Namo Venkatesha: ಗಟ್ಟಿಮೇಳದಲ್ಲಿ ಮೃದು ಮನಸ್ಸಿನ ಅಪ್ಪನಾಗಿದ್ದ ನಟ ರವಿಕುಮಾರ್ ಈಗ ಜಮೀನ್ದಾರ

Krishnaveni K

ಸೋಮವಾರ, 2 ಜೂನ್ 2025 (15:51 IST)
ಬೆಂಗಳೂರು: ಕೆಲವು ಸಮಯದ ಹಿಂದೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗಟ್ಟಿಮೇಳ ಧಾರವಾಹಿಯಲ್ಲಿ ಮೂವರು ಹೆಣ್ಣು ಮಕ್ಕಳ ಮೃದು ಮನಸ್ಸಿನ ಅಪ್ಪನಾಗಿ ಪಾತ್ರ ಮಾಡಿದ್ದ ನಟ ರವಿಕುಮಾರ್ ಈಗ ಖಡಕ್ ಅಪ್ಪನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

ಕನ್ನಡ ಧಾರವಾಹಿಗಳಾದ ಮನೆದೇವ್ರು, ಗಟ್ಟಿಮೇಳ, ವಧು ಇತ್ಯಾದಿ ಧಾರವಾಹಿಗಳಲ್ಲಿ ಅಪ್ಪನ ಪಾತ್ರದ ಮೂಲಕ ಮಿಂಚಿದ್ದ ರವಿಕುಮಾರ್ ಈಗ ಸ್ಯಾಂಡಲ್ ವುಡ್ ನಲ್ಲಿ ಒಂದೊಳ್ಳೆ ಪಾತ್ರದ ಮೂಲಕ ಮಿಂಚಲು ರೆಡಿಯಾಗಿದ್ದಾರೆ. ಅವರು ನಟಿಸಿರುವ ನಮೋ ವೆಂಕಟೇಶ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.

ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗದೇ ಇರುವಾಗ ಹೊಸಬರ ಚಿತ್ರಗಳು ಕನ್ನಡ ಸಿನಿ ರಸಿಕರಿಗೆ ಭರವಸೆ ಮೂಡಿಸುತ್ತಿವೆ. ಕನ್ನಡದಲ್ಲಿ ಹೊಸಬರ ಸಿನಿಮಾ ಕ್ಲಿಕ್ ಆಗುವುದಿಲ್ಲ ಎಂಬ ಮಾತಿದೆ. ಹಾಗಿದ್ದರೂ ಕೆಲವು ಗಟ್ಟಿ ಕತೆಯಿರುವ, ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸವಿಲ್ಲದಂತೆ ನೋಡಿಸುವಂತಹ ಸಿನಿಮಾಗಳು ತಕ್ಕಮಟ್ಟಿಗೆ ಸದ್ದು ಮಾಡುತ್ತವೆ.

ಇದೇ ಭರವಸೆಯೊಂದಿಗೆ ಹೊಸ ಸಿನಿಮಾವೊಂದು ತೆರೆ ಮೇಲೆ ಬರಲು ಸಿದ್ಧವಾಗಿದೆ. ಅದುವೇ ನಮೋ ವೆಂಕಟೇಶ. ಕಾಮಿಡಿ, ರೊಮ್ಯಾನ್ಸ್, ಫ್ಯಾಮಿಲಿ ಎಳೆ ಎಲ್ಲವೂ ಈ ಸಿನಿಮಾದಲ್ಲಿರಲಿದೆ. ಗಟ್ಟಿಮೇಳ ಧಾರವಾಹಿಯಲ್ಲಿ ಆರತಿ ಪಾತ್ರ ಮಾಡುತ್ತಿದ್ದ ಅನ್ವಿತಾ ಸಾಗರ್ ನಾಯಕಿಯಾಗಿದ್ದಾರೆ. ಅವರಿಗೆ ನಾಯಕನಾಗಿ ನಿರ್ದೇಶಕ ವಿಜಯ್ ಭಾರಧ್ವಾಜ್ ಅವರೇ ನಟಿಸಿದ್ದಾರೆ.

ಅನ್ವಿತಾ ತಂದೆಯ ಪಾತ್ರದಲ್ಲಿ ರವಿಕುಮಾರ್ ನಟಿಸಿದ್ದು, ಇಷ್ಟು ದಿನ ಸಿಕ್ಕಿದ್ದ ಪಾತ್ರಕ್ಕಿಂತ ಇದು ಭಿನ್ನ ಪಾತ್ರ ಎಂದಿದ್ದಾರೆ. ಇದುವರೆಗೆ ಯಾರಾದರೂ ತಂದೆಯ ಪಾತ್ರಕ್ಕೆ ಕರೆದು ಒಂದೋ ಎರಡೋ ದಿನ ಡೇಟ್ಸ್ ಕೇಳಿ ಶೂಟಿಂಗ್ ಮುಗಿಯುತ್ತಿತ್ತು. ಆದರೆ ಈ ಸಿನಿಮಾದಲ್ಲಿ ತಂದೆಯ ಪಾತ್ರಕ್ಕೂ ಒಂದು ಮಹತ್ವವಿದೆ. ಚಿತ್ರಕತೆ ಕೇಳುವಾಗ ನನಗೆ ಯಾವ ಸನ್ನಿವೇಶದಲ್ಲಿ ಅಳು ಬಂದಿತ್ತೋ ಅದೇ ಸನ್ನಿವೇಶದಲ್ಲಿ ನಟಿಸುವಾಗ ಸಹಜವಾಗಿಯೇ ಕಣ್ಣೀರು ಬಂದಿತ್ತು ಎಂದಿದ್ದಾರೆ. ಈ ಪಾತ್ರ ಮಾಡಿದ್ದರ ಬಗ್ಗೆ ಅವರಿಗೆ ಹೆಮ್ಮೆಯಿದೆ. ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ.  ಸದ್ಯದಲ್ಲೇ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ