ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದೇ ದರ್ಶನ್: ಹೇಗಾಯ್ತು ಘಟನೆ ಇಲ್ಲಿದೆ ವಿವರ

Krishnaveni K

ಮಂಗಳವಾರ, 11 ಜೂನ್ 2024 (12:05 IST)
ಬೆಂಗಳೂರು: ರೇಣುಕಾಸ್ವಾಮಿ ಎಂಬಾತನ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಬಂಧಿತರಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಕೃತ್ಯ ಹೇಗೆ ನಡೆಯಿತು ಎಂಬ ಬಗ್ಗೆ ವಿವರಗಳು ಲಭ್ಯವಾಗುತ್ತಿದೆ.

ಚಿತ್ರದುರ್ಗದಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಎಂಬಾತ ದರ್ಶನ್ ಆಪ್ತೆ ಪವಿತ್ರಾಗೌಡಗೆ ಅಶ್ಲಿಲ ಮೆಸೇಜ್ ಮಾಡಿದ್ದಾನೆ ಎನ್ನಲಾಗಿತ್ತು. ಇದು ದರ್ಶನ್ ಗಮನಕ್ಕೆ ಬಂದಿದ್ದು, ಇದೇ ಸಿಟ್ಟಿನಲ್ಲಿ ದರ್ಶನ್ ಚಿತ್ರದುರ್ಗದ ತಮ್ಮ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಮೂಲಕ ಆತನನ್ನು ತನ್ನ ಬೆಂಗಳೂರಿನ ಮನೆಗೆ ಕರೆತರಲು ಹೇಳಿದ್ದಾರೆ.

ದರ್ಶನ್ ಆಪ್ತರ ವಿನಯ್ ಅವರ ಕಾರ್ ಶೆಡ್ ನಲ್ಲಿ ರೇಣುಕಾಸ್ವಾಮಿ ಮೇಲೆ ಸ್ವತಃ ದರ್ಶನ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿ ಮರ್ಮಾಂಗಕ್ಕೇ ಹಲ್ಲೆ ಮಾಡಲಾಗಿದೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ. ತಲೆ, ಮರ್ಮಾಂಗ, ಕಿವಿ, ಮೂಗು ಇತ್ಯಾದಿ ಅಂಗಾಂಗಳಿಗೆ ಬಲವಾದ ಏಟು ಬಿದ್ದಿದೆ ಎನ್ನುವುದು ತಿಳಿದುಬಂದಿದೆ. ತೀವ್ರ ರಕ್ತಸ್ರಾವದಿಂದ ಆತನ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಬಳಿಕ ಆತನನ್ನು ರಾಜಕಾಲುವೆಗೆ ಎಸೆಯಲಾಗಿದೆ ಎನ್ನಲಾಗಿದೆ.

ಅಪರಿಚಿತ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದರು. ವಿಚಾರಣೆ ನಡೆಸಿದಾಗ ದರ್ಶನ್ ಈ ಪ್ರಕರಣದಲ್ಲಿ ಭಾಗಿಯಾಗಿರುವ ಸುಳಿವು ಸಿಕ್ಕಿದೆ. ಇದೀಗ ದರ್ಶನ್ ಮತ್ತು ಅವರಿಗೆ ಸಹಾಯ ಮಾಡಿದ ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ