ರಜನಿಕಾಂತ್‌ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಬಿಡುಗಡೆಗೊಂಡ ಸೂಪರ್‌ಸ್ಟಾರ್‌

Sampriya

ಶುಕ್ರವಾರ, 4 ಅಕ್ಟೋಬರ್ 2024 (14:34 IST)
Photo Courtesy X
ಚೆನ್ನೈ: ಹೃದಯ ಸಮಸ್ಯೆಯಿಂದ ಬಳಲಿ ಕೆಲ ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ನಟ ರಜನಿಕಾಂತ್ ಬುಧವಾರ ತಡರಾತ್ರಿ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿ ಮನೆ ಸೇರಿದ್ದಾರೆ.

ಸೆಪ್ಟೆಂಬರ್ 30 ರಂದು ಎದೆ ನೋವು ಕಾಣಿಸಿಕೊಂಡ ಕಾರಣ ರಜನಿಕಾಂತ್ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಸೂಕ್ತ ಚಿಕಿತ್ಸೆ ಹಾಗೂ ವಿಶ್ರಾಂತಿಯ ಬಳಿಕ ಮನೆ ಸೇರಿದ್ದಾರೆ.  

ರಜನಿಕಾಂತ್ ಅವರನ್ನು ಪರೀಕ್ಷೆಗೆ ಒಳಪಡಿಸಿದ್ದ ವೈದ್ಯರು, ಅವರ ಹೃದಯದಲ್ಲಿ ಸಮಸ್ಯೆ ಉಂಟಾಗಿರುವುದನ್ನು ಪತ್ತೆ ಹಚ್ಚಿದ್ದರು. ರಜನಿಕಾಂತ್​ರ ಹೃದಯದ ದೊಡ್ಡ ನಾಳದಲ್ಲಿ ಊತ ಬಂದಿತ್ತು. ಅದು ಹೆಚ್ಚಾಗಿ ರಕ್ತನಾಳವೇ ಒಡೆಯುವ ಅಪಾಯವಿತ್ತು, ಹಾಗಾಗಿ ಅಪೋಲೊ ಆಸ್ಪತ್ರೆ ವೈದ್ಯರು ಊದಿಕೊಂಡಿದ್ದ ರಕ್ತನಾಳಕ್ಕೆ ಸ್ಟಂಟ್ ಅಳವಡಿಸಿದ್ದರು. ಈ ಕ್ರಿಯೆಯನ್ನು ಶಸ್ತ್ರಚಿಕಿತ್ಸೆ ಇಲ್ಲದೆಯೇ ವೈದ್ಯರು ಮಾಡಿದ್ದರು.

ಸ್ಟಂಟ್ ಅಳವಡಿಕೆ ಬಳಿಕ ಐಸಿಯುನಲ್ಲಿರಿಸಿ ಅವರ ಹೃದಯದ ಕಾರ್ಯ, ಒಟ್ಟಾರೆ ದೇಹದ ಆರೋಗ್ಯದ ಮೇಲೆ ನಿಗಾವಹಿಸಿದ್ದ ವೈದ್ಯರು ಆಸ್ಪತ್ರೆಯಿಂದ ಬೀಳ್ಕೊಟ್ಟಿದ್ದಾರೆ.  ರಜನಿಕಾಂತ್ ಪ್ರಸ್ತುತ ಕೂಲಿ ಸಿನಿಮಾದಲ್ಲಿ ನಟಿಸುತ್ತಿದ್ದು, ಮತ್ತೆ ಚಿತ್ರೀಕರಣಕ್ಕೆ ಬರಲು ತುಸು ಹೆಚ್ಚು ದಿನಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ರಜನಿಕಾಂತ್​ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಬಳಿಕ ಅಭಿಮಾನಿಗಳು ಆತಂಕಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರೂ ರಜನಿಕಾಂತ್​ರ ಪತ್ನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು

ರಜನೀಕಾಂತ್ ನಟನೆಯ ವೇಟ್ಟೈಯಾನ್ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಜನಿಕಾಂತ್‌ ಜೊತೆಗೆ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ ಇನ್ನೂ ಕೆಲವು ಸ್ಟಾರ್ ನಟರು ನಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ