ನನಗೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ಇಲ್ಲ: ಮಹೇಶ್ ಬಾಬು

ಗುರುವಾರ, 30 ಜುಲೈ 2015 (10:22 IST)
ತೆಲುಗು ಸಿನಿಮಾರಂಗದಲ್ಲಿ  ನಟ ಕೃಷ್ಣ ಸೂಪರ್ ಸ್ಟಾರ್ ಆಗಿದ್ದು ಎಲ್ಲರಿಗೂ ಗೊತ್ತಿದೆ.  ಈಗ ನಟನೆ ಗಿಟನೆ ಬೇಡ ಎಂದು ಹಾಯಾಗಿರುವ ಕೃಷ್ಣ ಅವರ ಮುದ್ದಿನ ಮಗ ಮಹೇಶ್ ಬಾಬು ಸಹ ಅಪ್ಪ ನಡೆದ ದಾರಿಯಲ್ಲೇ ನಡೆಯಲು ಆರಂಭ ಮಾಡಿದರು. ಅವರು ಸಹ ಅಪ್ಪನಂತೆ ಗೆಲುವಿನ ಹಾದಿ ತುಳಿದು ಟಾಲಿವುಡ್ ಸಿನಿ ರಂಗದಲ್ಲಿ ತಮಗೊಂದು ಉತ್ತಮ ಸ್ಥಾನ ಗಳಿಸಿದರು. ಈಗ ಮಹೇಶ್ ಬಾಬು ಅಲ್ಲಿ ಸ್ಟಾರ್ ಹೀರೋ. ರಾಜಕುಮಾರುಡು ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಆದ ಈ ತಾರೆ ಅವರ ತಾರ ಬದುಕನ್ನು ಉಜ್ವಲಗೊಳಿಸಿದ್ದು  ಕೃಷ್ಣವಂಶಿ ಅವರ ನಿರ್ದೇಶನದ ಮುರಾರಿ ಚಿತ್ರ.  
ಆನಂತರ ಅವರ ತಾರ ಬದುಕಿನಲ್ಲಿ  ಬಹಳಷ್ಟು ತಿರುವು ಕಂಡು ಬಂತು. ಪೋಕಿರಿ, ದೂಕುಡುದಂತಹ ಚಿತ್ರಗಳ ಮೂಲಕ ಮತ್ತಷ್ಟು ಹತ್ತಿರವಾದರು ತೆಲುಗು ವೀಕ್ಷಕರಿಗೆ. ಅತ್ಯಂತ ಆಕರ್ಷಕ ಸೌಷ್ಟವ ಹೊಂದಿರುವ ಈ ಸುಂದರ ನಗೆಯ ಒಡೆಯ ಅವರು ಅತಿ ಶೀಘ್ರದಲ್ಲೆ ಬಾಲಿವುಡ್ ಮೆಟ್ಟಿಲು ಏರುತ್ತಿದ್ದಾರೆ ಎನ್ನುವ ಸುದ್ದಿ ಹೊರ ಬಂದಿತ್ತು. ಅದೇನೂ ವಿಶೇಷ ಸುದ್ದಿ ಆಗಿರಲಿಲ್ಲ.ಅದಕ್ಕೆ ಮುಖ್ಯ ಕಾರಣ ಆತನ ಪತ್ನಿ ನಮ್ರತಾ ಶಿರೋಡ್ಕರ್ ಒಂದು ಕಾಲದಲ್ಲಿ ಮುಂಬೈ ಸಿನಿಮಾಗಳಲ್ಲಿ ನಟಿಸಿದ್ದಾಕೆ. ಅಂತಹುದರಲ್ಲಿ ಅವರು ಬಾಲಿವುಡ್ ನಲ್ಲಿ ಸ್ಥಾನ ಪಡೆಯುವುದು ಕಷ್ಟವಲ್ಲ ಎಂದು ನಂಬಿದ್ದರು ಸಿನಿಮಾ ಮಂದಿ. ಆದರೆ ಈಗ ತಿಳಿದು ಬಂದ ಸಂಗತಿ ಏನೆಂದರೆ ಮಹೇಶ್ ಬಾಬು ಅವರು ಬಾಲಿವುಡ್ ಚಿತ್ರಗಳಲ್ಲಿ ನಟಿಸುವುದಿಲ್ಲವಂತೆ. ಚಿಕ್ಕಂದಿನಲ್ಲಿ ಮದ್ರಾಸ್ ನಗರದಲ್ಲಿ ಬೆಳೆದ ಕಾರಣ ತಮಿಳಿನಲ್ಲಿ ನಟಿಸಬಲ್ಲೆ ಆದರೆ  ಹಿಂದಿ ಭಾಷೆಯಲ್ಲಿ ನೋ ನೋ ನೋ... ಎಂದಿದ್ದಾರೆ.  ಈಗ ಅವರ ಅಭಿನಯದ ಶ್ರೀಮಂತುಡು ಚಿತ್ರ ಬಿಡುಗಡೆಯ ಹಾದಿಯಲ್ಲಿದೆ.

ವೆಬ್ದುನಿಯಾವನ್ನು ಓದಿ