ಗುರು ನಾನವನಲ್ಲ ನಾನವನಲ್ಲ: ಗುರು ಪ್ರಸಾದ್

ಮಂಗಳವಾರ, 26 ಮೇ 2015 (10:15 IST)
ಕನ್ನಡಚಿತ್ರರಂಗದ ವಿಭಿನ್ನ ನಿರ್ದೇಶಕ ಗುರುಪ್ರಸಾದ್. ಮಠ, ಎದ್ದೇಳು ಮಂಜುನಾಥ ಮತ್ತು ಡೈರೆಕ್ಟರ್ ಸ್ಪೆಶಲ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಈ ಪ್ರತಿಭೆ ಆ ಬಳಿಕ ಕಿರುತೆರೆಯ ಬಿಗ್ ಬಾಸ್ ಮನೆಗೆ ಹೋಗಿದ್ದು ಹಳೆಯ ಕಥೆ. ಅಲ್ಲಿ ಸಹಿತ ತಮ್ಮ ವಿಭಿನ್ನತೆ ತೋರಿಸಿ ಹೊರ ಬಂದ ಈತ  ನಂತರ ಆದ್ಯತೆ ನೀಡಿದ್ದು ಟೀವಿ ಷೋವನ್ನು ಹೋಸ್ಟ್ ಮಾಡುವುದಕ್ಕೆ!
ಅದಾದ ಬಳಿಕ ಅವರು ಮತ್ತೇನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು, ಆದರೆ ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಗುರು ಅವರು ಈಗ ಕಸ್ತೂರಿ ಎಂಟರ್ಟೈನ್ಮೆಂಟ್ ಚಾನೆಲ್ ನಲ್ಲಿ ನಾನವನಲ್ಲ ಎನ್ನುವ ಹೆಸರಿನ ಕಾರ್ಯಕ್ರದಲ್ಲಿ ಬ್ಯುಸಿ ಆಗಿದ್ದಾರೆ. ಈ ಕಾರ್ಯಕ್ರಮದ ಶೂಟಿಂಗ್ ಪೂರ್ಣವಾಗಿದ್ದು, ಈ ತಿಂಗಳಲ್ಲಿ ಪ್ರಸಾರ ಆಗುವ ಸಾಧ್ಯತೆಗಳಿವೆ.  
 
ಜೀ ಕನ್ನಡ ವಾಹಿನಿಯಲ್ಲಿ ಲೂಸ್ ಮಾದ ಯೋಗೀಶ್ ಅವರ ಜೊತೆ ಲೈಫ್ ಸೂಪರ್ ಗುರು ಎನ್ನುವ ಹೆಸರಿನ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಅದಕ್ಕೂ ಮುನ್ನ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಪುನೀತ್ ರಾಜ್ ಕುಮಾರ್ ಅವರ ನಿರೂಪಣೆಯಲ್ಲಿದ್ದ ಕನ್ನಡ ಕೋಟ್ಯಾಧಿಪತಿ ಮೊದಲ ಸೀಸನ್  ಹೊಣೆಯನ್ನು ಗುರು ಹೊತ್ತಿದ್ದರು. ತೆರೆಯ ಹಿಂದೆ ಕೆಲಸ ಮಾಡುತ್ತಿದ್ದ ಈ ವಿಲಕ್ಷಣ ನಿರ್ದೇಶಕ ತೆರೆ ಮುಂದೆ ಬಂದು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.  

ವೆಬ್ದುನಿಯಾವನ್ನು ಓದಿ