71ರ ಯೇಸುದಾಸ್ ಗಾಯನಕ್ಕೀಗ 50ರ ಸಂಭ್ರಮ!

SUJENDRA
ಗಾಯನ ಸಾಮ್ರಾಜ್ಯದ ದಂತಕತೆ, ಗಾನ ಗಂಧರ್ವ ಕಟ್ಟಾಶ್ಯೇರಿ ಜೋಸೆಫ್ ಯೇಸುದಾಸ್‌ ಗಾಯನ ಲೋಕಕ್ಕೆ ಕಾಲಿಟ್ಟು ಐವತ್ತು ವರ್ಷಗಳೇ ಸಂದು ಹೋಗಿವೆ. ಅವರ ವಯಸ್ಸೀಗ 71. ಇದನ್ನು ನಂಬುವುದಕ್ಕೆ ಕೊಂಚ ಕಷ್ಟವೆನಿಸುತ್ತಿದೆ, ಅಲ್ಲವೇ?

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕನ್ನಡ, ತುಳು, ಮಲಯಾಳಂ, ತಮಿಳು, ತೆಲುಗು, ಹಿಂದಿ, ಬೆಂಗಾಲಿ, ಗುಜರಾತಿ, ಒರಿಯಾ, ಮರಾಠಿ, ಪಂಜಾಬಿ, ಸಂಸ್ಕೃತ, ಮಲಯ, ರಷ್ಯನ್, ಅರೇಬಿಕ್, ಲ್ಯಾಟಿನ್ ಮತ್ತು ಇಂಗ್ಲೀಷ್ ಭಾಷೆಗಳ ಹಾಡುಗಳಿಗೆ ದನಿಯಾಗಿರುವ ಜೇಸುದಾಸ್‌ರ ಮಧುರ ಕಂಠಕ್ಕೆ ಕಿವಿಯಾಗದವರೇ ಇಲ್ಲ. ಅವರ ಹಾಡುಗಳಿಗೆ ಅಂತಹ ಅದ್ಭುತ ಶಕ್ತಿಯಿದೆ. 71ರ ಇಳಿ ವಯಸ್ಸಿನಲ್ಲೂ ಅವರು ತನ್ನ ದನಿಯ ಏರಿಳಿತ ಮಾಡುವುದನ್ನು ನೋಡುವುದೇ ಚೆಂದ.

ವಿಶ್ವವ್ಯಾಪಿಯಾಗಿರುವ ಯೇಸುದಾಸ್ ಇದುವರೆಗೆ ಹಾಡಿರುವ ಹಾಡುಗಳ ಸಂಖ್ಯೆ ಬರೋಬ್ಬರಿ 50,000ಕ್ಕೂ ಹೆಚ್ಚು. 1961ರ ನವೆಂಬರ್ 14ರಂದು 'ಕಾಲ್ಪಾಡುಗಲ್' (ಹೆಜ್ಜೆ ಗುರುತು) ಎಂಬ ಸಿನಿಮಾ ಮೂಲಕ ಅವರು ಗಾಯನ ಲೋಕಕ್ಕೆ ಕಾಲಿಟ್ಟಿದ್ದರು. ಆದರೆ ಅದಕ್ಕೂ ಮೊದಲು ಅವರು ಹೆಚ್ಚಾಗಿ ಹಾಡುತ್ತಿದ್ದುದು, ಶ್ರೀ ನಾರಾಯಣ ಗುರುಗಳ ಭಜನೆಗಳನ್ನು. ಗುರುಗಳ ತತ್ವಗಳ ಮೇಲೂ ಯೇಸುದಾಸ್‌ಗೆ ಅಪಾರ ನಂಬಿಕೆ.

ಏಳು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕ ರಾಷ್ಟ್ರ ಪ್ರಶಸ್ತಿ ಪಡೆದ ಕೀರ್ತಿ ಯೇಸುದಾಸ್‌ರದ್ದು. ಉಳಿದಂತೆ ಅವರು ಪಡೆದಿರುವ ಹಿರಿ-ಕಿರಿಯ ಬಾವಲಿ-ಬಿರುದುಗಳಿಗೆ ಲೆಕ್ಕವೇ ಇಲ್ಲ. ಯಾವತ್ತೂ ಕುಗ್ಗದೆ ಹಿಗ್ಗದೆ ತನ್ನ ಪಾಡಿಗೆ ಹಾಡುತ್ತಾ ಬಂದ ಹಾಡು ಹಕ್ಕಿಯವರು. ಸದಾ ವಿವಾದಗಳಿಂದಲೂ ದೂರ ಉಳಿದುಕೊಳ್ಳುತ್ತಾ, ಧರ್ಮದ ವ್ಯಾಪ್ತಿಯನ್ನು ಮೀರಿದವರಂತೆ ಬದುಕುತ್ತಿರುವವರು.

ಕಳೆದ 30 ವರ್ಷಗಳಿಂದ ಪ್ರತಿ ವರ್ಷ ತನ್ನ ಹುಟ್ಟುಹಬ್ಬದಂದು ಕೊಲ್ಲೂರಿಗೆ ಬರುವುದು ವಾಡಿಕೆ. ಬಂದವರು ಮೂಕಾಂಬಿಕೆಯ ದರ್ಶನ ಪಡೆದು, ಸಂಗೀತ ಕಾರ್ಯಕ್ರಮವನ್ನು ನೀಡಿದ ನಂತರವಷ್ಟೇ ವಾಪಸ್ ಹೋಗುತ್ತಾರೆ. ಹೀಗಿರುವ ಯೇಸುದಾಸ್ ಶಬರಿಮಲೆ ಅಯ್ಯಪ್ಪ ಭಕ್ತರೂ ಹೌದು. ಈಗಲೂ ಶಬರಿಮಲೆ ಅಯ್ಯಪ್ಪ ಗರ್ಭಗುಡಿಯ ಬಾಗಿಲು ತೆರೆಯುವಾಗ ಮತ್ತು ರಾತ್ರಿ ಮುಚ್ಚುವಾಗ ಇದೇ ಯೇಸುದಾಸ್ ಭಕ್ತಿಗೀತೆಗಳನ್ನು ಕೇಳಿಸಲಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಮತ್ತು ಇದು ಕಡ್ಡಾಯ ಕೂಡ.

ಸಿನಿಮಾ ಮತ್ತು ಭಕ್ತಿಗೀತೆ ಎರಡರಲ್ಲೂ ಜೇಸುದಾಸ್ ಪಾರಮ್ಯ ಮೆರೆದಿರುವುದು ವಿಶೇಷ. ಕನ್ನಡದಲ್ಲಿ ಅವರು ಐದು ಬಾರಿ ಶ್ರೇಷ್ಠ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಅದರಲ್ಲಿ ಪ್ರಮುಖವಾದುವು ಮಲಯ ಮಾರುತ, ರಾಮಚಾರಿ ಮತ್ತು ಸಿಪಾಯಿ ಚಿತ್ರಗಳು.

ಸಾಹಸಸಿಂಹ ವಿಷ್ಣುವರ್ಧನ್ ನಾಯಕರಾಗಿದ್ದ 'ಮಲಯ ಮಾರುತ'ದ ಹಾಡುಗಳನ್ನಂತೂ ಕನ್ನಡಿಗರು ಎಂದಿಗೂ ಮರೆಯಲಾರರು. ಲಲಿತಾ ರವಿ ನಿರ್ದೇಶನ, ವಿಜಯ ಭಾಸ್ಕರ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಒಟ್ಟು ಹದಿನೈದು ಹಾಡುಗಳಿದ್ದವು. ಅವುಗಳಲ್ಲಿ ಬರೋಬ್ಬರಿ ಹನ್ನೊಂದು ಹಾಡುಗಳನ್ನು ಯೇಸುದಾಸ್ ಹಾಡಿದ್ದರು.

ಇಂತಹ ಗಾನ ಗಂಧರ್ವನ ಗಾಯನ ಯಾನಕ್ಕೆ ಇದೇ ನವೆಂಬರ್ 14ರ ಸೋಮವಾರಕ್ಕೆ ಸುವರ್ಣ ಸಂಭ್ರಮ. ನೀವೂ ಸಂಗೀತ ಪ್ರೇಮಿಯಾಗಿದ್ದರೆ 'ಮಲಯ ಮಾರುತ'ವನ್ನು ನೆನಪಿಸಿಕೊಂಡು ಮನಸ್ಸಿನಲ್ಲೇ ಅವರಿಗೊಂದು ಸಲಾಂ ಹೇಳಿ ಬಿಡಿ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ