ನಾನು ಬದುಕಿದ್ದೇನೆ ನನ್ನನ್ನು ನಂಬಿ ಪ್ಲೀಸ್: ಅದಾ ಶರ್ಮ

ಗುರುವಾರ, 28 ಮೇ 2015 (10:32 IST)
ಕಳೆದೆರಡು ದಿನಗಳಿಂದ ರಣವಿಕ್ರಮ ಚಿತ್ರ ನಾಯಕಿ ಅದಾ ಶರ್ಮಾ ಅವರದ್ದೇ ಸುದ್ದಿ. ಆಕೆಗೆ ಬಸ್ ಆಕ್ಸಿಡೆಂಟ್ ಆಗಿದ್ದು, ಮೈ ತುಂಬಾ ಗಾಯಗಳಾಗಿದ್ದು, ಆಕೆ ಸ್ಥಿತಿ ಚಿಂತಾಜನಕವಾಗಿದೆ. ಅದೂ ಇದೂ ಎಂದೆಲ್ಲಾ. ದಕ್ಷಿಣ ಭಾರತದಲ್ಲಿ ತನ್ನ ಸ್ಥಾನ ಭದ್ರ ಪಡಿಸಿಕೊಳ್ಳುವ ಸಲುವಾಗಿ ಸಾಕಷ್ಟು ಕಸರತ್ತು ಮಾಡುತ್ತಿರುವ ಈ ಹಿಂದಿ ಹೆಣ್ಣು ಮಗಳಿಗೆ ಅದ್ಯಾಕೆ ದೇವರು ಇಂತಹ ಕಷ್ಟದ ಕ್ಷಣಗಳನ್ನು ನೀಡಿದ ಎಂದು ಆಕೆಯ ಅಭಿಮಾನಿಗಳು ದುಃಖಪಟ್ಟಿದ್ದು ಸುಳ್ಳಲ್ಲ. ಆ ಸುದ್ದಿಯ ಎಳೆ ಹಿಡಿದು ಹೋದ ಸಿನಿಮಂದಿಗೆ ದೊರೆತ ಮಾಹಿತಿಗೆ ದಂಗಾಗಿ ಬಿಡುವಂತಹ ಪರಿಸ್ಥಿತಿ  ಉಂಟಾಗಿತ್ತು. 
ತನ್ನ ಸೌಂದರ್ಯ, ಅಭಿನಯದಿಂದ ದಕ್ಷಿಣ ಭಾರತದ  ಭಾಷೆಗಳಲ್ಲಿ ಒಳ್ಳೆಯ ಹೆಸರು ಗಳಿಸಿರುವ ಈ ತಾರೆ ಇತ್ತೀಚೆಗೆ ಕನ್ನಡದಲ್ಲಿ ರಣವಿಕ್ರಮ ಮತ್ತು ಸನ್ ಆಫ್ ಸತ್ಯ ಮೂರ್ತಿ ಎನ್ನುವ ಹೆಸರಿನ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದರು. ಪ್ರಸ್ತುತ ಕ್ಷಣಂ ಮತ್ತು ಗರಂ ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವ ಈ ತಾರೆಗೆ ಶೂಟಿಂಗ್ ಸಮಯದಲ್ಲಿ ಒಂದು ಬಸ್ ಡಿಕ್ಕಿ ಹೊಡೆದು ಆಕೆಗೆ ಗಾಯಗಳಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನುವ ಸುದ್ದಿಯು ಹರಡಿತ್ತು. 
 
ಆದರೆ ಅದಾ ಶರ್ಮ ಅವರಿಗೆ ಫೋನ್ ಮಾಡಿದಾಗ ಅದು ಕೇವಲ ವದಂತಿ ಎನ್ನುವ ಸುದ್ದಿ ಹೊರ ಬಂದಿತು. ಆಕೆ ಟ್ವೀಟ್ ಮಾಡುವುದರ ಮೂಲಕ ಈ ವದಂತಿಯನ್ನು ಖಂಡಿಸಿದ್ದಾರೆ. ತಾನು ಆರಾಮವಾಗಿರುವುದಾಗಿ ಸಹಿತ ಜನತೆಗೆ ಹೇಳಿದ್ದಾರೆ. ಅಲ್ಲದೆ ಈ ರೀತಿಯ ಸುಳ್ಳು ಸುದ್ದಿ ಹರಡಿರುವವರ ಬಗ್ಗೆ ತನಿಖೆ ನಡೆಸುವ ಬಗ್ಗೆ ಅದಾ ಶರ್ಮ ಈಗ ಗಮನ ಕೊಟ್ಟಿದ್ದಾರಂತೆ. 

ವೆಬ್ದುನಿಯಾವನ್ನು ಓದಿ