ಬ್ರಹ್ಮಚಾರಿಯನ್ನು ಕಾಡುತ್ತಿರೋದು ಯಾವ ಬಾಧೆ?

ಗುರುವಾರ, 28 ನವೆಂಬರ್ 2019 (14:26 IST)
ಮನುಷ್ಯನನ್ನು ಅದೆಂತೆಂಥಾ ಸಮಸ್ಯೆಗಳು, ದೈಹಿಕ ಬಾಧೆಗಳು ಕಾಡುತ್ತವೆಯೋ ಹೇಳಲು ಬರುವುದಿಲ್ಲ. ಅದರಲ್ಲಿ ಕೆಲ ಬಗೆಯವುಗಳನ್ನು ಹೇಳಿಕೊಂಡರೆ ಸಮಾಜದ ಕಣ್ಣಲ್ಲಿ ನಗೆಪಾಟಲಿಗೀಡಾಗಬೇಕಾಗುತ್ತದೆ ಅನ್ನೋ ಭಯ ಹಲವರನ್ನು ಕಾಡುತ್ತಿದೆ.

ಅಂಥಾದ್ದೇ ಒಂದು ಗುಪ್ತ ಸಮಸ್ಯೆಯಿಂದ ಕಾಡಿಸಿಕೊಂಡು ಕಂಗಾಲಾದ ಪಾತ್ರವೊಂದರ ಸುತ್ತ ಬ್ರಹ್ಮಚಾರಿ ಚಿತ್ರ ಕಥೆ ಕದಲುತ್ತದೆ. ಉದಯ್ ಕೆ ಮೆಹ್ತಾ ನಿಮಾಣದಲ್ಲಿ ಮೂಡಿ ಬಂದಿರೋ ಈ ಚಿತ್ರದಲ್ಲಿ ನೀನಾಸಂ ಸತೀಶ್ ಮಜವಾದೊಂದು ಪಾತ್ರವನ್ನು ನಿರ್ವಹಿಸಿದ್ದಾರೆ. ಯಾವುದೇ ಮುಜುಗರಕ್ಕೂ ಪ್ರೇಕ್ಷಕರು ತುತ್ತಾಗದಂಥಾ ರೀತಿಯಲ್ಲಿ ನಿರ್ದೇಶಕ ಚಂದ್ರಮೋಹನ್ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರಂತೆ.
ಈಗಾಗಲೇ ಫಸ್ಟ್ ನೈಟ್ ಟೀಸರ್, ಟ್ರೇಲರ್ ಮತ್ತು ಹಾಡುಗಳೊಂದಿಗೆ ಈ ಚಿತ್ರ ಸಖತ್ ಸೌಂಡು ಮಾಡಿದೆ. ಇದರಲ್ಲಿಯೇ ಸಂಸಾರಸ್ಥ ಬ್ರಹ್ಮಚಾರಿಯನ್ನು ಯಾವುದೋ ಗುಪ್ತವಾದ ಬಾಧೆಯೊಂದು ಕಾಡುತ್ತಿರುವ ಸುಳಿವುಗಳೂ ಸಿಕ್ಕಿವೆ. ಆದರೆ ಅಂಥಾ ಕಾಯಿಲೆಯನ್ನು ಕಿಂಡಲ್ಲು ಮಾಡದೆ, ಮನೋರಂಜನಾತ್ಮಕವಾಗಿ ಕಟ್ಟಿ ಕೊಡುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆಯಂತೆ. ಆರಂಭದಲ್ಲಿ ನಿರ್ದೇಶಕರು ಈ ಕಥಾ ಎಳೆಯನ್ನು ಹೇಳಿದಾಗ ಸತೀಶ್ ಅವರಲ್ಲಿ ಅದನ್ನು ಹೇಗೆ ಪ್ರೆಸೆಂಟ್ ಮಾಡಿರುತ್ತಾರೋ ಎಂಬ ಗುಮಾನಿ ಇತ್ತಂತೆ. ಆದರೆ ಎಲ್ಲವೂ ರೆಡಿಯಾದ ನಂತರ ಕಥೆ ಕೇಳಿದಾಕ್ಷಣವೇ ಅವರು ಖುಷಿಯಾಗಿ ಒಪ್ಪಿಕೊಂಡಿದ್ದರಂತೆ.
ಈ ಕಥೆಯನ್ನು ಸಿದ್ಧಪಡಿಸುವಾಗ ಬ್ರಹ್ಮಚಾರಿಯ ಪಾತ್ರ ಹೀಗೆಯೇ ಮೂಡಿ ಬರಬೇಕೆಂಬ ಆಸೆ ಚಂದ್ರ ಮೋಹನ್ ಅವರಲ್ಲಿತ್ತಂತೆ. ಬಳಿಕ ನೀನಾಸಂ ಸತೀಶ್ ಎಲ್ಲರ ಕಲ್ಪನೆಯನ್ನೂ ಮೀರಿಸುವಂತೆ ಈ ಪಾತ್ರದಲ್ಲಿ ನಟಿಸಿದ್ದಾರಂತೆ. ಅಷ್ಟಕ್ಕೂ ಸತೀಶ್ ಎಂಥಾದ್ದೇ ಪಾತ್ರಗಳಿಗಾದರೂ ಜೀವ ತುಂಬಬಲ್ಲ ನಟ. ಸಾಮಾನ್ಯವಾಗಿ ಅದೆಷ್ಟು ಥರದ ಪಾತ್ರಗಳನ್ನು ನಿರ್ವಹಿಸಿದವರಿಗೂ ಸಹ ಹಾಸ್ಯ ಸರ ಹೊಮ್ಮಿಸೋದು ಕಷ್ಟವಾಗುತ್ತೆ. ಆದರೆ ಸತೀಶ್ ಅವರಿಗದು ಕರತಲಾಮಲಕ. ಈ ಕಾರಣದಿಂದ ಬ್ರಹ್ಮಚಾರಿ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಅನ್ನೋದು ಚಿತ್ರತಂಡದ ಅಭಿಪ್ರಾಯ. ಅಂದಹಾಗೆ ಈ ಸಿನಿಮಾ ಈ ವಾರವೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ