ಮ್ಯಾನ್‍ಹೋಲ್ ಒಳಕ್ಕೆ ಇಳಿದು ನಟಿಸಿರುವ ಅಚ್ಯುತಕುಮಾರ್

ಮಂಗಳವಾರ, 31 ಜನವರಿ 2017 (11:44 IST)
ಮಲಹೊರುವ ಮಲಬಾಚುವ ಪದ್ಧತಿ ಅಮಾನವೀಯ. ದಲಿತರನ್ನು ಗುಲಾಮರನ್ನಾಗಿಸುವ ಕುತಂತ್ರ. ಸರಕಾರ ಪ್ರಾಯೋಜಿತ ಜೀತಪದ್ದತಿ. ನಾಗರೀಕ ಸಮಾಜದ ಸಾಕ್ಷೀ ಪ್ರಜ್ಞೆಗೆ ಹಿಡಿದ ಕೈಗನ್ನಡಿ. ಇಡೀ ಸಮಾಜ ತಲೆತಗ್ಗಿಸುವ, ನಾಚಿಕೆ ಪಡಬೇಕಾದ ದುರಂತದ ಸಂಗತಿ. ಮನುಷ್ಯನ ಘನತೆಗೆ ಧಕ್ಕೆ ತರುವ ಸಂವಿಧಾನಬಾಹಿರ ಕೃತ್ಯ, ಘೋರ ಮಾನವ ಹಕ್ಕುಗಳ ಉಲ್ಲಂಘನೆ. 
 
ಮಲಬಾಚುವ ಪದ್ದತಿ ಕಾನೂನುಬಾಹಿರ ಎಂದು ಕಾನೂನು ಮಾಡಿದೆ ಆದರೆ ಅದು ಆಚರಣೆಗೆ ಬಾರದಂತೆ ಸಹ ನೋಡಿಕೊಳ್ಳುತ್ತಿದೆ. ಇವತ್ತಿಗೂ ದೇಶದಲ್ಲಿ ಪ್ರತಿನಿತ್ಯ ಪೌರಕಾರ್ಮಿಕರು ಪ್ರಾಣಕಳೆದುಕೊಳ್ಳುತ್ತಿರುವ ಅಮಾನವೀಯ ಘಟನೆ ನಡೆಯುತ್ತಲೇ ಇದೆ... ಅದು ಸರಿ, ಸಿನಿಮಾ ಜಾಲತಾಣದಲ್ಲಿ ಈ ವಿಚಾರ ಯಾಕೆ ಅಂತೀರಾ?
 
ಪೌರ ಕಾರ್ಮಿಕನೊಬ್ಬನ ಕಥೆಯೊಂದು ಸಿನಿಮಾ ರೂಪದಲ್ಲಿ ತಯಾರಾಗುತ್ತಿದೆ. ಸದ್ಯಕ್ಕೆ ಚಿತ್ರದ ಹೆಸರು ಅಮರಾವತಿ ಎಂದು ಇಡಲಾಗಿದೆ. ಜಟ್ಟ, ಮೈತ್ರಿಯಂಥ ಅಪರೂಪದ ಸಿನಿಮಾಗಳನ್ನು ಕೊಟ್ಟಿರುವ ಬಿ.ಎಂ. ಗಿರಿರಾಜ್ ಈ ಚಿತ್ರದ ನಿರ್ದೇಶಕ. ಅಂದಹಾಗೆ, ಈ ಚಿತ್ರದಲ್ಲಿ ಸ್ಕ್ಯಾವೆಂಜರ್ ಪಾತ್ರದಲ್ಲಿ ನಟಿಸಿರೋದು ಅಚ್ಯುತ್ ಕುಮಾರ್.
 
ಸೆಪ್ಟಿಕ್ ಟ್ಯಾಂಕ್, ಪಿಟ್, ಮಲದ ಗುಂಡಿ, ಮಲಮಿಶ್ರಿತ ಚರಂಡಿ, ಒಳಚರಂಡಿ, ಒಣಶೌಚಾಲಯ, ಮ್ಯಾನ್‍ಹೋಲ್, ಬಯಲು ಪ್ರದೇಶಗಳ ಮಲಮೂತ್ರ ಸ್ವಚ್ಚಗೊಳಿಸುವ, ದಬ್ಬೆ ಹಿಡಿದು ಕೆಲಸ ಮಾಡುವ ಮಲಸ್ವಚ್ಚತೆ ಮಾಡುವವರ ಪಾಡು ನೋಡುವುದಕ್ಕೇ ಅಷ್ಟು ಕಷ್ಟಕರವಾಗಿರುತ್ತದೆ. 
 
ಅಂಥಾದ್ದರಲ್ಲಿ ಆ ಪಾತ್ರವನ್ನು ನಿರ್ವಹಿಸಬೇಕೆಂದರೆ, ಎಲ್ಲ ನಟರಿಂದಲೂ ಸಾಧ್ಯವಿಲ್ಲ. ಆದರೆ, ನಟ ಅಚ್ಯುತ್ ಮಾತ್ರ, ನಿರ್ದೇಶಕರು `ಆ್ಯಕ್ಷನ್' ಎನ್ನತ್ತಿದ್ದಂತೇ ಮ್ಯಾನ್ ಹೋಲ್ ಒಳಕ್ಕೆ ಧುಮುಕಿ ನಟಿಸಿದ್ದಾರೆ. ಈ ಚಿತ್ರ ಪೌರಕೌರ್ಮಿಕನೊಬ್ಬನ ದುರಂತ ಕಥೆಯ ಹಂದರವನ್ನು ಹೊಂದಿದೆ. 
 
ಶ್ರೀ ನಿಲಯಂ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ಇ. ಮಹದೇವ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಚ್ಯುತ್ ಕುಮಾರ್ ಅವರೊಟ್ಟಿಗೆ ವಿದ್ಯಾ ವೆಂಕಟರಾಮ್, ಹೇಮಂತ್, ವೈಶಾಲಿ ದೀಪಕ್, ನೀನಾಸಂ ಅಶ್ವಥ್ ಮುಂತಾ ದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಫೆಬ್ರುವರಿ 10ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ