ಯಶ್ ವ್ಯಕ್ತಿತ್ವಕ್ಕೆ ಮನಸೋತ ಆಮಿರ್ ಖಾನ್! ಕಾರಣವೇನು?

ಗುರುವಾರ, 25 ನವೆಂಬರ್ 2021 (12:32 IST)
'ರಾಕಿ ಭಾಯ್' ಯಶ್  ಅಭಿನಯದ 'ಕೆಜಿಎಫ್: ಚಾಪ್ಟರ್ 2' ಸಿನಿಮಾವು ಏಪ್ರಿಲ್ 14ರಂದು ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.
ಈ ಮಧ್ಯೆ ಅದೇ ದಿನದಂದು ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಛಡ್ಡಾ' ಕೂಡ ರಿಲೀಸ್ ಆಗಲಿದೆ ಅನ್ನೋ ವಿಷಯ ಈಚೆಗಷ್ಟೇ ಬಹಿರಂಗವಾಗಿತ್ತು. ಇದರಿಂದಾಗಿ ಅಂದು ಬಾಕ್ಸ್ ಅಫೀಸ್ನಲ್ಲಿ ದೊಡ್ಡ ಕ್ಲ್ಯಾಷ್ ಆಗೋದು ಖಚಿತ ಅನ್ನೋ ಮಾತುಗಳನ್ನು ಗಲ್ಲಾ ಪೆಟ್ಟಿಗೆ ಪಂಡಿತರು ಹೇಳಿದ್ದರು ಕೂಡ. ಆದರೆ, ಬಾಕ್ಸ್ ಆಫೀಸ್ ವಾರ್ ಆಗೋ ಮೊದಲೇ ಎರಡು ತಂಡಗಳ ಮಧ್ಯೆ ಒಂದು ಸೌಹಾರ್ದಯುತ ಬೆಳವಣಿಗೆಯೊಂದು ನಡೆದಿದೆ. 'ಕೆಜಿಎಫ್: ಚಾಪ್ಟರ್ 2' ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೀರೋ ಯಶ್ಗೆ ಆಮಿರ್ ಖಾನ್ ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಈ ಬೆಳವಣಿಗೆಗೆ ಕಾರಣವೇನು?
'ಕೆಜಿಎಫ್: ಚಾಪ್ಟರ್ 2' ತಂಡವು ಬಹಳ ಹಿಂದೆಯೇ ಏ.14ರಂದು ತಮ್ಮ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಇದೀಗ ಅದೇ ದಿನ ತಮ್ಮ ಸಿನಿಮಾವನ್ನು ಆಮಿರ್ ಖಾನ್ ರಿಲೀಸ್ ಮಾಡುವುದಕ್ಕೆ ನಿರ್ಧಾರ ಮಾಡಿದ್ದರು. ಅದಕ್ಕೂ ಮೊದಲು 'ಕೆಜಿಎಫ್' ತಂಡಕ್ಕೆ ಪತ್ರ ಬರೆದಿದ್ದರು. 'ಇನ್ನೊಬ್ಬರ ಪ್ರದೇಶದ ಮೇಲೆ ನಾನು ಅತಿಕ್ರಮಣ ಮಾಡುತ್ತಿದ್ದೇನೆ ಎಂದಾಗ, ನನ್ನನ್ನು ನಾನೇ ದ್ವೇಷಿಸಿಕೊಳ್ಳುತ್ತೇನೆ. ಆದರೆ, ನಾನು 'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ಮೊದಲ ಬಾರಿಗೆ ಸಿಖ್ ಪಾತ್ರದಲ್ಲಿ ನಟಿಸುತ್ತಿದ್ದು, ಆ ಸಿನಿಮಾವನ್ನು ಸಿಖ್ಖರ ಬೈಸಾಖಿ ಹಬ್ಬದ (ಏ.14) ದಿನದಂದೇ ರಿಲೀಸ್ ಮಾಡಿದರೆ, ಉತ್ತಮ ಎನಿಸಿತ್ತು. ಆದರೆ, ರಿಲೀಸ್ ಡೇಟ್ ಫೈನಲ್ ಮಾಡುವ ಮೊದಲು ನಾನು 'ಕೆಜಿಎಫ್: ಚಾಪ್ಟರ್ 2' ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಟ ಯಶ್ಗೆ ನಾನು ಹೃತ್ಪೂರ್ವಕವಾಗಿ ಕ್ಷಮೆಯಾಚಿಸಿದೆ. ನಾನು ಅವರಿಗೆ ಪತ್ರ ಬರೆದು ನನ್ನ ಕಷ್ಟವನ್ನು ವಿವರಿಸಿದೆ' ಎಂದು ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ