ಕೊಲೆ ಪ್ರಕರಣ: ನಟ ದರ್ಶನ್‌ ಸೇರಿದಂತೆ 13 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Sampriya

ಮಂಗಳವಾರ, 11 ಜೂನ್ 2024 (19:13 IST)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತವಾಗಿರುವ ನಟ ದರ್ಶನ್‌ ಅವರನ್ನು ಇಂದು ಸಂಜೆ ಮ್ಯಾಜಿಸ್ಟೇಟ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಹೆಚ್ಚಿನ ವಿಚಾರಣೆಗೆ ನಟ ದರ್ಶನ್‌ ಅವರನ್ನು ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ನ್ಯಾಯಾಧೀಶರ ಎದುರು ಹಾಜರಾದ ದರ್ಶನ್‌ ಅವರು ಪ್ರಶ್ನೆಗಳಿಗೆ ಉತ್ತರಿಸುತ್ತ ಕಣ್ಣೀರು ಹಾಕಿದ್ದಾರೆ. ಪವಿತ್ರಾ ಗೌಡ ಕೂಡ ಕಣ್ಣೀರು ಸುರಿಸಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಪೊಲೀಸರು ಕೇಳಿಕೊಂಡಿದ್ದು, ಅದರಂತೆ ಬಂಧಿತ 13 ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ಕೊಲೆ ಕೇಸ್​ನಲ್ಲಿ ನಟಿ ಪವಿತ್ರಾ ಗೌಡ ಎ 1 ಆರೋಪಿಯಾಗಿದ್ದು, ನಟ ದರ್ಶನ್​ ಎ 2 ಆರೋಪಿಯಾಗಿದ್ದಾರೆ. ಸಹಚರ ಕೆ. ಪವನ್​ ಎ 3 ಆಗಿದ್ದಾನೆ. ಬೌರಿಂಗ್​ ಆಸ್ಪತ್ರೆಯಲ್ಲಿ ಎಲ್ಲ 13 ಆರೋಪಿಗಳ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ.  

ದರ್ಶನ್‌ ಸ್ನೇಹಿತ ವಿ.ವಿನಯ್, ದರ್ಶನ್‌ ಮ್ಯಾನೇಜರ್‌ ಆರ್.ನಾಗರಾಜು, ಎಂ.ಲಕ್ಷ್ಮಣ್​, ಎಸ್​.ಪ್ರದೋಶ್​, ದೀಪಕ್​ ಕುಮಾರ್, ನಂದೀಶ್​, ಕಾರ್ತಿಕ್​, ನಿಖಿಲ್ ನಾಯಕ್​, ಕೇಶವಮೂರ್ತಿ, ರಾಘವೇಂದ್ರ ಅಲಿಯಾಸ್​ ರಾಘು ಬಂಧಿತ ಇತರೆ ಆರೋಪಿಗಳು. ಬಂಧಿತರ ಪೈಕಿ ಹೆಚ್ಚಿನವರು ದರ್ಶನ್‌ ಅವರ ಬಾಡಿಗಾರ್ಡ್‌ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ