ಸುದೀಪ್ 'ಕೆಂಪೇಗೌಡ'ನಿಗೆ ಕ್ರೇಜಿ ರವಿಚಂದ್ರನ್ ಟಚ್

ಮಂಗಳವಾರ, 30 ನವೆಂಬರ್ 2010 (16:38 IST)
MOKSHA
ರವಿಚಂದ್ರನ್ ಚಿತ್ರದ ಹಾಡುಗಳನ್ನು ನೋಡಲು ಕಣ್ಣುಗಳೆರಡು ಸಾಲೋದಿಲ್ಲ ಎಂಬ ಮಾತುಗಳಿದ್ದವು. ಹಂಸಲೇಖಾ ಸಂಗೀತ ನೀಡುವ ಹಾಡುಗಳಿಗೆ ಭಿನ್ನ ಸೆಟ್‌ಗಳನ್ನು ಹಾಕಿಸಿ ಅದ್ಭುತವೆನಿಸುವ ಹಾಡುಗಳನ್ನು ನೀಡುವಲ್ಲಿ ಕ್ರೇಜಿ ಸ್ಟಾರ್ ಮೀರಿಸಿದವರಿಲ್ಲ. ಇತ್ತೀಚಿನ ವರ್ಷಗಳಲ್ಲಿ ಇದು ಠುಸ್ಸಾಗುತ್ತಿದ್ದರೂ, ಸುದೀಪ್ ಕನ್ನಡದ ಕನಸುಗಾರನ ಬೆನ್ನು ಬಿದ್ದಿದ್ದಾರೆ.

ಹೌದು, ತಮಿಳಿನ 'ಸಿಂಗಂ' ಚಿತ್ರವನ್ನು 'ಕೆಂಪೇಗೌಡ' ಹೆಸರಿನಲ್ಲಿ ರಿಮೇಕಿಸುತ್ತಿರುವ ಸುದೀಪ್‌ಗೆ ಈಗ ರವಿಚಂದ್ರನ್ ಸಾಥ್ ನೀಡುತ್ತಿದ್ದಾರೆ. ಈ ಚಿತ್ರದ ಪ್ರಮುಖ ಹಾಡೊಂದನ್ನು ಸ್ವತಃ ರವಿಚಂದ್ರನ್ ನಿರ್ದೇಶಿಸುತ್ತಿದ್ದಾರಂತೆ.

ಶಂಕರೇಗೌಡ ನಿರ್ಮಿಸುತ್ತಿರುವ ಚಿತ್ರದ ಹಾಡೊಂದನ್ನು ರವಿ ನಿರ್ದೇಶಿಸುತ್ತಿರುವುದನ್ನು ಸ್ವತಃ ನಿರ್ದೇಶಕ ಸುದೀಪ್ ತನ್ನ ಟ್ವಿಟ್ಟರ್ ಪುಟದಲ್ಲಿ ಹೇಳಿಕೊಂಡಿದ್ದಾರೆ.

ಸಾರ್ವಕಾಲಿಕ ದಂತಕತೆಗಳಲ್ಲೊಬ್ಬರಾಗಿರುವ ರವಿಚಂದ್ರನ್ ಸಾರ್ 'ಕೆಂಪೇಗೌಡ' ಚಿತ್ರದ ಹಾಡೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ನಿಜಕ್ಕೂ ನಾನು ರೋಮಾಂಚನಗೊಂಡಿದ್ದೇನೆ. ನಾನೂ ಸೇರಿದಂತೆ ಹಲವು ತಂತ್ರಜ್ಞರಿಗೆ ಅವರೊಬ್ಬರು ಮಾದರಿ ವ್ಯಕ್ತಿ ಎಂದು ಸುದೀಪ್ ತಿಳಿಸಿದ್ದಾರೆ.

ದೆಹಲಿ ಮೂಲದ ರೂಪದರ್ಶಿ 23ರ ಹರೆಯದ ಅಂಚಲ್ ಸಬರ್ವಾಲ್ ಈ ಚಿತ್ರದ ನಾಯಕಿ. ಈಗಾಗಲೇ ಹಲವು ಧಾರಾವಾಹಿಗಳು ಮತ್ತು ಜಾಹೀರಾತುಗಳಲ್ಲಿ ನಟಿಸಿರುವ ಅನುಭವ ಹೊಂದಿರುವ ಅಂಚಲ್‌ಗೆ ಚಿತ್ರರಂಗ ಇದೇ ಹೊಸತು.

ವೆಬ್ದುನಿಯಾವನ್ನು ಓದಿ