ನಟ ದರ್ಶನ್ ವಿರುದ್ಧ ಮಹಿಳಾ ಆಯೋಗ, ಫಿಲಂ ಚೇಂಬರ್ ಗೆ ದೂರು

Krishnaveni K

ಗುರುವಾರ, 22 ಫೆಬ್ರವರಿ 2024 (13:40 IST)
ಬೆಂಗಳೂರು: ನಟ ದರ್ಶನ್ ಇತ್ತೀಚೆಗೆ ನೀಡಿದ್ದ ಕೆಲವು ವಿವಾದಾತ್ಮಕ ಹೇಳಿಕೆಗಳು ಈಗ ಅವರಿಗೇ ಮುಳುವಾಗುತ್ತಿದೆ. ಅವರ ವಿರುದ್ಧ ಮಹಿಳಾ ಆಯೋಗ ಮತ್ತು ಫಿಲಂ ಚೇಂಬರ್ ಗೆ ದೂರು ನೀಡಲಾಗಿದೆ.

ತಮ್ಮ ವೃತ್ತಿ ಜೀವನಕ್ಕೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಟ ದರ್ಶನ್ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದರು ಎಂಬುದು ಆರೋಪ. ‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ, ಇದರ  ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ. ನಾನು ನನ್ನ ಕೆಲಸದ ಬಗ್ಗೆ ಮಾತ್ರ ಯೋಚಿಸುತ್ತೇನೆ’ ಎಂದಿದ್ದರು. ಹೀಗೆ ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ ಎಂದು ಅವರ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದರು. ಮಹಿಳೆ ಎಂದರೆ ಅಷ್ಟು ಕೇವಲನಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ದರ್ಶನ್ ವಿರುದ್ಧ ಗೌಡತಿಯರ ಸೇನೆ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದೆ. ಮಹಿಳಾ ಆಯೋಗಕ್ಕೆ ಪತ್ರ ಬರೆದ ಗೌಡತಿಯರ ಸೇನೆ, ನಟ ದರ್ಶನ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಯುವಜನರಿಗೆ ಮಾದರಿಯಾಗಬೇಕಾದ ನಟ ಮಹಿಳೆಯರ ಬಗ್ಗೆ ಹೀಗೆ ಕೀಳಾಗಿ ಮಾತನಾಡಬಾರದು ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಇದರ ಜೊತೆಗೆ ಇತ್ತೀಚೆಗೆ ಕಾಟೇರ ಸಕ್ಸಸ್ ಮೀಟ್ ನಲ್ಲಿ ನಿರ್ಮಾಪಕ ಉಮಾಪತಿ ಗೌಡಗೆ ದರ್ಶನ್ ‘ತಗಡು’ ಎನ್ನುವ ಪದ ಬಳಕೆ ಮಾಡಿದ್ದರು.  ಇದರ ಬಗ್ಗೆ ರಾಜ್ಯ ಒಕ್ಕಲಿಗರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ದರ್ಶನ್ ಹೇಳಿಕೆ ವಿರುದ್ಧ ಫಿಲಂ ಚೇಂಬರ್ ಗೆ ದೂರು ನೀಡಲಾಗಿದೆ. ಈ ಮೂಲಕ ದರ್ಶನ್ ಗೆ ಸಂಕಷ್ಟ ಎದುರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ