ಶಿವಣ್ಣ, ಪುನೀತ್ ನಿವಾಸಕ್ಕೆ ಅಲ್ಲು ಅರ್ಜುನ್ ಭೇಟಿ

ಗುರುವಾರ, 3 ಫೆಬ್ರವರಿ 2022 (16:15 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಇದೇ ಮೊದಲ ಬಾರಿಗೆ ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಕಳೆದ ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದಾಗ ಸಿನಿಮಾ ಉದ್ದೇಶಕ್ಕೆ ಬಂದಿದ್ದ ಕಾರಣ ಈ ಬಾರಿ ಪುನೀತ್ ನಿವಾಸಕ್ಕೆ ಹೋಗಲ್ಲ ಎಂದಿದ್ದ ಅಲ್ಲು ಅರ್ಜುನ್ ಇಂದು ಪುನೀತ್ ಕುಟುಂಬಸ್ಥರನ್ನು ಭೇಟಿ ಮಾಡುವ ಸಲುವಾಗಿಯೇ ಬೆಂಗಳೂರಿಗೆ ಬಂದಿದ್ದರು.

ಮೊದಲು ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಅಲ್ಲು ಅರ್ಜುನ್ ಬಳಿಕ ಪುನೀತ್ ನಿವಾಸ, ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಈ ವೇಳೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡಾ ಸಾಥ್ ನೀಡಿದ್ದರು. ಇನ್ನು, ಅಲ್ಲು ಅರ್ಜುನ್ ಆಗಮನದ ಸುದ್ದಿ ಕೇಳಿ ನೂರಾರು ಅಭಿಮಾನಿಗಳು ಜಮಾಯಿಸಿದ್ದರು.

ಅಪ್ಪು ನಿವಾಸಕ್ಕೆ ಭೇಟಿ ನೀಡಿದ ವೇಳೆ ಪುನೀತ್ ಫೋಟೋ ಮುಂದೆ ನಿಂತು ಕೆಲವು ಕ್ಷಣ ಭಾವುಕರಾದ ಘಟನೆ ನಡೆಯಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಲ್ಲು ಅರ್ಜುನ್ ‘ನನಗೆ ಪುನೀತ್ ಜೊತೆಗೆ ಉತ್ತಮ ಬಾಂಧವ್ಯವಿತ್ತು. ಅಲವೈಕುಂಠಪುರಮುಲೊ ಸಿನಿಮಾ ಬಿಡುಗಡೆಯಾಗಿದ್ದಾಗ ಹಾಡುಗಳು ಚೆನ್ನಾಗಿದೆ ಎಂದಿದ್ದರು. ಕೊವಿಡ್ ಕಾರಣದಿಂದ ಭೇಟಿಯಾಗಲು ಆಗಿರಲಿಲ್ಲ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ