುದುರೆ ಓಡಿಸಿದವನೇ ಅಲ್ಲ...
ಸಂಗೊಳ್ಳಿ ರಾಯಣ್ಣ ಯಾವತ್ತೂ ಕುದುರೆ ಓಡಿಸಿದವನಲ್ಲ. ಆದರೆ ಈ ಸಿನಿಮಾದಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರಕ್ಕೆಂದು 17 ಲಕ್ಷ ರೂಪಾಯಿಗಳನ್ನು ತೆತ್ತು ಬಿಳಿ ಕುದುರೆಯನ್ನು ತರಲಾಗಿತ್ತು. ರಾಯಣ್ಣ ನಿಜ ಜೀವನದಲ್ಲಿ ಎದೆ ಕವಚವನ್ನು ಹಾಕಿದವನೇ ಅಲ್ಲ. ಆದರೆ ಚಿತ್ರದಲ್ಲಿ ಅದನ್ನು ತೋರಿಸಲಾಗಿದೆ. ರಾಯಣ್ಣನ ಪಾತ್ರವನ್ನು ಇಲ್ಲಿ ಸಂಪೂರ್ಣವಾಗಿ ತಿರುಚಲಾಗಿದೆ. ಸತ್ಯಾಂಶಗಳನ್ನು ಮರೆ ಮಾಚಿ ವೈಭವೀಕರಿಸಲಾಗಿದೆ.

ಗೆರಿಲ್ಲಾ ಯುದ್ಧ ಮಾಡಿದ್ದ...
'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾದ ಪ್ರಕಾರ, ರಾಯಣ್ಣ ಬ್ರಿಟೀಷರ ವಿರುದ್ಧ ಬಹಿರಂಗ ಯುದ್ಧ ಸಾರುತ್ತಾನೆ, ಯುದ್ಧವನ್ನೂ ಮಾಡುತ್ತಾನೆ. ಆದರೆ ಇತಿಹಾಸದ ಪ್ರಕಾರ, ನಡೆದಿರುವ ಸಂಗತಿಯ ಪ್ರಕಾರ ರಾಯಣ್ಣ ಯಾವತ್ತೂ ಬ್ರಿಟೀಷರ ವಿರುದ್ಧ ಬಹಿರಂಗ ಯುದ್ಧ ಸಾರಿರಲಿಲ್ಲ. ಆತನ ಹೋರಾಟ ಗೆರಿಲ್ಲಾ ಶೈಲಿಯದ್ದಾಗಿತ್ತು. ಭಾರತದ ಗೆರಿಲ್ಲಾ ಯುದ್ಧದ ಪಿತಾಮಹನೆಂದೇ ಸಂಗೊಳ್ಳಿ ರಾಯಣ್ಣ ಜನಪ್ರಿಯ.

ವೆಬ್ದುನಿಯಾವನ್ನು ಓದಿ