ರಿವೀಲ್ ಆಯ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಓಪನ್ ಚಾಲೆಂಜ್

ಮಂಗಳವಾರ, 2 ಜುಲೈ 2019 (13:11 IST)
ಬೆಂಗಳೂರು: ಬೆಳ್ಳಂ ಬೆಳಿಗ್ಗೆಯೇ ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಎಂದು ಟ್ವೀಟ್ ಮಾಡಿ ತಲೆಗೆ ಹುಳ ಬಿಟ್ಟಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಓಪನ್ ಚಾಲೆಂಜ್ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ.


ಮಧ್ಯಾಹ್ನ 1 ಗಂಟೆಗೆ ಫೇಸ್ ಬುಕ್ ಲೈವ್ ಬರುವುದಾಗಿ ಹೇಳಿದ್ದ ದರ್ಶನ್ ಅದರಂತೆ ಸಮಯಕ್ಕೆ ಸರಿಯಾಗಿ ಲೈವ್ ಬಂದಿದ್ದು, ಕುರುಕ್ಷೇತ್ರ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ದರ್ಶನ್ ಬೆಳಿಗ್ಗೆ ಇಂತಹದ್ದೊಂದು ಟ್ವೀಟ್ ಮಾಡಿರುವುದು ನೋಡಿ ಎಲ್ಲರೂ ಏನೇನೋ ಅಂದುಕೊಂಡಿದ್ದರು. ಯಾವುದೋ ನಟನ ಮೇಲೆ ಕಿಡಿ ಕಾರುತ್ತಾರೋ ಏನೋ ಎಂದೆಲ್ಲಾ ಲೆಕ್ಕಾಚಾರ ಹಾಕಲಾಗಿತ್ತು.

ಆದರೆ ಅಂತಹದ್ದೇನೂ ವಿವಾದಗಳಿಲ್ಲದೇ ತಮ್ಮ ಸವಾಲು ಹಾಕಿದ್ದಾರೆ. ‘ಎಲ್ಲರೂ ನನ್ನ ಸೆಲೆಬ್ರಿಟಿ ಅಂದುಕೊಂಡಿದ್ದೀರಾ. ಆದರೆ ನನಗೆ ನೀವೇ ಅಭಿಮಾನಿಗಳೇ ಸೆಲೆಬ್ರಿಟಿಗಳು. ಕುರುಕ್ಷೇತ್ರ ಸಿನಿಮಾದಲ್ಲಿ ಬಹುತಾರಾಗಣವಿದೆ. ಇಲ್ಲಿ ನಾನು ಮಾತ್ರವಲ್ಲ, ಅಪ್ಪಾಜಿ (ಅಂಬರೀಶ್) ಇದ್ದಾರೆ, ರವಿ ಸರ್ ಇದ್ದಾರೆ, ಅರ್ಜುನ್ ಸರ್, ನಿಖಿಲ್ ಇದ್ದಾರೆ ಪಾತ್ರ ಮಾಡಿದ್ದಾರೆ. ಎಲ್ಲರಿಗೂ ನನಗೆ ಕೊಡುವಷ್ಟೇ ಮರ್ಯಾದೆ ಕೊಡಿ. ಇದೊಂದು ಬಹುತಾರಾಗಣದ ಸಿನಿಮಾ. ಕುರುಕ್ಷೇತ್ರದಂತಹ ಸಿನಿಮಾ ಮಾಡೋದೇ ಕಷ್ಟ. ಅಂತಹದ್ದರಲ್ಲಿ ಮುನಿರತ್ನ ಅವರು ಇಂತಹದ್ದೊಂದು ಅದ್ಭುತ ಸಿನಿಮಾ ಮಾಡಿದ್ದಾರೆ.

ಇದನ್ನು ನನ್ನ ಫೋಟೋ ಇಲ್ಲ, ಕಟೌಟ್ ಇಲ್ಲ ಎಂದೆಲ್ಲಾ ಗಲಾಟೆ ಮಾಡೋದು, ವಿವಾದ ಮಾಡಿಕೊಂಡು ಹಾಳು ಮಾಡಬೇಡಿ. ಎಲ್ಲರೂ ಮನೆ ಮಂದಿಯೆಲ್ಲಾ ಕುಳಿತು ದುರ್ಯೋಧನ, ಅರ್ಜುನ, ಭೀಷ್ಮ ಹೀಗೆ ಎಲ್ಲಾ ಪಾತ್ರಗಳನ್ನು ಸಮಾನ ದೃಷ್ಟಿಯಿಂದ ಕುಳಿತು ನೋಡಿ ಪ್ರೋತ್ಸಾಹ ಕೊಡಿ. ಇದುವೇ ನಾನು ಕೊಡುತ್ತಿರುವ ಓಪನ್ ಚಾಲೆಂಜ್’ ಎಂದು ಲೈವ್ ಗೆ ಬಂದು ಮಾತನಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ