ಬೆಂಗಳೂರು: ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದುಎಂದು ಹೇಳುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ನಟ ಕಮಲ್ ಹಾಸನ್ ಪರ ಕನ್ನಡ ನಟ ಕಿಶೋರ್ ಬ್ಯಾಟಿಂಗ್ ಮಾಡಿದ್ದಾರೆ.
ಕಮ ಲ್ ಹಾಸನ್ ಹೇಳಿಕೆಗೆ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ನಟ ಕಿಶೋರ್ ಅವರ ಬೆಂಬಲ ಮತ್ತೇ ಕೆಂಗಣ್ಣಿಗೆ ಗುರಿಯಾಗಿದೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಲ್ ಹಾಸನ್ ಹೇಳಿಕೆಯನ್ನು ಅಷ್ಟೊಂದು ಭಾವುಕತೆಯಿಂದ ನೋಡುವ ಅವಕಾಶವಿಲ್ಲ. ಭಾಷಾ ಉಗಮದ ನಿಖರ ಮಾಹಿತಿ ಇಲ್ಲ ಎಂದಾದಲ್ಲಿ ಅವರ ಹೇಳಿಕೆ ಅವಮಾನವಲ್ಲ. ತಮಿಳಿಂದ ಕನ್ನಡ ಬಂದಿದೆ ಎಂದಾದರೆ ಸರಿ, ತಪ್ಪೇನಿಲ್ಲ ಎಂದರು.
'ನನ್ನ ತಾಯಿಯ ಹೊಟ್ಟೆ ಯಿಂದ ನಾನು ಹುಟ್ಟಿ ಬಂದೆ ಎಂದರೆ ನನಗೆ ಹಾಗೂ ನನ್ನ ತಾಯಿಗೆ ಅದು ಅವಮಾನವಲ್ಲ. ಅದನ್ನು ಅವಹೇಳನಕಾರಿ ಎಂದು ಯಾಕೆ ಅಂದುಕೊಳ್ಳಬೇಕೆಂದು ನಟ ಪರ ಬ್ಯಾಟಿಂಗ್ ಮಾಡಿದರು.
ತುಂಬಾ ತಿಳಿದಿರುವ ವ್ಯಕ್ತಿ ಏನೋ ಹೇಳಿದ್ದಾರೆ ಎಂದರೆ ಅದಕ್ಕೊಂದು ತರ್ಕ ಇರುತ್ತದೆ. ಅದಕ್ಕೆ ಏನೋ ಒಂದು ಅರ್ಥ ಇರಬೇಕು. ಅದನ್ನು ಪ್ರಶ್ನೆ ಮಾಡಿ, ಏನು ಎಂಬುದನ್ನು ತಿಳಿದುಕೊಳ್ಳಬೇಕು. ಅವರ ಹೇಳಿಕೆಯಿಂದ ಯಾರಿಗೂ ಅವಮಾನವಾಗಿಲ್ಲ ಎಂದು ಹೇಳಿದರು.
ಎಲ್ಲಾ ಭಾಷೆಗಳು ಎಲ್ಲಿಂದಲೋ ಹುಟ್ಟಿ ಬಂದಿರುತ್ತವೆ. ಹಾಗಂತ ಒಂದು ಭಾಷೆ ಮೇಲು, ಇನ್ನೊಂದು ಭಾಷೆ ಕೀಳು ಎಂಬುದಿಲ್ಲ. ಕನ್ನಡ ಎಲ್ಲಿಂದಲೋ ಹುಟ್ಟಿ ಬಂದಿದೆ, ಹಾಗೆಯೇ ತಮಿಳು ಸಹ ಎಲ್ಲಿಂದಲೂ ಹುಟ್ಟಿ ಬಂದಿದೆ. ಇಂತಹ ವಿಷಯದಲ್ಲಿ ಜನರನ್ನು ಭಾವುಕವಾಗಿ ರೊಚ್ಚಿಗೆಬ್ಬಿಸಬಾರದು ಎಂದು ಸಲಹೆ ನೀಡಿದರು.
ಒಂದು ವೇಳೆ, ತಮಿಳಿನಿಂದ ಕನ್ನಡ ಬಂದಿದೆ ಎಂದಾದರೆ, ಅದು ಸರಿ. ಅದರಲ್ಲಿ ತಪ್ಪೇನಿಲ್ಲ. ಭಾಷೆಗಳ ಬಗ್ಗೆ ಬಹಳಷ್ಟು ಸಿದ್ಧಾಂತಗಳಿವೆ. ಕೆಲವು ಭಾಷೆ ಎಲ್ಲಿಂದ ಬಂತು ಎಂಬ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇವೆ. ಭಾಷೆಯಿಂದ ಇನ್ನೊಂದು ಭಾಷೆ ಬಂದಿದೆ ಎಂದು ಹೇಳಿದರೆ ಅದನ್ನು ಅವಮಾನ ಎಂದು ಯಾಕೆ ಭಾವಿಸಬೇಕು ಎಂದು ಪ್ರಶ್ನಿಸಿದರು.